ಪ್ರೀತಿಯ ಬೆಸುಗೆಗೈದ ಕಬಡ್ಡಿ

0

ಪ್ರಿಯಕರನೊಂದಿಗೆ ಆತನ ಮನೆಗೆ ಹೋದ ಯುವತಿ‌

ಪೋಲೀಸ್ ಠಾಣೆಯಲ್ಲಿ ಮಾತುಕತೆ : ಮದುವೆ ನಿರ್ಧಾರ

ಮನೆಯವರ ಕಣ್ಣು ತಪ್ಪಿಸಿ ಪ್ರಿಯಕರನೊಂದಿಗೆ ಆತನ ಮನೆಗೆ ಹೋದ ಯುವತಿ ತಾಳಿ ಕಟ್ಟಿಸಿಕೊಂಡು ಪೋಲೀಸ್ ಠಾಣೆಗೆ ಹೋದ ಹಾಗೂ ಅಲ್ಲಿ ಇತ್ತಂಡದವರಿದ್ದು ಮಾತುಕತೆ ನಡೆದಾಗ ತಾನು ಪ್ರೀತಿಸಿದ ಹುಡುಗನ ಜತೆಗೇ ಹೋಗುವುದಾಗಿ ಆಕೆ ದೃಢವಾಗಿ ಹೇಳಿದ ಕಾರಣ ಆಕೆಯನ್ನು ಆತನ ಮನೆಗೆ ಕಳುಹಿಸಿಕೊಡಲಾದ ಘಟನೆ ನಿನ್ನೆ ಸಂಜೆ ನಡೆದಿದೆ.

ಮರ್ಕಂಜ ಗ್ರಾಮದ ಯುವತಿಯ ತಂದೆ ಸ್ಥಳೀಯ ಶಾಲೆಯೊಂದರಲ್ಲಿ‌ ನಡೆದ‌ ಅಷ್ಟಮಿ ಕಾರ್ಯಕ್ರಮಕ್ಕೆ ಹೋಗಿದ್ದರು. ಮನೆಯಲ್ಲಿ‌ ತಾಯಿ ಮತ್ತು ಅಜ್ಜಿ ಇದ್ದರು. ಸಂಜೆ ವೇಳೆಗೆ ಮಗಳು ಧನ್ಯ ಇಲ್ಲದಿರುವುದನ್ನು ಗಮನಿಸಿದ ಮನೆಯವರು ಹುಡುಕಾಡಿದರೆಂದೂ, ಆ ಸಂದರ್ಭದಲ್ಲಿ ಯುವತಿ ಯುವಕನೊಬ್ಬನೊಂದಿಗೆ ಬೈಕಲ್ಲಿ ಹೋಗುತ್ತಿರುವುದನ್ನು‌ ನೋಡಿರುವುದಾಗಿ ಸ್ಥಳೀಯರೊಬ್ಬರು‌ ಹೇಳಿದರೆಂದೂ ಹೇಳಲಾಗಿದೆ.

ಸುಳ್ಯದ ನಾಗಪಟ್ಟಣದ ಭರತ್ ಎಂಬ ಯುವಕನೊಂದಿಗೆ ಆಕೆ ಬೈಕಿನಲ್ಲಿ‌ ಹೋಗುವಾಗಲೇ ಉಬರಡ್ಕದಲ್ಲಿ ದೈವದ ಕಟ್ಟೆಯೊಂದರಲ್ಲಿ ಅವರಿಬ್ಬರೂ ತಾಳಿ ಕಟ್ಟಿಕೊಂಡರೆನ್ನಲಾಗಿದೆ. ಬಳಿಕ ನಾಗಪಟ್ಟಣದಲ್ಲಿರುವ ಹುಡುಗನ ಮನೆಗೆ‌ ಹೋದ ಅವರನ್ನು ಮನೆಯವರೇ ಪೋಲೀಸ್‌ ಠಾಣೆಗೆ ಕರೆದುಕೊಂದು ಹೋದರೆನ್ನಲಾಗಿದೆ.‌
ಇದೇ ಸಂದರ್ಭ ಯುವತಿಯ ಮನೆಯವರೂ ಪೋಲೀಸ್‌ ಠಾಣೆಗೆ ತಲುಪಿದ್ದರು. ಬಳಿಕ ಮಾತುಕತೆ ನಡೆದಾಗ ಯುವತಿ ಪ್ರಿಯಕರನೊಂದಿಗೆ ತಾಳಿ ಕಟ್ಟಿಸಿಕೊಂಡಿರುವ ಕಾರಣ ಮತ್ತು ಅವನ ಮನೆಗೇ ಹೋಗುವುದಾಗಿ ಆಕೆ ದೃಢವಾಗಿ ಹೇಳಿದ‌ ಕಾರಣ ಆತನ ಜತೆಗೆ ಆಕೆಯನ್ನು ಕಳುಹಿಸಿಕೊಡಲಾಯಿತೆಂದು ತಿಳಿದುಬಂದಿದೆ.
ಭರತ್ ಕಬಡ್ಡಿ ಪಟುವಾಗಿದ್ದು, ಧನ್ಯ ಕೂಡ ಕಾಲೇಜ್ ವಿದ್ಯಾರ್ಥಿನಿಯಾಗಿ ಕಬಡ್ಡಿ ಪಂದ್ಯಾಟಗಳಲ್ಲಿ ಭಾಗಿಯಾಗುತ್ತಿದ್ದುದರಿಂದ ಆ ಸಂದರ್ಭದಲ್ಲಿ ಇವರ ಮಧ್ಯೆ ಪರಿಚಯ ಬೆಳೆದು ಪ್ರೀತಿ ಆರಂಭವಾಗಿತ್ತೆನ್ನಲಾಗಿದೆ.