ಮರ್ಕಂಜ : ಪ್ರೌಢಶಾಲೆಯಲ್ಲಿ ಕೆವಿಜಿ ಸಂಸ್ಮರಣೆ ಕಾರ್ಯಕ್ರಮ

0

ಸರಕಾರಿ ಪ್ರೌಢಶಾಲೆ ಮರ್ಕಂಜದಲ್ಲಿ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ ಸುಳ್ಯ ಇದರ ವತಿಯಿಂದ ಸುಳ್ಯದ ಅಮರಶಿಲ್ಪಿ ಡಾ|| ಕುರಂಜಿ ವೆಂಕಟ್ರಮಣ ಗೌಡರ 95 ನೇ ಹುಟ್ಟುಹಬ್ಬದ ಸವಿನೆನಪಿಗಾಗಿ ಕೆ. ವಿ .ಜಿ ಸಾಧನೆ ಸಂಸ್ಮರಣೆ ಕಾರ್ಯಕ್ರಮವನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಆನಂದ ಬಾಣೂರು ಇವರ ಅಧ್ಯಕ್ಷತೆಯಲ್ಲಿ ಡಿ.16ರಂದು ನಡೆಯಿತು.

ಕಾರ್ಯಕ್ರಮದ ಸಂಘಟಕರಾದ ಹೊನ್ನಪ್ಪ ಅಡ್ತಲೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮದ ಉದ್ದೇಶದ ಬಗ್ಗೆ ಮಾತನಾಡಿದರು. ಕೆವಿಜಿ ಸಾಧನೆ ಸಂಸ್ಮರಣೆ ಕಾರ್ಯಕ್ರಮದ ಅಂಗವಾಗಿ ನಡೆದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಕುಮಾರಿ ಶಿಷ್ಮ ಡಿ ಎಲ್ ಕೆವಿಜಿ ಯವರ ಸಾಧನೆಗಳ ಬಗ್ಗೆ ಮಾತನಾಡಿದಳು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಇಲ್ಲಿನ ಹಿಂದಿ ಶಿಕ್ಷಕ ಕಿಶೋರ್ ಕುಮಾರ್ ರವರು ಕೆವಿಜಿ ಯವರ ಜೀವನದ ಯಶೋಗಾಥೆ ಮತ್ತು ಅವರ ಜೀವನದ ಸಾಧನೆಗಳ ಸಂಪೂರ್ಣ ಚಿತ್ರಣ ತೆರೆದಿಟ್ಟರು.

ಕೆವಿಜಿ ಸಾಧನೆ ಸಂಸ್ಮರಣೆ ಅಂಗವಾಗಿ ಶಾಲೆಯಲ್ಲಿ ನಡೆದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ನಂತರ ಕಾರ್ಯಕ್ರಮದ ಸಂಘಟಕರು ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಹಸ್ತಾಂತರಿಸಿದರು. ಶಿಕ್ಷಕಿ ಪ್ರವೀಣಕುಮಾರಿ ಸ್ವಾಗತಿಸಿ, ಮುಖ್ಯ ಶಿಕ್ಷಕರಾದ ವೀಣಾ ಎಂ. ಟಿ ಇವರು ವಂದನಾರ್ಪಣೆಗೈದರು. ಶಿಕ್ಷಕಿ ವಿಜಯಲಕ್ಷ್ಮಿ ಎಂ ಕಾರ್ಯಕ್ರಮ ನಿರೂಪಿಸಿದರು.