ಆಲೆಟ್ಟಿ :ಕತ್ತಿಯಿಂದ ಹಲ್ಲೆಗೊಳಗಾಗಿ 12 ಗಂಟೆಯ ಬಳಿಕ ಆಸ್ಪತ್ರೆ ಸೇರಿದ ದಂಪತಿ

0

ಆಲೆಟ್ಟಿ ಗ್ರಾಮದ ಕುಡೆಂಬಿ ಎಂಬಲ್ಲಿ ನಿನ್ನೆ ರಾತ್ರಿ ನಡೆದ ಎರಡು ಮನೆಯವರ ಜಗಳಕ್ಕೆ ಸಂಬಂಧಿಸಿ ಕತ್ತಿಯಿಂದ ಹಲ್ಲೆಗೊಳಗಾಗಿದ್ದ ವೃದ್ದ ದಂಪತಿಗಳು 12 ಗಂಟೆಯ ಬಳಿಕ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ಇಂದು ನಡೆದಿದೆ.

ಕುಡೆಂಬಿಯಲ್ಲಿ ನಿನ್ನೆ ತಡ ರಾತ್ರಿ ಎರಡು ಅಕ್ಕ ಪಕ್ಕದ ಮನೆಯವರು ಪರಸ್ಪರ ಹೊಡೆದಾಡಿಕೊಂಡು ಇಬ್ಬರೂ ಕೂಡ ಕತ್ತಿಯಿಂದ ಹಲ್ಲೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಅದರಲ್ಲಿ ಕಮಲಾಕ್ಷ ಎಂಬವರು ನಿನ್ನೆ ರಾತ್ರಿಯೇ ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದು, ಮತ್ತೊಂದು ಭಾಗದಲ್ಲಿ ಕಮಲಾಕ್ಷ ನಾಯ್ಕ್ ರಿಂದ ಹಲ್ಲೆಗೊಳಗಾಗಿದ್ದ ವೃದ್ಧ ದಂಪತಿಗಳು ರಾಮಣ್ಣ ನಾಯ್ಕ್ ಮತ್ತು ಅವರ ಪತ್ನಿ ಆಸ್ಪತ್ರೆಗೆ ದಾಖಲಾಗಲು ಸಾಧ್ಯವಾಗದೆ ರಾತ್ರಿ ಇಡೀ ನೋವಿನಿಂದ ನರಳಿದ್ದಾರೆ ಎನ್ನಲಾಗಿದೆ.
ರಾಮಣ್ಣ ನಾಯ್ಕ್ ರಿಗೆ ಗಾಯದಿಂದ ಎದ್ದೇಳಲು ಸಾಧ್ಯವಾಗದೇ ಅಲ್ಲೇ ಮಲಗಿದ್ದಲ್ಲಿಯೇ ಇದ್ದು, ಸ್ಥಳೀಯರಿಂದ ಸಹಾಯದ ಯಾಚನೆ ಮಾಡಿ ಫಲಿಸದಿದ್ದಾಗ ಇಂದು ಬೆಳಿಗ್ಗೆ ಅವರ ಮನೆಯಿಂದ ಸುಮಾರು ಅರ್ಧ ಕಿಲೋಮೀಟರ್ ದೂರ ಬಂದ ರಾಮಣ್ಣ ನಾಯ್ಕ್ ರ ಪತ್ನಿ ಅಲ್ಲಿದ್ದವರ ಬಳಿ ಸಹಾಯವನ್ನು ಕೇಳಿದ್ದು, ಅವರು 108 ಕ್ಕೆ ಕರೆ ಮಾಡಿ ಮಾಹಿತಿ ನೀಡಿದ ಬಳಿಕ ಆಂಬುಲೆನ್ಸ್ ವಾಹನ ಬಂದು ಅವರನ್ನು ಸುಳ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.