ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ವರ್ಷಾವಧಿ ಜಾತ್ರೋತ್ಸವ ಆರಂಭ

0

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪ್ರತಿಷ್ಠಾ ದಿನ ಹಾಗೂ ವರ್ಷಾವಧಿ ಜಾತ್ರೋತ್ಸವವು ಕಾರ್ತಿಕೇಯನ ಸನ್ನಿಧಿಗೆ ಹಸಿರುವಾಣಿ ಸಮರ್ಪಣೆ ಮಾಡುವುದರ ಮೂಲಕ ಆರಂಭಗೊಂಡಿತು.

ಫೆ.18ರಂದು ಬೆಳಿಗ್ಗೆ ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದ, ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಭಜನಾ ಮಂದಿರ, ಸೋಣಂಗೇರಿಯ ಶ್ರೀಕೃಷ್ಣ ಭಜನಾ ಮಂದಿರ, ಪೈಚಾರು, ಬೊಳುಬೈಲು, ಪೇರಾಲು ಅಂಬ್ರೋಟಿ ಶ್ರೀರಾಮ ಭಜನಾ ಮಂದಿರದಿಂದ ವಿವಿಧ ವಾಹನಗಳ ಮೂಲಕ ಹಸಿರುವಾಣಿ ಮೆರವಣಿಗೆಯು ಸಾಗಿ ಬಂದು ಭಕ್ತಾದಿಗಳ ಸಮ್ಮುಖದಲ್ಲಿ ಶ್ರೀ ದೇವರಿಗೆ ಹಸಿರುವಾಣಿ ಸಮರ್ಪಣೆಗೊಂಡಿತು.


ಬಳಿಕ ಪ್ರಧಾನ ಅರ್ಚಕರಾದ ಶ್ರೀವರ ಪಾಂಗಣ್ಣಾಯರ ನೇತೃತ್ವದಲ್ಲಿ ಪೂಜೆ ನಡೆಯಿತು.

ಬೆಳಿಗ್ಗೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಸನ್ನಿಧಿಯಲ್ಲಿ ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ನಡೆಯುತ್ತಿದ್ದು, ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಅನ್ನಸಂತರ್ಪಣೆ ಜರುಗಲಿದೆ.

ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ವಿನೋಬನಗರದ ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ತುಳುನಾಡ ವೈಭವ, ಮೈಸೂರಿನ ಶ್ರೀ ಗುರುದೇವ ಲಲಿತಕಲಾ ಅಕಾಡೆಮಿಯ ಡಾ . ಚೇತನ ರಾಧಾಕೃಷ್ಣ ಮೂರ್ಜೆ ಅವರಿಂದ ಶಾಸ್ತ್ರೀಯ ನೃತ್ಯ ವೈಭವ ಜರುಗಲಿದೆ.