ನೆಲ್ಲೂರು ಕೆಮ್ರಾಜೆ ಸೊಸೈಟಿ ನಿರ್ದೇಶಕ ದಿ| ಮಾಧವ ಗೌಡ ಸುಳ್ಳಿಯವರಿಗೆ ಸೊಸೈಟಿ ವತಿಯಿಂದ ಶ್ರದ್ಧಾಂಜಲಿ ಸಭೆ

0

ತನ್ನ ಪರಿಶ್ರಮದಿಂದಲೇ ಹೆಸರು ಗಳಿಸಿದ, ಉತ್ತಮ ನಿರ್ದೇಶಕರೊಬ್ಬರನ್ನು ಕಳೆದುಕೊಂಡಿದ್ದೇವೆ : ವಿಷ್ಣು ಭಟ್ ಮೂಲೆತೋಟ

ಸ್ಥಾನಮಾನ ಬಯಸದೇ ಪರದೆಯ ಹಿಂದೆ ಪ್ರಾಮಾಣಿಕ ಕೆಲಸ ಮಾಡಿದವರು ಮಾಧವಣ್ಣ : ಹರೀಶ್ ಕಂಜಿಪಿಲಿ

ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಮಾಧವ ಗೌಡ ಸುಳ್ಳಿ ಎಂಬವರು ಜು.8ರಂದು ನಿಧನರಾಗಿದ್ದು, ಮೃತರಿಗೆ ನೆಲ್ಲೂರು ಕೆಮ್ರಾಜೆ ಸೊಸೈಟಿ ವತಿಯಿಂದ ಶ್ರದ್ಧಾಂಜಲಿ ಸಭೆಯು ಇಂದು ನಡೆಯಿತು.

ಈ ಸಂದರ್ಭದಲ್ಲಿ ಅಗಲಿದ ಮಾಧವ ಗೌಡರವರಿಗೆ ಮೌನ ಪ್ರಾರ್ಥನೆ ಸಲ್ಲಿಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ಬಳಿಕ ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟರವರು ಮಾತನಾಡಿ “ನಮ್ಮನ್ನು ಅಗಲಿದ ಮಾಧವಣ್ಣ ಎಲ್ಲರಿಗೂ ಬೇಕಾದ ವ್ಯಕ್ತಿ. ಅವರ ಶರೀರ ದೊಡ್ಡದಾಗಿದ್ದರೂ ಮಗುವಿನಂತಹ ಮನಸ್ಸು ಅವರದ್ದು. 30-40 ವರ್ಷ ಸಾಮಾಜಿಕವಾಗಿ ಸೇವೆ ಸಲ್ಲಿಸಿದ್ದರೂ ಯಾವುದೇ ಸ್ಥಾನಮಾನಕ್ಕೆ ಅಪೇಕ್ಷೆ ಪಟ್ಟವರಲ್ಲ. ನಮ್ಮ ಸಂಘದಲ್ಲಿ ಭಿನ್ನಾಭಿಪ್ರಾಯ ಎದ್ದಾಗ ಮತ್ತು ಒಮ್ಮೆ ನನ್ನ ಮೇಲೆ ದಾಳಿ ನಡೆಯಬಹುದಾದ ಸಂದರ್ಭ ಎದುರಾದಾಗ ನನ್ನೊಂದಿಗೆ ಇದ್ದವರು ಮಾಧವರವರು. ನಮ್ಮ ಸಂಘದಲ್ಲಿ ನಿರ್ದೇಶಕಾಗಿ ಆಯ್ಕೆಯಾದ ತೃಪ್ತಿ ಅವರಲ್ಲಿತ್ತು. ಒಬ್ಬ ಉತ್ತಮ ನಿಷ್ಠಾವಂತ ನಿರ್ದೇಶಕನನ್ನು ನಾವು ಕಳೆದುಕೊಂಡಿದ್ದೇವೆ ಎನ್ನುವ ಬೇಸರ ನಮ್ಮನ್ನು ಕಾಡುತ್ತಿದೆ. ಅವರ ಅಗಲಿಕೆಯಿಂದ ಕುಟುಂಬಕ್ಕೆ ಎದುರಾಗಬಹುದಾದ ಸವಾಲುಗಳನ್ನು ಎದುರಿಸುವ ಶಕ್ತಿ ಭಗವಂತ ನೀಡಲಿ” ಎಂದರು.

ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಹರೀಶ್ ಕಂಜಿಪಿಲಿಯವರು ಮಾತನಾಡಿ “ಮಾಧವಣ್ಣ ಪರದೆಯ ಹಿಂದೆ ಪ್ರಾಮಾಣಿಕವಾಗಿ ಕೆಲಸ ಮಾಡಿದವರು. ಬಿಜೆಪಿ ಮತ್ತು ಆರ್ ಎಸ್ ಎಸ್ ಕಷ್ಟದ ದಿನಗಳಲ್ಲಿ, ಹೋರಾಟದ ಸಂದರ್ಭದಲ್ಲಿ ಇದ್ದಾಗ ಗ್ರಾಮ ಮಟ್ಟದಲ್ಲಿ ತಳಮಟ್ಟಕ್ಕೆ ಇಳಿದು ಕೆಲಸ ಸಂಘಟಿಸಿದವರು. ಕಾವೂರು ದೇವಸ್ಥಾನ, ತೋಟಚಾಚಡಿ ದೈವಸ್ಥಾನದ ಜೀರ್ಣೋದ್ಧಾರದ ಸಂದರ್ಭ ಅವರು ಮಾಡಿದ ಕೆಲಸ ಈಗಲೂ ಕಣ್ಣ ಮುಂದೆ ಬರುತ್ತದೆ. ಅವರಿಗೆ ಪಾರ್ಟಿ ಸಂಘಟನೆಯಲ್ಲಿ ದೊಡ್ಡ ಹುದ್ದೆ ಬೇಕಿತ್ತು. ಅವರು‌ ಅದ್ಯಾವದನ್ನೂ ನಿರೀಕ್ಷೆ ಮಾಡದೇ ದುಡಿದವರು. ಅಂಗಾರರು ಶಾಸಕರಾಗುವ ಸಂದರ್ಭದಲ್ಲಿ ಯೂ ದುಡಿದವರು. ಇಂತಹ ವಿನಯ ಮತ್ತು ನಿಷ್ಠಾವಂತರು ಸಿಗುವುದು ಅಪರೂಪ” ಎಂದರು.

ಮಾಜಿ ಅಧ್ಯಕ್ಷ ಹಾಗೂ‌ ಹಾಲಿ ನಿರ್ದೇಶಕ ಉಮೇಶ್ ಪ್ರಭು ಮಾತನಾಡಿ “ಆಯೋಧ್ಯೆಯಲ್ಲಿ ನಡೆದ ಕರಸೇವೆಯಲ್ಲಿ ಮೊದಲ ಬ್ಯಾಚ್ ನಲ್ಲಿ ತೆರಳಿದವರು” ಎಂದು ತನ್ನ ಬಾಳ್ಯದ ದಿನಗಳನ್ನು ನೆನಪಿಸಿಕೊಂಡರು.

ದೇವಚಳ್ಳ ಗ್ರಾ.ಪಂ. ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಮಾತನಾಡಿ “ಎಲಿಮಲೆ ಹೈಸ್ಕೂಲ್ ಆರಂಭವಾಗಲು ಕಾರಣಕರ್ತರಾದವರಲ್ಲಿ ಮಾಧವ ಸುಳ್ಳಿಯವರು ಒಬ್ಬರು. ಸಾಮಾಜಿಕವಾಗಿ ದುಡಿದ ಅವರಿಗೆ ಅಂದೇ ಸ್ಥಾನಮಾನ ದೊರೆಯಬೇಕಿತ್ತು.‌ ಮಾಧವರವರು ಮತ್ತೆ ಹುಟ್ಟಿ ಬರಲಿ” ಎಂದರು.

ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗನ್ನಾಥ ಶೆಟ್ಟಿ ಉಬರಡ್ಕರವರು ಮಾಧವರವರ ಒಡನಾಟದ ಬಗ್ಗೆ ಮಾತನಾಡಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಜಯಪ್ರಸಾದ್ ಸುಳ್ಳಿ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ್ ಎನ್ . ‌ನಿರೂಪಿಸಿದರು.

ಸಭೆಯಲ್ಲಿ ನಿರ್ದೇಶಕರುಗಳಾದ ಶುಭಾಕರ ನಾಯಕ್ ಬೊಳ್ಳಾಜೆ, ದೇವಿಪ್ರಸಾದ್ ಸುಳ್ಳಿ, ಸತ್ಯೇಶ್ ಚಂದ್ರೋಡಿ, ಚಂದ್ರ ದಾಸನಕಜೆ, ಹರೀಶ್ ಸುಳ್ಳಿ, ಸಂಧ್ಯಾ ಪುನುಕುಟ್ಟಿ, ನೆಲ್ಲೂರು ಕೆಮ್ರಾಜೆ ಗ್ರಾ.ಪಂ.ಸದಸ್ಯರಾದ ರಾಮಚಂದ್ರ ಪ್ರಭು, ವೇಣುಗೋಪಾಲ ಪುನುಕುಟ್ಟಿ, ಎಲಿಮಲೆ ಪ್ರೌಢಶಾಲಾ ಶಿಕ್ಷಕ ಮುರಳೀಧರ ಪುನುಕುಟ್ಟಿ, ಉಪನ್ಯಾಸಕ ಕಿರಣ್ ಗುಡ್ಡೆಮನೆ, ಪ್ರಮುಖರಾದ ಸೋಮಶೇಖರ ಕೇಪುಳಕಜೆ, ಹೇಮನಾಥ ಕೋಡ್ತುಗುಳಿ, ಉದಯ ಟೈಲರ್, ಶಂಕರನಾರಾಯಣ ಸುಳ್ಳಿ, ಗೌರಿಶಂಕರ ನಾರ್ಣಕಜೆ, ಪದ್ಮನಾಭ ಎಸ್.ಎನ್., ಪುರುಷೋತ್ತಮ ಸುಳ್ಳಿ, ಸುಧಾಕರ ನಾರ್ಣಕಜೆ, ಚನಿಯಪ್ಪ ಚೆನ್ನಡ್ಕ, ಕುಮಾರ್ ಹೆಚ್.ಬಿ. ಮತ್ತಿತರರಿದ್ದರು.

.