ಸುಳ್ಯ ದಸರಾ 2024 – ಶ್ರೀ ಶಾರದಾಂಬ ಮಹಿಳಾ ಸಮಿತಿ ಸಭೆ

0

ದಸರಾ ಕ್ರೀಡಾಕೂಟ ಹಾಗೂ ಒಂಭತ್ತು ದಿನಗಳ ಕಾರ್ಯಕ್ರಮದ ಯಶಸ್ಸಿನ ಕುರಿತು ಚರ್ಚೆ

ಸುಳ್ಯ ದಸರಾ ಉತ್ಸವದ ಪೂರ್ವಭಾವಿಯಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಶ್ರೀ ಶಾರದಾಂಬ ಮಹಿಳಾ ಸಮಿತಿಯ ಸಭೆಯು ಜು.21ರಂದು ಸುಳ್ಯದ ಬೂಡು ಶ್ರೀ ಭಗವತಿ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ ಅವರು ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಸಮಿತಿಗೆ ಮಹಿಳಾ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಸಭೆಯಲ್ಲಿ ಜು.28ರಂದು ನಡೆಯಲಿರುವ ಕ್ರೀಡಾ ದಸರಾದ ಅಂಗವಾಗಿ ನಡೆಯುವ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಮಹಿಳಾ ಸಮಿತಿ ತೊಡಗಿಸಿಕೊಳ್ಳುವುದು ಮತ್ತು ಮುಂದಿನ ದಸರಾ ಕಾರ್ಯಕ್ರಮದಲ್ಲಿ ಒಂದು ದಿನ ಮಹಿಳಾ ಮತ್ತು ಮಕ್ಕಳ ದಸರಾ ಕಾರ್ಯಕ್ರಮ ಹಮ್ಮಿಕೊಳ್ಳುವುದು ಮತ್ತು 9 ದಿನಗಳ ವಿಜೃಂಭಣೆಯ ದಸರಾ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡುವ ಬಗ್ಗೆ ಚರ್ಚಿಸಲಾಯಿತು.
ಶಾರದಾಂಬ ಸೇವಾ ಸಮಿತಿಯ ಉಪಾಧ್ಯಕ್ಷೆ ಶ್ರೀಮತಿ ಯಶೋದಾ ರಾಮಚಂದ್ರ ಮಾತನಾಡಿ ಮಹಿಳಾ ಸಮಿತಿಯ ಸದಸ್ಯರು ಎಲ್ಲಾ ಒಂದೇ ಮನಸ್ಸಿನ ಭಾವನೆಯಿಂದ ತಮಗೆ ದೊರೆತ ಅವಕಾಶವನ್ನು ಸುಳ್ಯ ದಸರಾದಲ್ಲಿ ಸದುಪಯೋಗ ಪಡಿಸಿಕೊಂಡು ಶೃದ್ದಾ ಭಕ್ತಿಯಿಂದ ಕೈ ಜೋಡಿಸಿ ಶ್ರೀ ಶಾರದಾ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಶಾರದಾಂಬಾ ಉತ್ಸವ ಸಮಿತಿಯ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಖಜಾಂಜಿ ಗಣೇಶ್ ಆಳ್ವ, ಶಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ, ಗೌರವಾಧ್ಯಕ್ಷ ಗೋಕುಲ್ ದಾಸ್ ಸುಳ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾರದಾಂಬ ಸಮೂಹ ಸಮಿತಿಯ ಪದಾಧಿಕಾರಿಗಳು, ಮಹಿಳಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ದಸರಾ ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ ಕಾರ್ಯಕ್ರಮ ನಿರೂಪಿಸಿ, ಶಾರದಾಂಬ ಸೇವಾ ಸಮಿತಿಯ ಉಪಾಧ್ಯಕ್ಷೆ ಶ್ರೀಮತಿ ಲತಾ ಮಧುಸೂಧನ್ ವಂದಿಸಿದರು.