ಮಳೆ ಕಾರಣ : ದೇರಾಜೆ ಸ.ಕಿ.ಪ್ರಾ.ಶಾಲಾ ಮೇಲ್ಛಾವಣಿ ಕುಸಿಯುವ ಭೀತಿ : ವಿದ್ಯಾರ್ಥಿಗಳಿಗೆ ದೇವಸ್ಥಾನದ ಕಟ್ಟಡದಲ್ಲಿ ಪಾಠ

0

ಭಾರೀ ಮಳೆಯ ಪರಿಣಾಮ ಐವರ್ನಾಡು ಗ್ರಾಮದ ದೇರಾಜೆ ಸ.ಕಿ.ಪ್ರಾ.ಶಾಲಾ ಕಟ್ಟಡದ ಮೇಲ್ಛಾವಣಿ ಶಿಥಿಲಗೊಂಡಿದ್ದು ಮಳೆ ನೀರು ಒಳಗೆ ಬೀಳುತ್ತಿರುವುದರಿಂದ ವಿದ್ಯಾರ್ಥಿಗಳನ್ನು ಪಕ್ಕದಲ್ಲೇ ಇರುವ ಪಂಚಲಿಂಗೇಶ್ವರ ದೇವಸ್ಥಾನದ ಕಟ್ಟಡಕ್ಕೆ ಆ.05 ರಂದು ಸ್ಥಳಾಂತರಿಸಿ, ಅಲ್ಲಿ ಪಾಠ ಮಾಡಲಾಗುತ್ತಿದೆ.

ದೇರಾಜೆ ಶಾಲಾ ಕಟ್ಟಡ ಹಳೆಯದಾಗಿದ್ದು ಪಕ್ಕಾಸುಗಳು ಶಿಥಿಲವಾಗಿದೆ. ಹಂಚುಗಳು ಅಲ್ಲಲ್ಲಿ ಒಡೆದು ಹೋಗಿ ಮಳೆ ನೀರು ತರಗತಿಯೊಳಗೆ ಬೀಳುತ್ತಿದೆ. ಆದ್ದರಿಂದ ಇದೀಗ ಮಕ್ಕಳನ್ನು ದೇವಸ್ಥಾನ ಕಟ್ಟಡಕ್ಕೆ ಸ್ಥಳಾಂತರಿಸಿ, ಅಲ್ಲಿ ಪಾಠ ಮಾಡಲಾಗುತ್ತಿದೆ.

ಇಲ್ಲಿ 5 ನೇ ತರಗತಿವರೆಗೆ ಇದ್ದು ಒಟ್ಟು 12 ಮಂದಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಶಿಕ್ಷಣ ಇಲಾಖೆಯ ಅಧಿಕಾರಿಗಳು, ಪಂಚಾಯತ್ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವುದಾಗಿ ತಿಳಿದು ಬಂದಿದೆ.