ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ 2024-25ನೇ ಬ್ಯಾಚಿನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

0

ಡಾ. ಕುರುಂಜಿಯವರ ದೂರದೃಷ್ಟಿತ್ವದ ಫಲವಾಗಿ ಸುಳ್ಯದಲ್ಲಿ ಕೆ.ವಿ.ಜಿ ವಿದ್ಯಾಸಂಸ್ಥೆಗಳು ಬೆಳೆದು ಬಂದಿದೆ – ಡಾ. ಕೆ.ಇ. ಪ್ರಕಾಶ್

ಡಾ. ಕುರುಂಜಿಯವರ ದೂರದೃಷ್ಟಿತ್ವದ ಫಲವಾಗಿ ಸುಳ್ಯದಂತ ಗ್ರಾಮೀಣ ಪ್ರದೇಶ ಇಂದು ಶೈಕ್ಷಣಿಕವಾಗಿ ಗುರುತಿಸಿಕೊಂಡಿದೆ. ಎಲ್.ಕೆ.ಜಿ.ಯಿಂದ ಇಂಜಿನಿಯರಿಂಗ್, ಡೆಂಟಲ್, ಮೆಡಿಕಲ್ ಕಾಲೇಜು ತನಕ ಸುಳ್ಯದಲ್ಲಿ ಸ್ಥಾಪಿಸಿ ಬೆಳೆಸಿದವರು ಡಾ. ಕುರುಂಜಿಯವರು. ಅವರ ಸುಪುತ್ರರಾದ ಡಾ. ರೇಣುಕಾಪ್ರಸಾದ್ ರವರು ಬೆಳಿಗ್ಗೆಯಿಂದ ಸಂಜೆ ತನಕ ಕ್ಯಾಂಪಸ್ ನಲ್ಲೇ ಇದ್ದು, ತಮ್ಮ ಪೂರ್ಣ ಪ್ರಯತ್ನಯಿಂದ ವಿವಿಧ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಈಗ ಮೌರ್ಯ ಆರ್. ಪ್ರಸಾದ್ ರವರು ಕೂಡ ತಮ್ಮ ತಾತ ಮತ್ತು ತಂದೆಯ ಹಾಗೆ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುವ ಜ್ಞಾನವನ್ನು, ಸಾಮರ್ಥವನ್ನು ಹೊಂದಿದ್ದಾರೆ.

ವಿಟಿಯು ಎಕ್ಸಿಕ್ಯುಟಿವ್ ಕೌನ್ಸಿಲ್ ಮೆಂಬರ್ ಮತ್ತು ಕಾಲೇಜಿನ ಸಿಇಒ ಡಾ. ಉಜ್ವಲ್ ಯು.ಜೆ ರವರ ವಿಶೇಷ ಪರಿಶ್ರಮದಿಂದ ಅವರು ಸಿಇಒ ಆಗಿರುವ ಎಲ್ಲಾ ಸಂಸ್ಥೆಗಳಿಗೆ ಆಧುನಿಕ ಸ್ಪರ್ಶ ನೀಡಿದ್ದಾರೆ. ಬೇರೆ ಕಾಲೇಜುಗಳಿಗೆ ಹೋಲಿಸಿದರೆ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು ಹಲವು ರ್ಯಾಂಕ್ ಗಳನ್ನು ಪಡೆಯುತ್ತಿರುವುದು ಈ ಸಂಸ್ಥೆಯ ವಿಶೇಷ ಸಾಧನೆ. ಇಂತ ಸಂಸ್ಥೆಯನ್ನು ಆಯ್ಕೆ ಮಾಡಿದ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗ್ಯವಂತರು ಎಂದು ಮಂಗಳೂರಿನ ಶ್ರೀದೇವಿ ಇನ್ಸ್ಟಿಟ್ಯೂಷನ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲರಾದ ಡಾ. ಕೆ.ಇ. ಪ್ರಕಾಶ್ ಹೇಳಿದರು. ಅವರು ಸೆ. 11ರಂದು ಅಮರಶ್ರೀಭಾಗ್ ನ ಡಾ. ಕುರುಂಜಿ ವೆಂಕಟ್ರಮಣ ಗೌಡ ಸಮುದಾಯ ಭವನದಲ್ಲಿ ನಡೆದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ 2024-25ನೇ ಬ್ಯಾಚ್ ನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಮೆಂಬರ್ ಮೌರ್ಯ ಆರ್. ಪ್ರಸಾದ್ ಮಾತನಾಡಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡುವುದು ಡಾ. ಕುರುಂಜಿಯವರ ಕನಸ್ಸಾಗಿತ್ತು. ನೀವು ಶ್ರಮಪಟ್ಟು ಓದಿದರೆ ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯ. ನಿಮಗೂ ಜವಾಬ್ದಾರಿ ಇದೆ. ಉತ್ತಮ ರೀತಿಯಲ್ಲಿ ಕಲಿತು ನಿಮ್ಮ ಸ್ವಂತ ಕಾಲಿನಲ್ಲಿ ನೀವು ನಿಲ್ಲಬೇಕು. ನಮ್ಮಲ್ಲಿ ಪಿ.ಹೆಚ್.ಡಿ. ಪದವಿ ಪಡೆದಿರುವ ಉತ್ತಮ ಉಪನ್ಯಾಸಕರ ತಂಡ ಇದೆ. ಸುಸಜ್ಜಿತ ಲ್ಯಾಬೋರೇಟರಿ, ಕಲಿಕಾ ಸೌಲಭ್ಯಗಳಿವೆ. ನಿಮಗೆ ದೊರೆತಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಸಂಸ್ಥೆಯ ಸಿಇಒ ಡಾ. ಉಜ್ವಲ್ ಯು.ಜೆ. ಶ್ರಮವಹಿಸಿ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸಂಸ್ಥೆಯನ್ನು ಬೆಳೆಸುವುದರ ಜೊತೆಗೆ ಆಡಳಿತ ಮಂಡಳಿಯ ಜೊತೆಯಾಗಿ ಸಂಸ್ಥೆಯನ್ನು ಅಭಿವೃದ್ಧಿ ಪಡಿಸಿದ್ದಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿಟಿಯು ಬೆಳಗಾವಿ ಇದರ ಎಕ್ಷೆಕ್ಯುಟ್ವಿ ಮೆಂಬರ್ ಮತ್ತು ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಮಾತನಾಡಿ ನಮ್ಮ ವಿದ್ಯಾಸಂಸ್ಥೆಗಳಿಗೆ ಬೆನ್ನೆಲುಬಾಗಿ ನಿಂತವರು ಡಾ. ರೇಣುಕಾಪ್ರಸಾದ್ ಕೆ.ವಿ.ಯವರು ಅವರ ಆಶಯದಂತೆ ಸಂಸ್ಥೆ ಸಧೃಡವಾಗಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಸಂಸ್ಥೆಯಲ್ಲಿ ವಿಶ್ವಾಸವಿರಿಸಿ ನಿಮ್ಮ ಮಕ್ಕಳನ್ನು ಕಳುಹಿಸಿದ್ದೀರಿ. ನಿಮ್ಮ ಕನಸನ್ನು ನನಸಾಗಿಸುವ ಜವಾಬ್ದಾರಿ ನಮ್ಮ ಮೇಲಿದೆ. ಕಳೆದ ವರ್ಷದಲ್ಲಿ ಶೇ. 95 ಕ್ಯಾಂಪಸ್ ಸೆಲೆಕ್ಷನ್ ಆಗಿದೆ. ನಿಮ್ಮ ಮಕ್ಕಳಿಗೂ ಕ್ಯಾಂಪಸ್ ಸೆಲೆಕ್ಷನ್ ಮೂಲಕ ಉದ್ಯೋಗ ದೊರಕಿಸಿ ಕೊಡುವುದು ನಮ್ಮ ಜವಾಬ್ದಾರಿ. ನಿಮ್ಮ ಸಹಕಾರದ ಅಗತ್ಯವೂ ಇದೆ ಎಂದರು.


ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಶ್ ವಿ, ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರಶೇಖರ್ ಎ, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಪ್ರೊ. ರಾಘವೇಂದ್ರ ಕಾಮತ್, ಇಲೆಕ್ಟ್ರಿಕಲ್ ಎಂಡ್ ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥ ಡಾ. ಕುಸುಮಾಧರ್, ಎಂ.ಬಿ.ಎ. ವಿಭಾಗದ ಮುಖ್ಯಸ್ಥ ಪ್ರೊ.ಕೃಷ್ಣಾನಂದ ಎ, ಎ.ಐ.ಎಂ.ಎಲ್ ವಿಭಾಗದ ಮುಖ್ಯಸ್ಥೆ ಡಾ. ಸವಿತಾ ಸಿ.ಕೆ, ಡೀನ್ ಎಡ್ಮಿಷನ್ ಪ್ರೊ. ಬಾಲಪ್ರದೀಪ್, ಫಿಸಿಕ್ಸ್ ವಿಭಾಗ ಮುಖ್ಯಸ್ಥರಾದ ಡಾ. ಪ್ರವೀಣ್ ಎಸ್.ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಸ್ಟೂಡೆಂಟ್ ಇಂಡಕ್ಷನ್ ಪ್ರೋಗ್ರಾಂ ಹ್ಯಾಂಡ್ ಬುಕ್ಕನ್ನು ಡಾ. ಉಜ್ವಲ್ ಯು.ಜೆ, ಗ್ರಾಜ್ಯುವೇಷನ್ ಡೇ ರಿಪೋರ್ಟನ್ನು ಡಾ. ಕೆ.ಇ. ಪ್ರಕಾಶ್ ಮತ್ತು ಕಾಲೇಜಿನ ವೆಬ್ ಸೈಟ್ ನ್ನು ಮೌರ್ಯ ಆರ್. ಪ್ರಸಾದ್ ಉದ್ಘಾಟಿಸಿದರು. ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ವಿದ್ಯಾರ್ಥಿಗಳಾದ ಕು. ಪೂಜಾ ಮತ್ತು ಕು. ತ್ರಿಶಾಲಿ ಪ್ರಾರ್ಥಿಸಿದರು. ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಶ್ರೀಧರ್ ಕೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ಡೀನ್ ಅಕಾಡೆಮಿಕ್ ಅಡ್ವೈಸರ್ ಡಾ. ಪ್ರಜ್ಞಾ ವಂದಿಸಿದರು. ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರೊ. ಶೃತಿ ಮತ್ತು ಪ್ರೊ. ನಸೀಮಾ ಸಿ.ಎ. ಕಾರ್ಯಕ್ರಮ ನಿರೂಪಿಸಿದರು. ಪೋಷಕರ ಪರವಾಗಿ ಎ.ಕೆ. ಮೋಹನ್ ಮತ್ತು ಸುಬ್ರಹ್ಮಣ್ಯ ಕುಳ ಅಭಿಪ್ರಾಯ ವ್ಯಕ್ತಪಡಿಸಿದರು.