ಪಂಜ ಸೀಮೆ ದೇವಳದಲ್ಲಿ ವರ್ಷಾವಧಿ ಜಾತ್ರೋತ್ಸವ: ವೈಭವದ ಹಸಿರು ಕಾಣಿಕೆ ಮೆರವಣಿಗೆ

0

ಪಂಜ ಸೀಮೆ ದೇವಾಲಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಾಲಯದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ಜ.24 ರಿಂದ ಫೆ.9 ರ ತನಕ , ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ.

ಫೆ.3 ರಂದು ಪೂರ್ವಾಹ್ನ ಶ್ರೀ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿ ಹಸಿರು ಕಾಣಿಕೆ ಸಂಗ್ರಹಣೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ನಿತ್ಯಬಲಿ ಅನ್ನಸಂತರ್ಪಣೆ ನಡೆಯಿತು. ಮುಂಜಾನೆಯಿಂದ ಪಂಜ ಸೀಮೆಯ ಅನೇಕ ಊರುಗಳಲ್ಲಿ ಹಸಿರು ಕಾಣಿಕೆ ಸಂಗ್ರಹಿಸಿ ಸಂಜೆ ಪುತ್ಯ ಸತ್ಯ ಕಟ್ಟೆಯಲ್ಲಿ ಪ್ರಾರ್ಥಿಸಿ ಹಸಿರು ಕಾಣಿಕೆ ವೈಭವದ ಮೆರವಣಿಗೆ ಸಾಗಿ
ದೇವಳಕ್ಕೆ ಸಮರ್ಪಣೆ ಗೊಂಡಿತ್ತು. ಮೆರವಣಿಗೆಯಲ್ಲಿ ಬ್ಯಾಂಡ್ ವಾಲಗ, ಸಿಂಗಾರಿ ಮೇಳ, ಪಂಜದ ರಿಕ್ಷಾಗಳು ಸೇರಿದಂತೆ, ವಾಹನಗಳು ವಿಶೇಷ ಆಕರ್ಷಣೆಯಾಗಿತ್ತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ಸದಸ್ಯರು, ಗೌರವ ಸಲಹೆಗಾರರು, ವ್ಯವಸ್ಥಾಪನಾ ಸಮಿತಿ ಪೂರ್ವಾಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲು ಗುತ್ತು, ಹಸಿರು ಕಾಣಿಕೆ ಸಂಗ್ರಹಣಾ ಸಂಚಾಲಕರಾದ ಸಂತೋಷ್ ರೈ ಬಳ್ಪ, ಶರತ್ ಕುದ್ವ, ಪವನ್ ಪಲ್ಲತ್ತಡ್ಕ, ಸದಸ್ಯರು, ಸೀಮೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.

ಸಂಜೆ ಉಗ್ರಾಣ ತುಂಬಿಸುವುದು. ಮಹಾಪೂಜೆ ದಂಡಮಾಲೆ ಹಾಕಿ ಬಲಿ ಹೊರಡುವುದು, ಬೇತಾಳಗಳು ಇಳಿಯುವುದು, ಅನ್ನಸಂತರ್ಪಣೆ ನಡೆಯಲಿದೆ.

ಫೆ.4 ರಂದು ಶ್ರೀ ದೇವರ ಉತ್ಸವ, ಮಧ್ಯಾಹ್ನ ಮಹಾಪೂಜೆ, ನಿತ್ಯ ಬಲಿ, ಅನ್ನಸಂತರ್ಪಣೆ, ರಾತ್ರಿ ಮಹಾಪೂಜೆ, ಬಲಿ ಹೊರಡುವುದು, ಅನ್ನಸಂತರ್ಪಣೆ.

ಫೆ.5 ರಂದು ಪೂರ್ವಾಹ್ನ ಶ್ರೀ ದೇವರ ಬಲಿ ಹೊರಟು, ಪೂರ್ವಾಹ್ನ 10.30 ರಿಂದ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಅನ್ನಸಂತರ್ಪಣೆ.
ರಾತ್ರಿ ದೀಪೋತ್ಸವ, ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ಬೀದಿಕಟ್ಟೆ ಪೂಜೆ, ಕಾಚುಕುಜುಂಬ, ಶಿರಾಡಿ, ರುದ್ರಚಾಮುಂಡಿ ದೈವಗಳ ನರ್ತನ ಸೇವೆ, ವಸಂತ ಕಟ್ಟೆಪೂಜೆ, ಶ್ರೀ ದೇವರ ಉತ್ಸವ, ಅನ್ನಸಂತರ್ಪಣೆ. ಫೆ.6 ಪೂರ್ವಾಹ್ನ ಶ್ರೀ ದೇವರ ಬಲಿ ಹೊರಟು ಉತ್ಸವ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ, ರಾತ್ರಿ ಗಂಟೆ 11 ರಿಂದ ಬ್ರಹ್ಮ ರಥೋತ್ಸವ, ಕಾಚುಕುಜುಂಬ ದೈವದ ನರ್ತನ ಸೇವೆ. ಮಹಾಪೂಜೆ, ಶ್ರೀ ಭೂತಬಲಿ, ಶಯನೋತ್ಸವ, ಕವಾಟ ಬಂಧನ, ಅನ್ನಸಂತರ್ಪಣೆ ನಡೆಯಲಿದೆ.

ಫೆ.7 ಮುಂಜಾನೆ ಕವಾಟೋದ್ಘಾಟನೆ, ದೇವರಿಗೆ ಅಭಿಷೇಕ, ಪೂರ್ವಾಹ್ನ ಬಲಿ ಹೊರಟು, ಕಾಚುಕುಜುಂಬ ದೈವದ ನರ್ತನ ಸೇವೆಯೊಂದಿಗೆ ನಾಗತೀರ್ಥ ಜಳಕದ ಹೊಳೆಯಲ್ಲಿ ಶ್ರೀ ದೇವರ ಅವಭೃತ ಸ್ನಾನ, ಧ್ವಜಾವರೋಹಣ, ಮಹಾಪೂಜೆ, ಅನ್ನಸಂತರ್ಪಣೆ, ಅಪರಾಹ್ನ ದೇಗುಲದಿಂದ ಶ್ರೀ ಕಾಚುಕುಜುಂಬ ಉಳ್ಳಾಕುಲು ದೈವಗಳ ಭಂಡಾರವನ್ನು ಮೆರವಣಿಗೆ ಮೂಲಕ ಮೂಲಸ್ಥಾನ ಗರಡಿಬೈಲಿಗೆ ಹೋಗಿ ಸಂಜೆ ಧ್ವಜಾರೋಹಣ, ಭಜನಾ ಕಾರ್ಯಕ್ರಮ. ರಾತ್ರಿ ಶ್ರೀ ಕಾಚುಕುಜುಂಬ ದೈವದ ನೇಮ, ಪ್ರಸಾದ ವಿತರಣೆ, ಅನ್ನಸಂತರ್ಪಣೆ.

ಫೆ.8.ರಂದು ಮುಂಜಾನೆ ಶ್ರೀ ಉಳ್ಳಾಕುಲು ದೈವದ ನೇಮ, ಪ್ರಸಾದ ವಿತರಣೆ, ಧ್ವಜಾವರೋಹಣ, ದೈವದ ಭಂಡಾರವನ್ನು ಮೆರವಣಿಗೆಯಲ್ಲಿ ದೇಗುಲದ ಭಂಡಾರ ಮನೆಗೆ ತರುವುದು. ಶ್ರೀ ದೇವಳ ದಲ್ಲಿ ಸಂಪ್ರೋಕ್ಷಣೆ. ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಪುತ್ಯದಿಂದ ಶಿರಾಡಿ ದೈವದ ಭಂಡಾರ ತರುವುದು.

ಫೆ.9 ರಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪೂಜೆ ಹಾಗೂ ಶಿರಾಡಿ ದೈವದ ನೇಮ, ಶ್ರೀ ರುದ್ರ ಚಾಮುಂಡಿ ದೈವದ ನೇಮ,ಅನ್ನಸಂತರ್ಪಣೆ ನಡೆಯಲಿದೆ.
.ಫೆ.5. ತನಕ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳು
ಫೆ.3 ರಂದು ಸಂಜೆ 7 ರಿಂದ 9 ರ ವರೆಗೆ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಪದಯಾನ’ ತಂಡ ಪದ್ಯಾಣ ಇವರಿಂದ ವಿದುಷಿ ಶ್ರೀಮತಿ ಪ್ರಣತಿ ಚೈತನ್ಯ ಪದ್ಯಾಣ ನಿರ್ದೇಶನದ ‘ಭರತ ನಾಟ್ಯ ‘ ನಡೆಯಲಿದೆ.

ಫೆ.4 ರಂದು ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಸಂಜೆ 7 ರಿಂದ 8.30 ತನಕ ಶ್ರೀಮತಿ ಕೃತ್ತಿಕಾ ಕಾವಿನಮೂಲೆ ಮತ್ತು ಚೈತ್ರಿಕಾ ಕೊಡಿಬೈಲು ಹಾಗೂ ಬಳಗದವರಿಂದ “ಭಕ್ತಿ ಸಂಗೀತ”. ರಾತ್ರಿ ಗಂಟೆ 8.30 ರಿಂದ
ಮನ್ವಿತ್ ಬಿ.ಕೆ. ಸುಬ್ರಹ್ಮಣ್ಯ ಮತ್ತು ಬಳಗ’ ದವರಿಂದ ಸ್ಯಾಕ್ಸೋಪೋನ್ ವಾದನ’.

ಫೆ.,5 ರಂದು ಸಂಜೆ ಗಂಟೆ 7 ರಿಂದ ” ಶ್ರುತಿ ಕಾಂತಾಜೆ ಮತ್ತು ಬಳಗದವರಿಂದ ಭಕ್ತಿ ಸಂಗೀತ” . ರಾತ್ರಿ ಗಂಟೆ 8 ರಿಂದ ಪ್ರಮೋದ್ ಕುಮಾರ್ ರೈ ಬೆಳ್ಳಾರೆ ಸಂಯೋಜನೆಯಲ್ಲಿ ಕಲಾ ಮಂದಿರ್ ಡ್ಯಾನ್ಸ್ ಬೆಳ್ಳಾರೆ ಮತ್ತು ಪಂಜ ಶಾಖೆಯ ವಿದ್ಯಾರ್ಥಿಗಳಿಂದ “ನೃತ್ಯ ಸಂಭ್ರಮ” ನಡೆಯಲಿದೆ. ಸಂಜೆ ಗಂಟೆ 7 ರಿಂದ ಕೋಟಿ-ಚೆನ್ನಯ ಗರಡಿ ಮೈದಾನದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ (ರಿ.) ಇವರಿಂದ ಯಕ್ಷಗಾನ ಬಯಲಾಟ’ ಪ್ರಚಂಡ ವಿಶ್ವಾಮಿತ್ರ ರಕ್ತರಾತ್ರಿ ಪ್ರದರ್ಶನ ಗೊಳ್ಳಲಿದೆ.