ಕರು ಸಾಕಲು ಕೊಟ್ಟ ದಿನದಿಂದಲೇ ಮಸೂದ್ ಕೊಲೆಗೆ ಸ್ಕೆಚ್ ಹಾಕಲಾಗಿದೆ
ಕಳಂಜದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ
ಕೊಲೆಗೀಡಾದ ಪ್ರವೀಣ್ ಅವರ ಮನೆಗೆ ಭೇಟಿ ಕೊಟ್ಟ ಮುಖ್ಯಮಂತ್ರಿ ಮಸೂದ್ ಮನೆಗೆ ಭೇಟಿ ನೀಡದೆ ಅತ್ಯಂತ ಬೇಜವಾಬ್ದಾರಿ ಪ್ರದರ್ಶಿಸಿದ್ದಾರೆ. ಈ ಕುಟುಂಬದ ಪರಿಸ್ಥಿತಿಯನ್ನು ಕೇಳುವ ಸೌಜನ್ಯವನ್ನೂ ಮುಖ್ಯಮಂತ್ರಿ ತೋರಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಗುಂಪು ಹಲ್ಲೆಗೊಳಗಾಗಿ ಮೃತಪಟ್ಟ ಕಳಂಜದ ಮಸೂದ್ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿಯವರು, ಮಸೂದ್ ಹತ್ಯೆ ಹಿನ್ನೆಲೆಯಲ್ಲೂ ವಿಚಿತ್ರ ಸನ್ನಿವೇಶವಿದೆ. ಮಸೂದ್ ಅವರ ಸಾವಿಗೆ ಕಾರಣ ಏನು ಅಂತ ಮನೆಯವರು ನಮ್ಮ ಗಮನಕ್ಕೆ ತಂದಿದ್ದಾರೆ. ಅದನ್ನು ಪೊಲೀಸ್ ಅಧಿಕಾರಿಗಳ ಗಮನಕ್ಕೂ ತರುತ್ತೇನೆ, ಸರಕಾರದ ಗಮನಕ್ಕೂ ತರುತ್ತೇನೆ. ತನಿಖೆ ನಡೆಸಲು ಒತ್ತಾಯಿಸುತ್ತೇನೆ ಎಂದು ಹೇಳಿದರು.
ಮಸೂದ್ಗೆ ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷದ, ನಾಯಕರ ಸಂಪರ್ಕ ಇಲ್ಲ. ಹಿಂದೂ ಸಮಾಜದವರೇ ಮಸೂದ್ಗೆ ಕರು ಸಾಕಲು ಕೊಟ್ಟ ದಿನದಿಂದಲೇ ಕೆಲವರು ಮಸೂದ್ ಹತ್ಯೆಗೆ ಸ್ಕೆಚ್ ಮಾಡಿದ್ದಾರೆ. ಇದರ ವಾಸ್ತವ ಮತ್ತು ಸತ್ಯಾಸತ್ಯತೆ ಹೊರಬರಬೇಕು ಎಂದು ಕುಮಾರಸ್ವಾಮಿ ಹೇಳಿದರು.