ಆ. 31: ಬಾಳಿಲದಲ್ಲಿ ಗಣೇಶೋತ್ಸವ

0

ನಾಗರಿಕ ಸೇವಾ ಸಮಿತಿ ಬಾಳಿಲ – ಮುಪ್ಪೇರ್ಯ ಇದರ ಆಶ್ರಯದಲ್ಲಿ 39ನೇ ವರ್ಷದ ನಾಡಹಬ್ಬ ಗಣೇಶೋತ್ಸವ 2022 ಆಗಸ್ಟ್ 31 ರಂದು ನಡೆಯಲಿದೆ. ಬೆಳಿಗ್ಗೆ 9:00 ರಿಂದ ಗಣಪತಿ ಪ್ರತಿಷ್ಠೆ ಮತ್ತು ಪೂಜಾ ಕಾರ್ಯಕ್ರಮ, ಮಧ್ಯಾಹ್ನ 1.00 ಗಂಟೆಗೆ ಮಹಾ ಮಂಗಳಾರತಿ ಪ್ರಸಾದ ಭೋಜನ ನಡೆಯಲಿದೆ. ರಾತ್ರಿ 9:30 ರಿಂದ ಮಹಾಪೂಜೆ ಪ್ರಸಾದ ವಿತರಣೆ ಬಳಿಕ ಬಾಳಿಲದಿಂದ ಬೊಮ್ಮನಮಜಲಿಗೆ ವಿಜೃಂಭಣೆಯ ಶೋಭಾಯಾತ್ರೆ ನಡೆದು ಮೂರ್ತಿ ವಿಸರ್ಜನೆ ನಡೆಯಲಿದೆ. ಮಧ್ಯಾಹ್ನ 12.00ರಿಂದ ಸಮಿತಿಯ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಮೂಲೆಮಜಲುರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಬೆಳ್ಳಾರೆ ಕೆ.ಪಿ.ಎಸ್ ನಿವೃತ್ತ ಪ್ರಾಂಶುಪಾಲ ಬಿ.ವಿ ಸೂರ್ಯನಾರಾಯಣ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಾಳಿಲ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸವಿತಾ, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಕೂಸಪ್ಪ ಗೌಡ ಮುಗಪ್ಪು ಭಾಗವಹಿಸಲಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ಕಿಶನ್ ರಾವ್ ಬಾಳಿಲ, ನಾಟಿವೈದ್ಯ ಶ್ರೀಮತಿ ಕೊಂಬೆಚ್ಚಿ ಚಾಕೋಟೆಡ್ಕ ಮತ್ತು ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಲ್ಲಿ ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುವ ಪ್ರದೀಪ್ ತೋಟ ಇವರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9:00 ರಿಂದ ಸಾರ್ವಜನಿಕರಿಗೆ ವಿವಿಧ ಕ್ರೀಡಾಸ್ಪರ್ಧೆಗಳು ನಡೆಯಲಿದೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಮಡಿಕೆ ಒಡೆಯುವುದು, ಹಗ್ಗ ಜಗ್ಗಾಟ,
ಪುರುಷರಿಗೆ 65 ಕೆಜಿ ವಿಭಾಗದ ಮತ್ತು 45 ಕೆಜಿ ವಿಭಾಗದ ಕಬ್ಬಡಿ ಪಂದ್ಯಾಟ, ಅಂಗನವಾಡಿ ಮಕ್ಕಳಿಗೆ, 1ರಿಂದ 4ನೇ ತರಗತಿ ಮಕ್ಕಳಿಗೆ 5 ರಿಂದ 7ನೇ ತರಗತಿ ಮಕ್ಕಳಿಗೆ 8ರಿಂದ ಪದವಿ ಪೂರ್ವ ತರಗತಿವರೆಗಿನ ಮಕ್ಕಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ. ಬೆಳಿಗ್ಗೆ 10.30ರಿಂದ ಶ್ರೀ ಮಹಾವಿಷ್ಣು ಭಜನಾ ಮಂಡಳಿ ಬಾಳಿಲ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 7 ರಿಂದ ಯಕ್ಷಗಾನ ಬಯಲಾಟ ಲಕ್ಷ್ಮಿ ಸ್ವಯಂವರ ನಡೆಯಲಿದೆ. ಸಮಿತಿಯ ಗೌರವಾಧ್ಯಕ್ಷರಾಗಿ ಪಿ.ಜಿ.ಎಸ್.ಎನ್. ಪ್ರಸಾದ್, ಅಧ್ಯಕ್ಷರಾಗಿ ಕೃಷ್ಣಪ್ಪ ಪೂಜಾರಿ ಮೂಲೆಮಜಲು, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಮುಪ್ಪೇರ್ಯ, ಕೋಶಾಧಿಕಾರಿಯಾಗಿ ನಾರಾಯಣ ನಾಯ್ಕ ಕಾಪುತ್ತಡ್ಕ, ಉಪಾಧ್ಯಕ್ಷರಾಗಿ ಕರುಣಾಕರ ದೇವಸ್ಯ ಸೇವೆ ಸಲ್ಲಿಸುತ್ತಿದ್ದಾರೆ.