ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ,ತಾಲೂಕು ಆಡಳಿತ ಸಮಿತಿ, ವಕೀಲರ ಸಂಘ,ಪೋಲೀಸ್ ಇಲಾಖೆ,ಶಿಕ್ಷಣ ಇಲಾಖೆ,ಆರೋಗ್ಯ ಇಲಾಖೆ,ಅರಣ್ಯ
ಇಲಾಖೆ,ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ,ಸುದ್ದಿ ಸಮೂಹ ಸಂಸ್ಥೆ ಇದರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ನ.9 ರಂದು ಸುಳ್ಯ ವಕೀಲರ ಸಂಘದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ಸಿವಿಲ್ ನ್ಯಾಯಾಧೀಶರು ಮತ್ತು ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ಕು.ಅರ್ಪಿತಾ ನೆರವೇರಿಸಿದರು.
ರಾಷ್ಟ್ರೀಯ ಕಾನೂನು ಸೇವೆಗಳ ದಿನದ ಮಹತ್ವದ ಬಗ್ಗೆ ಸುಳ್ಯ ಸರ್ಕಾರಿ ಅಭಿಯೋಜಕ ಅರೋನ್ ಡಿ’ ಸೋಜ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ ‘ಕಾನೂನು ಅರಿವುಗಳು ದೇಶದ ಪ್ರತಿಯೊಬ್ಬ ಪ್ರಜೆಗೂ ಅತಿ ಅವಶ್ಯಕವಾದ ಅಂಶವಾಗಿದೆ. ಇದರ ಬಗ್ಗೆ ನಗರ, ಗ್ರಾಮ ಮುಂತಾದ ಕಡೆಗಳಲ್ಲಿಬೀದಿ ನಾಟಕದ ಮೂಲಕ ಸಂದೇಶ ಸಾರುವುದರೊಂದಿಗೆ ಜನಗಳಿಗೆ ಉತ್ತಮ ಅಭಿಪ್ರಾಯವನ್ನು ನೀಡಬಹುದು.
ಲೋಕ ಅದಾಲತ್ ನಿಂದ ಇತ್ಯರ್ಥ ಪಡಿಸಲು ಸಾಧ್ಯವಾಗುವ ಪ್ರಕರಣಗಳಲ್ಲಿ ಫಲಾನುಭವಿಗಳಿಗೆ ಸಹಾಯಕವಾಗುತ್ತದೆ. ಹಲವಾರು ವರ್ಷಗಳಿಂದ ಅದಾಲತ್ ಕಾರ್ಯಕ್ರಮ ನಡೆಯುತ್ತಾ ಬರುತ್ತಿದ್ದು ಜನತೆಗೆ ಉತ್ತಮ ಸಹಕಾರಿಯಾಗಿದೆ ಎಂದು ತಿಳಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ನಾರಾಯಣ.ಕೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಉಪಾಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಪ್ಯಾನಲ್ ವಕೀಲರುಗಳಾದ ನಳೀನ್ ಕುಮಾರ್ ಕೆ, ಅಬೂಬಕ್ಕರ್ ಜೆ.ಎನ್ ಅಡ್ಕರ್ ಉಪಸ್ಥಿತರಿದ್ದರು.
ವಕೀಲರ ಸಂಘದ ಕಾರ್ಯದರ್ಶಿ ವಿನಯ್ ಕುಮಾರ್ ಮುಳುಗಾಡು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಕೀಲರಾದ ಹರೀಶ್ ಬೂಡುಪನ್ನೆ ವಂದಿಸಿದರು.