ಸುಳ್ಯ: ವಿಳಾಸ ಕೇಳುವ ನೆಪದಲ್ಲಿ ಒಂಟಿ ಮಹಿಳೆಯ ಮನೆಗೆ ನುಗ್ಗಿ ವೃದ್ದ ಮಹಿಳೆಯ ಕುತ್ತಿಗೆಯಲ್ಲಿ ಇದ್ದ ಸರವನ್ನು ಕಿತ್ತು ಪರಾರಿಯಾದ ಕಳ್ಳ

0

ಸುಳ್ಯ ಜಾಲ್ಸೂರು ಗ್ರಾಮದ ಅಡ್ಕಾರ್ ಬೈತಡ್ಕ ವೈಲ್ಡ್ ಕೆಫೆ ಬಳಿ ಒಬ್ಬಂಟಿ ವೃದ್ದ ಮಹಿಳೆ ಇರುವ ಮನೆಗೆ ಕಳ್ಳನೋರ್ವ ನುಗ್ಗಿ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತು ಪರಾರಿಯಾದ ಘಟನೆ ನ.೨೮ ರಂದು ಬೆಳಿಗ್ಗೆ ೧೦.೩೦ ರ ಸಮಯಕ್ಕೆ ನಡೆದಿದೆ ಎನ್ನಲಾಗಿದೆ .
ಚಿನ್ನ ಕಳೆದುಕೊಂಡ ಮಹಿಳೆ ಬೈತಡ್ಕ ನಿವಾಸಿ ದಿವಂಗತ ಶಿವರಾಯರವರ ಪತ್ನಿ ಕಮಲ (64 ವ )ಎಂದು ತಿಳಿದುಬಂದಿದೆ.
ಕಳವಾದ ಚಿನ್ನದ ಸರ ೧೩ ಗ್ರಾಂ ಅಂದಾಜು ೪೫ ಸಾವಿರ ಮೊತ್ತದಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆ ದೂರು ನೀಡಿದ್ದು ದೂರಿನಲ್ಲಿ ದಿನಾಂಕ ನ.೨೮ ರಂದು ಸುಳ್ಯ ತಾಲೂಕು ಜಾಲ್ಸೂರು ಗ್ರಾಮದ ಬೈತಡ್ಕ ಎಂಬಲ್ಲಿ ತಮ್ಮ ಮನೆಯಲ್ಲಿರುವ ಸಮಯ ಸುಮಾರು ೦೯:೪೫ ಗಂಟೆಗೆ ಮೋಟಾರ್ ಸೈಕಲ್ ನಲ್ಲಿ ಒಬ್ಬ ವ್ಯಕ್ತಿ ನನ್ನ ಮನೆಯ ಅಂಗಳಕ್ಕೆ ಬಂದು ತನ್ನ ಮೋಟಾರ್ ಸೈಕಲ್ ನ್ನು ನಿಲ್ಲಿಸಿ ಇಲ್ಲಿ ಕೆ ಟಿ ರಾಜ ಎಂಬವರ ಮನೆ ಎಲ್ಲಿ ಎಂದು ಕೇಳಿದ್ದಾನೆ. ಅದಕ್ಕೆ ನಾನು ನನಗೆ ಗೊತ್ತಿಲ್ಲ ಎಂದಾಗ, ಆತ ನಾನು ಸ್ವಲ್ಪ ಇಲ್ಲೆ ಕುಳಿತು ನನ್ನನ್ನು ಇಲ್ಲಿಗೆ ಬರಲು ಹೇಳಿರುವ ವ್ಯಕ್ತಿ ಬರುವರೆಗೆ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ ಎಂದು ಹೇಳಿ ನಂತರ ಕುಡಿಯಲ್ಲಿಕೆ ನೀರು ಕೊಡಿ ಎಂದು ನನ್ನಬಳಿ ಕೇಳಿದಾಗ ಮನೆಯ ಒಳಗಿನಿಂದ ನೀರು ತೆಗೆದುಕೊಂಡು ಬರಲು ಹೋಗುವಾಗ ನನ್ನ ಹಿಂದೆ ಮನೆಯ ಒಳಗೆ ಆ ವ್ಯಕ್ತಿಯು ಬಂದು ನನ್ನ ಕುತ್ತಿಗೆಯನ್ನು ಬಿಗಿಯಾಗಿ ಹಿಂದಿನಿಂದ ಎರಡು ಕೈಗಳಿಂದ ಹಿಡಿದು ಬೊಬ್ಬೆ ಹಾಕಿದರೆ ಕೊಂದು ಬಿಡುತ್ತೇನೆಂದು ಹೇಳಿ ಕುತ್ತಿಗೆಯಿಂದ ಒಂದು ಕೈ ತೆಗೆದು ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕೀಳಲು ಪ್ರಯತ್ನಿಸಿದ್ದಾನೆ.ಆ ಸಮಯ ನಾನು ಬೊಬ್ಬೆ ಹಾಕುತ್ತಾ ತನ್ನ ಚಿನ್ನದ ಸರವನ್ನು ಎರಡು ಕೈಗಳಿಂದ ಬಿಗಿಯಾಗಿ ಹಿಡಿದುಕೊಂಡಾಗ ಕುತ್ತಿಗೆಯಲ್ಲಿದ್ದ ಚಿನ್ನದ ಸರ ತುಂಡಾಗಿ ಅರ್ಧ ಚಿನ್ನದ ಸರವನ್ನು ಆತ ಕಿತ್ತುಕೊಂಡು ನನ್ನನ್ನು ನೆಲಕ್ಕೆ ದೂಡಿ,ಬೊಬ್ಬೆ ಹಾಕುತ್ತಿದ್ದರಿಂದ ಆತನು ಕಿತ್ತುಕೊಂಡ ಚಿನ್ನ ಸರ ಸಮೇತ ನಿಲ್ಲಿಸಿದ್ದ ಮೋಟಾರ್ ಸೈಕಲ್ ಬಳಿ ಹೋಗಿ ಮೋಟಾರ್ ಸೈಕಲ್ ಸ್ಟಾರ್ಟ್ ಮಾಡಿಕೊಂಡು ಆತನು ಜಾಲ್ಸೂರು ಕಡೆಗೆ ಪರಾರಿಯಾಗಿರುತ್ತಾನೆ.ಆತನಿಗೆ ಸುಮಾರು ೨೬-೩೦ ವರ್ಷ ವಯಸ್ಸು ಇದ್ದು ಎಣ್ಣೆ ಕಪ್ಪು ಮೈ ಬಣ್ಣದ ಸಾಧಾರಣ ಮೈಕ್ಕಟಿನ ಸುಮಾರು ೫.೪ ಅಡಿ ಎತ್ತರದ ವ್ಯಕ್ತಿಯಾಗಿರುತ್ತಾನೆ.ತಿಳಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಕೆಂಪು ಬಣ್ಣದ ತುಂಬು ತೋಳಿನ ಟೀ ಶರ್ಟ್ ಧರಿಸಿರುತ್ತಾನೆ.ಆತನ ಮೋಟಾರ್ ಸೈಕಲ್ ನಂಬರ್ ನ್ನು ನೋಡಲು ಸಾದ್ಯವಾಗಿರುವುದಿಲ್ಲ.ಮೋಟಾರ್ ಸೈಕಲ್ ಕಪ್ಪು ಬಣ್ಣದಾಗಿರುತ್ತದೆ.
ಚಿನ್ನದ ಸರವು ಒಟ್ಟು ೨೬ ಗ್ರಾಂ ಇದ್ದು ಅದರಲ್ಲಿ ೧೩ ಗ್ರಾಂ ನಷ್ಟು ಚಿನ್ನದ ಸರವನ್ನು ಕಳ್ಳನು ಕಿತ್ತುಕೊಂಡು ಹೋಗಿರುವುದಾಗಿರುತ್ತಾನೆ. ಕಳ್ಳನು ಪಿರ್ಯಾದುದಾರರಿಂದ ಕಿತ್ತುಕೊಂಡು ಹೋಗಿರುವ ಚಿನ್ನದ ಅಂದಾಜು ಮೌಲ್ಯ ೪೫ ಸಾವಿರ ರೂಪಾಯಿ ಆಗಬಹುದು. ಚಿನ್ನದ ಸರದ ತುಂಡನ್ನು ಕಿತ್ತುಕೊಂಡು ಹೋಗುವಾಗ ಸಮಯ ಸುಮಾರು ೧೦.೩೦ಗಂಟೆ ಆಗಿರುತ್ತದೆ. ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ಜೀವ ಬೆದರಿಕೆ ಹಾಕಿ ಕುತ್ತಿಗೆಯಲ್ಲಿದ್ದ ಚಿನ್ನದ ಸರದ ತುಂಡನ್ನು ಕಿತ್ತುಕೊಂಡು ಹೋಗಿರುವ ಕಳ್ಳನನ್ನು ಮತ್ತು ನನ್ನ ಚಿನ್ನದ ಸರವನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸುಳ್ಯ ಪೊಲೀಸರು ದೂರು ದಾಖಲಿಸಿ ಕೊಂಡು ಕಳ್ಳನ ಪತ್ತೆಗಾಗಿ ಶೋಧ ಕಾರ್ಯ ತೊಡಗಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.