ಡಾ| ರೇಣುಕಾಪ್ರಸಾದ್ ಕೆ.ವಿ.ಯವರ ಪತ್ರಿಕಾಗೋಷ್ಠಿಗೆ ಡಾ| ಕೆ.ವಿ. ಚಿದಾನಂದ್ ಪ್ರತ್ಯುತ್ತರ, ಕೆ.ವಿ.ಜಿ. ವಿದ್ಯಾಸಂಸ್ಥೆಗಳು ಯಾವುದೇ ತೊಂದರೆಯಿಲ್ಲದೆ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದೆ, ಪ್ರತಿಭಟನೆ ನಡೆಸುವ ಸಿಬ್ಬಂದಿಗಳ ವಿರುದ್ಧ ಎಜ್ಯುಕೇಶನ್ ಆಕ್ಟ್ ಪ್ರಕಾರ ಕಾನೂನು ಕ್ರಮ

0

ಸುಳ್ಯದ ಅಮರ ಶಿಲ್ಪಿ ಡಾ| ಕುರುಂಜಿ ವೆಂಕಟ್ರಮಣ ಗೌಡರು ಹುಟ್ಟು ಹಾಕಿರುವ ಎಲ್ಲಾ ವಿದ್ಯಾಸಂಸ್ಥೆಗಳು ಯಾವುದೇ ಗೊಂದಲಗಳಿಲ್ಲದೆ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದೆ. ಡಾ. ರೇಣುಕಾಪ್ರಸಾದರು ಡಿ.20ರಂದು ಪತ್ರಿಕಾಗೋಷ್ಠಿ ನಡೆಸಿ ತಿಳಿಸಿರುವ ವಿಚಾರ ಸತ್ಯಕ್ಕೆ ದೂರವಾಗಿದ್ದು ದುರುದ್ದೇಶದಿಂದ ಕೂಡಿದೆ. ಡಿ.23ರಂದು ಶೈಕ್ಷಣಿಕ ಚಟುವಟಿಕೆಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುವುದು ಕಾನೂನು ಬಾಹಿರವಾಗಿದ್ದು, ಪ್ರತಿಭಟನೆ ನಡೆಸುವ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒಳಪಡಿಸಲು ಆಡಳಿತ ಮಂಡಳಿಯು ಹಿಂಜರಿಯುವುದಿಲ್ಲ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ್ ತಿಳಿಸಿದ್ದಾರೆ.


ಡಿ.21ರಂದು ಕೆ.ವಿ.ಜಿ. ಆಯುರ್ವೇದಿಕ್ ಕಾಲೇಜಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ನಮ್ಮ ವಿದ್ಯಾಸಂಸ್ಥೆಗಳು ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದ್ದು ವ್ಯತಿರಿಕ್ತ ಪರಿಣಾಮದ ಬಗ್ಗೆ ಮಾಹಿತಿಗಳು ಆಡಳಿತ ಮಂಡಳಿಯ ಗಮನಕ್ಕೆ ಬಂದಿಲ್ಲ. ಎ.ಒ.ಎಲ್.ಇ. ಸೊಸೈಟಿಯ ವಿದ್ಯಾಸಂಸ್ಥೆಗಳ, ವಿದ್ಯಾರ್ಥಿಗಳ, ಸಿಬ್ಬಂದಿಗಳ ಹಾಗೂ ವಿದ್ಯಾರ್ಥಿಗಳ ಪೋಷಕರ ಯಾವುದೇ ರೀತಿಯ ಕುಂದು ಕೊರತೆಗಳನ್ನು ಹೋಗಲಾಡಿಸಲು ನಮ್ಮ ಆಡಳಿತ ಮಂಡಳಿ ಸಂಪೂರ್ಣ ಬದ್ಧ ಆಗಿದೆ. ರೇಣುಕಾಪ್ರಸಾದರ ಹೇಳಿಕೆಯಿಂದ ಯಾರೂ ಗೊಂದಲಗೊಳ್ಳುವ ಅವಶ್ಯಕತೆಯಿಲ್ಲ. ಮತ್ತು ಪ್ರತಿಭಟಿಸುವ ಅವಶ್ಯಕತೆಯೂ ಇಲ್ಲ.

ಡಿ.23ರಿಂದ ವಿದ್ಯಾ ಸಂಸ್ಥೆಗಳ ಶೈಕ್ಷಣಿಕ ಚಟುವಟಿಕೆಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುವುದು ಕಾನೂನು ಬಾಹಿರ ಕೃತ್ಯವಾಗಿದ್ದು ಸಂಬಂಧಿತ ಸಿಬ್ಬಂದಿಗಳು ಆಡಳಿತ ಮಂಡಳಿಯ ಗಮನಕ್ಕೆ ತಾರದೇ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸದೇ ವಿದ್ಯಾರ್ಥಿ ಹಾಗೂ ಸಿಬ್ಭಂದಿಗಳಿಗೇನಾದರೂ ತೊಂದರೆಯಾದಲ್ಲಿ ಪ್ರತಿಭಟನೆ ನಡೆಸುವ ಸಿಬ್ಬಂದಿಗಳನ್ನು ಸೂಕ್ತ ಕಾನೂನು ಕ್ರಮಕ್ಕೆ ಒಳಪಡಿಸಲು ಆಡಳಿತ ಮಂಡಳಿಯು ಹಿಂಜರಿಯುವುದಿಲ್ಲ ಎಂದು ಅವರು ತಿಳಿಸಿದರು.


ಅಕಾಡೆಮಿಗೆ ಆಡಳಿತಾಧಿಕಾರಿ ನೇಮಕ ಮಾಡುವ ವಿಚಾರವು ಡಾ| ರೇಣುಕಾಪ್ರಸಾದರ ವೈಯಕ್ತಿಕ ನಿರ್ಧಾರವೇ ಹೊರತು ಸಂಸ್ಥೆಯದ್ದಲ್ಲ. ಇದಕ್ಕೆ ತದ್ವಿರುದ್ಧವಾಗಿ ಸಂಸ್ಥೆಯ ಸಿಬ್ಬಂದಿಗಳನ್ನು ಸಂಸ್ಥೆಯ ವಿರುದ್ಧವೇ ಎತ್ತಿ ಕಟ್ಟಿದರೆ ಅದು ಕಾನೂನು ಬಾಹಿರವಾಗುತ್ತದೆ. ನ್ಯಾಯಾಲಯವು ಸಂಸ್ಥೆಯ ಆಡಳಿತ ಮಂಡಳಿಯು ಕಾನೂನು ಪ್ರಕಾರ ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಹಾಗೂ ಆಡಳಿತ ಮಂಡಳಿಯು ತೆಗೆದುಕೊಂಡಿರುವ ನಿರ್ಣಯಗಳನ್ನು ಅಂಗೀಕರಿಸಿ ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ನಡೆಸಲು ಅವಕಾಶ ಮಾಡಿಕೊಟ್ಟಿದೆ.
ಡಾ| ರೇಣುಕಾಪ್ರಸಾದರನ್ನು ಪ್ರಧಾನ ಕಾರ್ಯದರ್ಶಿಯಿಂದ ತೆರವು ಮಾಡಲಾಗಿದೆ. ಹಾಗೂ ಡಾ| ಜ್ಯೋತಿ ಆರ್ ಪ್ರಸಾದ್ ಮತ್ತು ಡಾ| ಅಭಿಜ್ಞಾ ಪ್ರಸಾದ್‌ರವರು ಕೂಡಾ ಸಭೆಗೆ ಬಾರದೇ ಇರುವುದರಿಂದ ಅಕಾಡೆಮಿಯ ವಾರ್ಷಿಕ ಮಹಾಸಭೆಯ ನಿರ್ಣಯದಂತೆ ನಿರ್ದೇಶಕ ಸ್ಥಾನದಿಂದ ಕೈ ಬಿಡಲಾಗಿದ್ದು ಅವರಿಬ್ಬರೂ ಸದಸ್ಯರಾಗಿ ಮುಂದುವರಿಯಲಿದ್ದಾರೆ ಎಂದು ಡಾ. ಕೆ.ವಿ. ಚಿದಾನಂದರು ಹೇಳಿದರು.
ರೇಣುಕಾಪ್ರಸಾದರು 32 ವರ್ಷದಿಂದ ಅಕಾಡೆಮಿಯಲ್ಲಿ ಕಾರ್ಯದರ್ಶಿಯಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಇದ್ದವರು. ಕಾನೂನಿನ ವಿರುದ್ಧವಾಗಿ ಅವರು ನಡೆದುಕೊಳ್ಳುತ್ತಿದ್ದಾರೆ. ಅವರೇ ಹೇಳುವಂತೆ ಇದು ಸೊಸೈಟಿ ಆಕ್ಟ್ ಪ್ರಕಾರ ನಡೆಯುವ ಸಂಸ್ಥೆ. ನಮ್ಮ ಸ್ವಂತ ಆಸ್ತಿ ಅಲ್ಲ. ಆದರೆ ರೇಣುಕಾಪ್ರಸಾದರು ಕಾನೂನು ಮೀರಿ ಅವ್ಯವಹಾರಕ್ಕೆ ಪ್ರಯತ್ನಿಸಿದಾಗ ಅದನ್ನು ನಾವು ತಡೆದಿದ್ದೇವೆ. ಕೊರೊನಾ ಸಂದರ್ಭದಲ್ಲಿ ಸುಳ್ಳು ಹೇಳಿ ನನ್ನ ಅನುಮತಿ ಇಲ್ಲದೇ ಸಭೆ ನಡೆಸಿದ್ದಾರೆ. ಆದರೆ ಆ ಸಭೆಗೆ ನಾನು ಹೋಗಿರಲಿಲ್ಲ ಎಂದ ಅವರು, ನಮ್ಮ ಎಲ್ಲ ಕಾರ್ಯಭಾರಗಳು ಕಾನೂನು ಪ್ರಕಾರ ಇದೆ ಎಂದು ನ್ಯಾಯಾಲಯವೇ ಜಡ್ಜ್ ಮೆಂಟ್ ನೀಡಿದೆ. ಆ ಜಡ್ಜ್ ಮೆಂಟ್ ಬಂದ ಬಳಿಕವೇ ಅಕಾಡೆಮಿಯ ವಾರ್ಷಿಕ ಸಭೆ ಮಾಡಿದ್ದೇವೆ'' ಎಂದವರು ವಿವರಗಳನ್ನು ನೀಡಿದರು.

ಅಕಾಡೆಮಿ ಕಾರ್ಯದರ್ಶಿ ಕೆ.ವಿ. ಹೇಮನಾಥರು ಮಾತನಾಡಿ,12.5.2020ರಂದು ಅಕಾಡೆಮಿಯ ತುರ್ತು ಸಭೆ ನಡೆಸಬೇಕೆಂದು ರೇಣುಕಾಪ್ರಸಾದರು ನನ್ನ ಮನೆಗೆ ಬಂದು ಬಲವಂತ ಮಾಡಿದ್ದರು. ಆದರೆ ಅವರ ಉದ್ದೇಶ ಏನೆಂದು ನನಗೆ ಗೊತ್ತಿರಲಿಲ್ಲ. ಅವರು ಒತ್ತಾಯ ಮಾಡಿದ್ದರಿಂದ ಸಭೆಗೆ ಬಂದೆ. ಸಭೆಯಲ್ಲಿ ಅವರು, ಡಾ| ಜ್ಯೋತಿ ಪ್ರಸಾದ್, ಡಾ| ಅಭಿಜ್ಞಾ ಮತ್ತು ನಾನು ಇದ್ದೆವು. ಕೊರೊನಾ ಸಂದರ್ಭವಾಗಿರುವುದರಿಂದ ವೇತನ ಪಾವತಿಯ ವಿಚಾರ ಮುಂದಿಟ್ಟರು. ನಿರ್ಣಯಗಳನ್ನು ಬರೆಯದೇ ಖಾಲಿ ಪುಸ್ತಕಕ್ಕೆ ನನ್ನಿಂದ ಸಹಿ ಪಡೆದರು. ಬಳಿಕ ಅಜೆಂಡಾದಲ್ಲಿ ಇಲ್ಲದ ವಿಚಾರವನ್ನು ನಿರ್ಣಯದಲ್ಲಿ ಬರೆದಿದ್ದಾರೆ. ಇದೆಲ್ಲವೂ ನಮಗೆ ಗೊತ್ತಾಗಿ ಕಾನೂನು ಬಾಹಿರ ವ್ಯವಹಾರವನ್ನು ನಾವು ತಡೆದಿದ್ದೇವೆ ಎಂದು ಹೇಳಿದ ಅವರು, ಇಲ್ಲಿಯ ಎಲ್ಲ ವ್ಯವಹಾರ ನಾನೇ ನಡೆಸಬೇಕೆಂಬ ಉದ್ದೇಶ ರೇಣುಕಾಪ್ರಸಾದರದ್ದಾಗಿತ್ತು. ಆದರೆ ಅದು ಕಾರ್ಯಗತವಾಗಿಲ್ಲ. ಅಲ್ಲಿಂದ ಸಮಸ್ಯೆಗಳು ಆರಂಭವಾದವು. ಅವರೇ ಮೊದಲು ನ್ಯಾಯಾಲಯದ ಮೆಟ್ಟಿಲು ಹತ್ತಿದರು. ಎಲ್ಲ ಕಡೆ ಅವರಿಗೆ ಅವಗುಣಗಳೇ ಆಗಿದೆ ಹೊರತು ನಮ್ಮ ವ್ಯವಹಾರಗಳು ನ್ಯಾಯ ಸಮ್ಮತವಾಗಿರುವುದರಿಂದ ನಮಗೆ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ ಎಂದು ಹೇಳಿದರು.
ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಮಾತನಾಡಿ, `ಅವರ ಪತ್ರಿಕಾಗೋಷ್ಠಿಯ ವಿಚಾರಗಳೆಲ್ಲ ಸತ್ಯಕ್ಕೆ ದೂರವಾದುದು. ಯಾಕೆಂದರೆ ನಾವು ಸಂಸ್ಥೆಗಳನ್ನು ನಡೆಸುವ ಸಂದರ್ಭದಲ್ಲಿ ವಾರ್ಷಿಕ ಖರ್ಚು ವೆಚ್ಚಗಳನ್ನು ಮೊದಲೇ ಲೆಕ್ಕ ಇಟ್ಟುಕೊಳ್ಳುತ್ತೇವೆ. ಕೊರೊನಾ ಸಂದರ್ಭದಲ್ಲಿ ಎಲ್ಲ ವಿದ್ಯಾಸಂಸ್ಥೆಗಳ ಸೀಟು ಫುಲ್ ಆಗಿತ್ತು. ಹಾಗಿದ್ದು ಹೀಗೆ ಹೇಳುತ್ತಾರೆಂದರೆ ಹೇಗೆ ಎಂದ ಅವರು, ಒಂದು ತಿಂಗಳ ಹಿಂದೆ ಬಂದು ನನಗೆ ಇಷ್ಟು ಕೋಟಿ ಕೊಡಬೇಕು ಎಂದರೆ ಹೇಗೆ? ಎಂದು ಪ್ರಶ್ನಿಸಿದರಲ್ಲದೆ,5೦ ಕೋಟಿ ರೂ ನಮ್ಮ ಸುಪರ್ದಿಗೆ ಬಳಸಿಕೊಳ್ಳಲು ಹುನ್ನಾರ ಎನ್ನುವುದು ಶುದ್ಧ ಸುಳ್ಳು. ನನಗೆ ಇದರಿಂದ ಆಗಬೇಕೆಂದೇನೂ ಇಲ್ಲ. ನನ್ನ ವ್ಯವಹಾರವನ್ನು ಗೂಗಲ್‌ನಲ್ಲಿ ನೋಡಿದರೆ ಡೀಟೇಲ್ ಸಿಗುತ್ತದೆ. ನನ್ನ ಮೇಲಿನ ಆರೋಪ ದುರುದ್ದೇಶ ಪ್ರೇರಿತ. ಇದನ್ನು ಕಾನೂನು ಪ್ರಕಾರ ನೋಡಿಕೊಳ್ಳುವೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಉಪಾಧ್ಯಕ್ಷೆ ಶೋಭಾ ಚಿದಾನಂದ್, ನಿರ್ದೇಶಕರಾದ ಜಗದೀಶ್ ಅಡ್ತಲೆ, ಕಾನೂನು ಸಲಹೆಗಾರ ಪ್ರದೀಪ್ ಕೆ.ಎಲ್., ಧನಂಜಯ ಮದುವೆಗದ್ದೆ ಇದ್ದರು.