ಮನೆ ನಿರ್ಮಿಸಿ ಆರ್ಥಿಕ ಅಡಚಣೆಯಿಂದ ಪೂರ್ಣಗೊಳಿಸಲು ಸಾಧ್ಯವಾಗದೆ ಬಾಕಿಯಾಗಿರುವ ಒಬ್ಬ ಬಡವರಿಗೆ ಮನೆ ಪೂರ್ಣಗೊಳಿಸುವುದಕ್ಕಾಗಿ ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಮಿತಿ ವತಿಯಿಂದ ನೀಡಲಾಗುವ ಒಂದು ಲಕ್ಷ ರೂ. ನೆರವನ್ನು ಈ ವರ್ಷ, ಪ್ರಾಕೃತಿಕ ವಿಕೋಪದಿಂದ ಮನೆ ನಾಶವಾಗಿದ್ದ ಉಬರಡ್ಕ ಗ್ರಾಮದ ಸೂರ್ಯ ಮನೆ ಅನಂತ ಕುಮಾರ್ರವರ ಮನೆ ನಿರ್ಮಾಣಕ್ಕೆ ನೀಡಿದ್ದು ಪೂರ್ಣಗೊಂಡಿರುವ ಈ ಮನೆಯ ಹಸ್ತಾಂತರ ಕಾರ್ಯಕ್ರಮ ಡಿ.೨೬ರಂದು ನಡೆಯಿತು.
ಉಬರಡ್ಕ ಗ್ರಾ.ಪಂ. ಅಧ್ಯಕ್ಷೆ ಚಿತ್ರಕುಮಾರಿ ಹಾಗೂ ಉಬರಡ್ಕ ನರಸಿಂಹ ಶಾಸ್ತಾವು ದೇವಾಲಯದ ಆಡಳಿತ ಮೊಕ್ತೇಸರಾದ ರತ್ನಾಕರ ಗೌಡ ಬಳ್ಳಡ್ಕ , ಉಬರಡ್ಕ ಮಿತ್ತೂರು ನಾಯರ್ ದೈವಸ್ಥಾನದ ಆಡಳಿತ ಮೋಕ್ತೆಸರಾದ ವೆಂಕಟ್ರಮಣ ಕೆದಂಬಾಡಿಯವರು ಮನೆಗೆ ಅಳವಡಿಸಲಾದ ಶಿಲಾ ಫಲಕವನ್ನು ಅನಾವರಣಗೊಳಸಿ, ದೀಪ ಬೆಳಗಿಸಿ ಕಾರ್ಯಕ್ರಮ ನೆರವೇರಿಸಿದರು.
ಕೆವಿಜಿ ಸುಳ್ಯ ಹಬ್ಬ ಸಮಿತಿಯ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಅಧ್ಯಕ್ಷತೆ ವಹಿಸಿದ್ದರು.
ಮನೆ ಪೂರ್ಣಗೊಳಿಸಲು ಮುತುವರ್ಜಿ ವಹಿಸಿ ದುಡಿದ ಕೆವಿಜಿ ಸುಳ್ಯ ಹಬ್ಬ ಸಮಿತಿಯ ಕಾರ್ಯದರ್ಶಿ ಹರೀಶ್ ಉಬರಡ್ಕ ಸ್ವಾಗತಿಸಿ,
ಖಜಾಂಜಿ ಆನಂದ ಖಂಡಿಗ ವಂದಿಸಿದರು. ಕೆವಿಜಿ ಸುಳ್ಯ ಹಬ್ಬ ಸಮಿತಿ ಸಮಾಜ ಸೇವಾ ವಿಭಾಗದ ಸಂಚಾಲಕ ಹರೀಶ್ ಬಂಟ್ವಾಳ್ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಪೂರ್ವಾಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು, ಅನಂತ ಕುಮಾರ್ ರಿಗೆ ಇದುವರೆಗೆ ಆಶ್ರಯ ನೀಡಿದ್ದ ರಮೇಶ್ ಪಾನತ್ತಿಲ, ಮನೆ ನಿರ್ಮಾಣಕ್ಕೆ ಸಹಕರಿಸಿದ ಊರವರು ಉಪಸ್ಥಿತರಿದ್ದರು.