ಬೆಳ್ಳಾರೆಯಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಂಘಟನೆಯವರಿಂದ ಪ್ರತಿಭಟನೆ- ಆರೋಪಿ ಸಂಜೀವ ಪೂಜಾರಿಯನ್ನು ಬಂಧಿಸುವಂತೆ ಒಕ್ಕೋರಲ ಮನವಿ

0

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಜನೆ ಮತ್ತು ಭಜಕರ ಬಗ್ಗೆ ಅವಹೇಳನಕಾರಿ ಬರವಣಿಗೆಯನ್ನು ‌ಬರೆದು ಹಿಂದೂ ಧರ್ಮದ ಆಚಾರ ವಿಚಾರದ ಕುರಿತು ಅಶ್ಲೀಲ ಪದಗಳನ್ನು ಬಳಸಿ ಹರಿಯಬಿಟ್ಟ ಕಾಣಿಯೂರು ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿಯವರನ್ನು ಕೂಡಲೇ ಬಂಧಿಸಿ ಕಾನೂನು ಪ್ರಕಾರ ಹುದ್ದೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಬೆಳ್ಳಾರೆ ಪೋಲಿಸ್ ಠಾಣೆಯ ಎದುರು ವಿಶ್ವ ಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡದ ಸಂಘಟನೆಯ ಕಾರ್ಯಕರ್ತರು ಇಂದು ಬೆಳಗ್ಗೆ ಪ್ರತಿಭಟನೆ ನಡೆಸಿದರು.


ಪ್ರತಿಭಟನಕಾರರು ಭಜನೆ ಹಾಗೂ ಆರೋಪಿ ಸಂಜೀವ ಪೂಜಾರಿಗೆ ಮತ್ತು ಕಾನೂನು ಕ್ರಮ ತೆಗೆದುಕೊಳ್ಳಲು ಮೀನ ಮೇಷ ಎಣಿಸುತ್ತಿರುವ ಅಧಿಕಾರಿಗಳ ವಿರುದ್ಧ ದಿಕ್ಕಾರದ ಘೋಷಣೆ ಕೂಗಿದರು.
ಬಳಿಕ ಸ್ಥಳೀಯ ಬೆಳ್ಳಾರೆ ಪೋಲಿಸ್ ಠಾಣೆಯ ಎಸ್.ಐ ಸುಭಾಷ್ ರವರ ಮುಖಾಂತರ ಮನವಿ ಪತ್ರ ನೀಡಲಾಯಿತು.
ಈ ಸಂದರ್ಭದಲ್ಲಿ ಸುಳ್ಯ ಪೋಲಿಸ್ ಠಾಣೆಯ ಎಸ್.ಐ. ದಿಲೀಪ್ ರವರು ಉಪಸ್ಥಿತರಿದ್ದರು.


ಬಳಿಕ ಮಾತನಾಡಿದ ಎಸ್.ಐ ಯವರು ಕಾನೂನು ಪ್ರಕಾರ ಆರೋಪಿಯ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಭಟನಕಾರರ ಮನವಿಗೆ ಸ್ಪಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಜರಂಗದಳ ಜಿಲ್ಲಾ ಸಹ ಸಂಚಾಲಕ ಲತೀಶ್ ಗುಂಡ್ಯ ಮಾತನಾಡಿ ಅಸಂಖ್ಯಾತ ಹಿಂದೂ ಬಾಂಧವರಿಗೆ ಹಾಗೂ ಮನಸ್ಸಿನ ಶಾಂತಿ ನೆಮ್ಮದಿಗಾಗಿ ದೇವರನ್ನು ಒಲಿಸುವ ಸುಲಭ ಸಾಧನವೆಂಬುದನ್ನರಿತು ಭಜಿಸುವ ಭಜಕರಿಗೆ ಅತ್ಯಂತ ನೋವು ತರುವ ನೀಚ ಕೆಲಸಕ್ಕೆ ಮುಂದಾಗಿರುವ ಒಬ್ಬ ಸರಕಾರಿ ಸೇವಕ ಸಂಜೀವ ಎಂಬವರನ್ನು ಮುಂದೆ ನಿಗದಿಪಡಿಸಿದ ದಿನಗಳ ಒಳಗಾಗಿ ಅಧಿಕಾರಿಗಳು ಬಂಧಿಸಿ ಸರಕಾರಿ ಉದ್ಯೋಗದಿಂದ ಅಮಾನತು ಮಾಡಬೇಕು. ಇಲ್ಲವಾದಲ್ಲಿ ಮತ್ತೆ ಇಡೀ ತಾಲೂಕಿನ ಎಲ್ಲಾ ಭಜನಾ ಮಂಡಳಿಯವರನ್ನು ಹಾಗೂ ಸಂಘಟನೆಯ ಕಾರ್ಯಕರ್ತರನ್ನು ಒಟ್ಟು ಸೇರಿಸಿ ತಾಲೂಕು ಕೇಂದ್ರ ದಲ್ಲಿ ಇಡೀ ದಿವಸ ಕುಳಿತು ಪ್ರತಿಭಟಿಸಲಾಗುವುದೆಂದು ಎಚ್ಚರಿಸಿದರು.
ತಾಲೂಕು
ಭಜನಾ ಪರಿಷತ್ ಕಾರ್ಯದರ್ಶಿ ಸತೀಶ್ ಕಲ್ಮಕ್ಕಾರು ಮಾತನಾಡಿ ಧರ್ಮಸ್ಥಳ ಕ್ಷೇತ್ರದ ಮೂಲಕ ಭಜನೆಯಿಂದ ಬದಲಾವಣೆಯೊಂದಿಗೆ ಸಮಾಜದಲ್ಲಿ ಕಟ್ಟ ಕಡೆಯ ವ್ಯಕ್ತಿಯು ಭಜನೆಯಲ್ಲಿ ತೊಡಗಿಸಿಕೊಂಡು ಗೌರವಕ್ಕೆ ಪಾತ್ರರಾಗಿ ಮುಖ್ಯ ವಾಹಿನಿಯಲ್ಲಿ ಕಾಣಿಸಿಕೊಳ್ಳುವ ಹಂತದಲ್ಲಿ ಕೋಟ್ಯಾಂತರ ಭಕ್ತರ ಮನಸ್ಸಿಗೆ ಘಾಸಿ ಮಾಡುವ ಹೇಯ ಕೃತ್ಯಕ್ಕೆ ಮುಂದಾಗಿರುವ ಸರಕಾರಿ ಉದ್ಯೋಗಿ ಸಂಜೀವ ಎಂಬವರ ನಡೆಯನ್ನು ಪರಿಷತ್ ವತಿಯಿಂದ ತೀವ್ರವಾಗಿ ಖಂಡಿಸುತ್ತೇವೆ. ತಪ್ಪಿತಸ್ಥ ವ್ಯಕ್ತಿ ಯಾರೇ ಆದರೂ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಪ್ರಮುಖ ರಾದ ವಿ.ಹೆ.ಚ್.ಪಿ ಅಧ್ಯಕ್ಷ ಸೋಮಶೇಖರ ಪೈಕ, ವರ್ಷಿತ್ ಚೊಕ್ಕಾಡಿ, ನವೀನ್ ಎಲಿಮಲೆ,
ಶ್ರೀನಾಥ್ ಬಾಳಿಲ, ರಂಜಿತ್ ಸುಳ್ಯ, ಸನತ್ ಚೊಕ್ಕಾಡಿ, ಸಚಿನ್ ಪೂವಾಜೆ, ಸಂತೋಷ್ ಬೆಳ್ಳಾರೆ, ರೂಪೇಶ್ ಪೂಜಾರಿ ಮನೆ, ಭರತ್ ಬೆಳ್ಳಾರೆ ಹಾಗೂ ಸಂಘಟನೆಯ ಕಾರ್ಯಕರ್ತರು ಮತ್ತು ಭಜನಾ ಪರಿಷತ್ ಸದಸ್ಯರು ಭಾಗವಹಿಸಿದ್ದರು.