ಪುತ್ತೂರು ಯುವತಿಯ ಕೊಲೆ ಪ್ರಕರಣ

0

ಕನಕಮಜಲಿನ ಯುವಕನ ಕೃತ್ಯದ ಶಂಕೆ

ಭಗ್ನ ಪ್ರೇಮಕ್ಕೆ ಬಲಿಯಾದಳೇ ಬಿಎಸ್ಸಿ ಪದವೀಧರೆ



ಮುಂಡೂರು ಕಂಪದ ದಿ.ಗುರುವ ಎಂಬವರ ಪುತ್ರಿ ಜಯಶ್ರೀ ಎಂಬಾಕೆಯನ್ನು ಜ.17ರಂದು ಚೂರಿಯಿಂದ ಕೊಲೆ ಮಾಡಿರುವುದು  ಕನಕಮಜಲಿನ ಉಮೇಶ ಎಂಬಾತನ ಕೃತ್ಯ ಎಂದು ಪೊಲೀಸರು ಮಾಹಿತಿ ಸಂಗ್ರಹಿಸಿದ್ದು ತನಿಖೆ ಮುಂದುವರಿದಿದೆ.

*ದೂರಿನ ಸಾರಾಂಶ*

ಗಿರಿಜಾ (ಪ್ರಾಯ-43 ವರ್ಷ) ಗಂಡ ದಿ. ಗುರುವ ವಾಸ-ಕಂಪ ಮನೆ, )ಮುಂಡೂರು ಗ್ರಾಮ, ಪುತ್ತೂರು ತಾಲೂಕು ಎಂಬವರ ಮಗಳಾದ ಜಯಶ್ರೀ(23 ವರ್ಷ)ಎಂಬವರು ಬಿ.ಎಸ್.ಸಿ. ಪದವಿ ಮುಗಿಸಿ, ಮನೆಯಲ್ಲಿಯೇ ಇದ್ದರು. 17.01.2023ರಂದು ಬೆಳಿಗ್ಗೆ ಸುಮಾರು 11.00 ಗಂಟೆಗೆ ಗಿರಿಜಾರವರು ತನ್ನ ತೋಟಕ್ಕೆ ಹೋಗಿದ್ದಾಗ ಅವರ ಮಗಳಾದ ಜಯಶ್ರೀಯು ಮನೆಯಲ್ಲಿ ಇದ್ದವರು ಬೆಳಿಗ್ಗೆ ಸಮಯ ಸುಮಾರು 11.30 ಗಂಟೆಯ ವೇಳೆಗೆ ಅಮ್ಮಾ ಎಂದು ಕೂಗಿಕೊಂಡು ಗಿರಿಜಾರವರ ಬಳಿಗೆ ಓಡಿ ಬಂದಿರುತ್ತಾರೆ. ಆಗ ಅವರ ಹೊಟ್ಟೆಯಲ್ಲಿ ಗಾಯವಾಗಿ ರಕ್ತ ಸ್ರಾವವಾಗುತ್ತಿರುವುದು ಕಂಡು ಬಂದಿದ್ದು ಗಿರಿಜಾರವರು ಆಟೋ ರಿಕ್ಷಾದಲ್ಲಿ ಜಯಶ್ರೀಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದಾಗ ವೈದ್ಯರು ಮಧ್ಯಾಹ್ನ ಸುಮಾರು 12.15 ಗಂಟೆಗೆ ಪರೀಕ್ಷಿಸಿ ಜಯಶ್ರೀ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಸದ್ರಿ ಜಯಶ್ರೀಯನ್ನು ಕನಕಮಜಲಿನ ಉಮೇಶ ಎಂಬವನು ಕೆಲವು ಸಮಯದಿಂದ ಪ್ರೀತಿಸುತ್ತಿದ್ದು, ಆತನು ಆಗ್ಗಾಗ್ಗೆ ಗಿರಿಜಾರವರ ಮನೆಗೂ ಬರುತ್ತಿದ್ದನು. ಆದರೆ ಇತ್ತೀಚೆಗೆ ಅವನ ಗುಣ ನಡತೆ ಜಯಶ್ರೀಗೆ ಇಷ್ಟವಾಗದ ಕಾರಣ 2022ನೇ ನವೆಂಬರ್ ವೇಳೆಗೆ ಜಯಶ್ರೀಯು ಉಮೇಶನನ್ನು ದೂರ ಮಾಡಿರುತ್ತಾಳೆ. ಈ ವಿಷಯದಲ್ಲಿ ಉಮೇಶನು ಅಸಮಾಧಾನದಿಂದ ಇರುತ್ತಾನೆ. ಸದ್ರಿ ಜಯಶ್ರೀಯು ಈ ದಿನ ದಿನಾಂಕ 17.01.2023 ರಂದು ಬೆಳಿಗ್ಗೆ ಸುಮಾರು 11.30 ಗಂಟೆಗೆ ಫಿರ್ಯಾದುದಾರರ ಮನೆಯಲ್ಲಿದ್ದಾಗ ಯಾರೋ ಅಪರಿಚಿತರು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಮನೆಯೊಳಗಿದ್ದ ಜಯಶ್ರೀಯನ್ನು ಯಾವುದೋ ಆಯುಧದಿಂದ ತಿವಿದು ಕೊಲೆ ಮಾಡಿದ್ದು, ಈ ಕೃತ್ಯವನ್ನು ಸದ್ರಿ ಉಮೇಶನೇ ಮಾಡಿರುವ ಸಾಧ್ಯತೆ ಇರುವುದಾಗಿ ಸಂಶಯ ಇರುತ್ತದೆ ಎಂಬಿತ್ಯಾದಿ ದೂರು ದಾಖಲಿಸಿಕೊಳ್ಳಲಾಗಿದೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ. 07/2023 ಕಲಂ:- 448 302 ಭಾ.ದಂ.ಸಂ.ನಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.