ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳಿಗೊಳಪಟ್ಟ ಪಂಚಸ್ಥಾಪನೆಗಳಲ್ಲಿ ಒಂದಾದ ರೆಂಜಾಳ ಶ್ರೀ ಶಾಸ್ತಾವು ಸದಾಶಿವ ಮಹಾಗಣಪತಿ ದೇವರ ವಾರ್ಷಿಕ ಜಾತ್ರೋತ್ಸವವು ಜ.24ರಿಂದ ಆರಂಭಗೊಂಡು ಸಂಭ್ರಮ ಸಡಗರದಿಂದ ನಡೆಯುತ್ತಿದೆ. ನಿನ್ನೆ (ಜ.30ರಂದು) ಸಂಜೆ ತಂತ್ರಿಗಳ ಆಗಮನ. ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು, ಶ್ರೀ ಶಿವಪಂಚಾಕ್ಷರಿ ಭಜನಾ ಮಂಡಳಿ ರೆಂಜಾಳ ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ ನೆರವೇರಿತು. ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.
*ಸಾಂಸ್ಕೃತಿಕ ಕಾರ್ಯಕ್ರಮ* : ನಿನ್ನೆ (ಜ.30) ಸಂಜೆ 5.30ರಿಂದ ಬೊಳ್ಳಾಜೆ, ಮಿತ್ತಡ್ಕ, ದಾಸರಬೈಲು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಬೊಳ್ಳಾಜೆ ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಿತು. ಬಳಿಕ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಕೊರತ್ತೋಡಿ ನೆಲ್ಲೂರು ಕೆಮ್ರಾಜೆ ಇದರ ಮಕ್ಕಳ ತಂಡದಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ 9.30ರಿಂದ ವಿಠಲ ನಾಯಕ್ ಕಲ್ಲಡ್ಕ ಇವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು. ಈ ಸಂದರ್ಭ ಶ್ರೀ ವಿನಾಯಕ ಸಭಾಭವನ ಪ್ರೇಕ್ಷಕರಿಂದ ಭರ್ತಿಗೊಂಡಿತ್ತು. ಸುಮಾರು ಒಂದುವರೆ ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.
*ಇಂದು ನೃತ್ಯಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ*
ಇಂದು ಬೆಳಿಗ್ಗೆ 7ರಿಂದ ಗಣಪತಿ ಹೋಮ, ಬಿಂಬಶುದ್ಧಿ, ಕಲಶಪೂಜೆ, ಬಿಂಬ ಶುದ್ಧಿ ಕಲಶಾಭಿಷೇಕ, ಸಾನ್ನಿಧ್ಯ ಕಲಶ ಪೂಜೆ, ಸಾನ್ನಿಧ್ಯ ಕಲಶಾಭಿಷೇಕ ಹಾಗೂ ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7.00ಕ್ಕೆ ರಾತ್ರಿ ಪೂಜೆ ಬಳಿಕ ಭೂತಬಲಿ, ಸೇವಾಬಲಿಗಳು, ನೃತ್ಯಬಲಿ, ಬಟ್ಟಲುಕಾಣಿಕೆ, ರಾಜಾಂಗಣಪ್ರಸಾದ, ಸಂಪ್ರೋಕ್ಷಣೆ, ಮಂತ್ರಾಕ್ಷತೆ ನಡೆಯಲಿದೆ.
*ಸಾಂಸ್ಕೃತಿಕ ಕಾರ್ಯಕ್ರಮ* : ಸಂಜೆ 5.00ರಿಂದ ರೆಂಜಾಳ ಮತ್ತು ದಾಸಬೈಲು ಅಂಗನವಾಡಿ ಪುಟಾಣಿಗಳಿಂದ ಸಾಂಸ್ಕೃತಿಕ ರಸಸಂಜೆ ನಡೆಯಲಿದೆ. ಹಾಗೂ ಬಾಲಪ್ರತಿಭೆ ಕು| ಪ್ರಣನ್ಯ ಕುದ್ಪಾಜೆಯವರಿಗೆ ಅಭಿನಂದನಾ ಕಾರ್ಯಕ್ರಮ ಮತ್ತು ಶ್ರುತಿ ಗಾಯನ ಮೆಲೋಡಿಸ್ ದ.ಕ.ಮತ್ತು ಕಾಸರಗೋಡಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಗಾನ-ನೃತ್ಯ-ಕುಂಚ ಕಾರ್ಯಕ್ರಮ ನಡೆಯಲಿದೆ.