ಮಾರ್ಚ್ 10ರಂದು ಸುಳ್ಯದ ಸೈಂಟ್ ಜೋಸೆಫ್ ಪ್ರೌಢ ಶಾಲೆಯಲ್ಲಿ ಎಸ್ .ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ವಿದಾಯ ಕೂಟ ಸಮಾರಂಭವು ನಡೆಯಿತು.
ಹತ್ತನೇ ತರಗತಿಯ ವಿದ್ಯಾರ್ಥಿಗಳನ್ನು ಅತಿಥಿಗಳೊಂದಿಗೆ ಬ್ಯಾಂಡ್ ವಾದ್ಯ, ಸ್ವಾಗತ ಹಾಡುಗಳೊಂದಿಗೆ ವಿದಾಯ ಕೂಟ ಸಮಾರಂಭಕ್ಕೆ ಬಹಳ ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು.
ಶಾಲಾ ಸಂಚಾಲಕರಾದ ರೆ. ಫಾ. ವಿಕ್ಟರ್ ಡಿ’ಸೋಜಾ, ಸಭಾಧ್ಯಕ್ಷತೆ ವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಶಿಸ್ತು, ನಿಷ್ಠೆ ಹಾಗೂ ದೇವರ ಬಗ್ಗೆ ನಂಬಿಕೆಯೊಂದಿಗೆ ಉತ್ತಮವಾದ ಜೀವನವನ್ನು ನಡೆಸಬೇಕು ಎಂದು ಹೇಳಿ ಮುಂದಿನ ಉಜ್ವಲ ಭವಿಷ್ಯಕ್ಕೆ ಶುಭ ಆಶೀರ್ವಾದವನ್ನು ನೀಡಿದರು. ಹತ್ತನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ತಮ್ಮ ತರಗತಿಯ ಸವಿನೆನಪಿಗಾಗಿ ಶಾಲಾ ನಾಯಕಿ ಇಂಚರ ,ಉಪನಾಯಕ ಶರಣ್ ಎಚ್ ರಾವ್ ಹಾಗೂ ಫಾತಿಮಾತ್ ಅಫ್ರ, ಶ್ರೇಯಸ್ ಕುಕ್ಕುಜೆ ಕೊಡುಗೆಯನ್ನು ಶಾಲಾ ಮುಖ್ಯೋಪಾಧ್ಯಾಯನಿ ಹಾಗೂ ಸಂಚಾಲಕರಿಗೆ ಹಸ್ತಾಂತರಿಸಿದರು.
ಶಾಲಾ ವತಿಯಿಂದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಆಶೀರ್ವದಿಸಲಾಯಿತು . ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಬಿನೋಮಾ , ಪ್ರೌಢಶಾಲಾ ಶಿಕ್ಷಕರ ಕಾರ್ಯದರ್ಶಿ ಚೇತನ ಉಪಸ್ಥಿತರಿದ್ದು ಶುಭ ಕೋರಿದರು. 9ನೇ ತರಗತಿಯ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಗೂ ವಿದಾಯ ಗೀತೆಯನ್ನು ಹಾಡಿದರು. ಎಲ್ಲಾ ಶಿಕ್ಷಕರ ಪರವಾಗಿ ಸಹ ಶಿಕ್ಷಕಿ ಸೋಜಾ ಸಾಜು ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಾದ ಇಶಾ ಸ್ವಾಗತಿಸಿ, ಆಶ್ಲೇಷ ವಂದಿಸಿ, ರಿಯೋನ್ ಪ್ರಿನ್ಸನ್ ಡಿ ಸೋಜಾ ಹಾಗೂ ಫಾತಿಮಾತ್ ಶಮ್ನ ವಂದಿಸಿದರು. ನಂತರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಹಭೋಜನವನ್ನು ಸ್ವೀಕರಿಸಿದರು. ಕಾರ್ಯಕ್ರಮದ ಯಶಸ್ವಿಗೆ 9ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಹಕರಿಸಿದರು.