ಪುತ್ತೂರು ಉಪವಿಭಾಗದ ಪ್ರಭಾರ ಡಿವೈಎಸ್‌ಪಿಯಾಗಿ ಡಾ.ಗಾನಾ ಪಿ.ಕುಮಾರ್ ಕರ್ತವ್ಯಕ್ಕೆ ಹಾಜರು

0

ಪುತ್ತೂರು: ಪೊಲೀಸ್ ಇಲಾಖೆಯ ಪುತ್ತೂರು ಉಪವಿಭಾಗದ ಪ್ರಭಾರ ಡಿವೈಎಸ್ಪಿಯಾಗಿ ಡಾ. ಗಾನಾ ಪಿ. ಕುಮಾರ್ ಅವರು ಮೇ 22ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಮಂಗಳೂರಿನಲ್ಲಿರುವ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿಸ್ಟ್ರಿಕ್ಟ್ ಕ್ರೈಮ್ ರೆಕಾರ್ಡ್ ಬ್ಯೂರೋದ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಗಾನಾ ಪಿ.ಕುಮಾರ್ ಅವರನ್ನು ಪುತ್ತೂರು ಉಪವಿಭಾಗದ ಪ್ರಭಾರ ಡಿವೈಎಸ್ಪಿಯಾಗಿ ನೇಮಕ ಮಾಡಲಾಗಿದೆ. ಪುತ್ತೂರಿನಲ್ಲಿ ಎರಡು ವರ್ಷ ಡಿವೈಎಸ್ಪಿಯಾಗಿದ್ದ ಡಾ. ಗಾನಾ ಪಿ. ಕುಮಾರ್ ಅವರನ್ನು ಸಿಐಡಿ ವಿಭಾಗದ ಡಿವೈಎಸ್ಪಿಯಾಗಿ ವರ್ಗಾವಣೆಗೊಳಿಸಲಾಗಿತ್ತು. ಬಳಿಕ ವರ್ಗಾವಣೆ ರದ್ದುಗೊಳಿಸಿ ಎಸ್ಪಿ ಕಛೇರಿಯ ಡಿ.ಸಿ.ಆರ್.ಬಿ. ಡಿವೈಎಸ್ಪಿಯನ್ನಾಗಿ ನಿಯೋಜಿಸಲಾಗಿತ್ತು. ಪುತ್ತೂರು ಡಿವೈಎಸ್ಪಿಯಾಗಿ ಡಾ| ವೀರಯ್ಯ ಹಿರೇಮಠ್ ಅವರನ್ನು ನೇಮಕ ಮಾಡಲಾಗಿತ್ತು.

ಇದೀಗ ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಿರುವ ಆರೋಪ ಹೊತ್ತಿರುವ ಡಾ. ವೀರಯ್ಯ ಹಿರೇಮಠ್ ಅವರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಲಾಗಿದ್ದು ಬಂಟ್ವಾಳ ಡಿವೈಎಸ್ಪಿ ಪ್ರತಾಪ್ ಸಿಂಗ್ ತೋರಟ್ ಅವರಿಗೆ ಪ್ರಭಾರ ಜವಾಬ್ದಾರಿ ವಹಿಸಲಾಗಿತ್ತು. ಇದೀಗ ಡಾ.ಗಾನಾ ಪಿ. ಕುಮಾರ್ ಅವರನ್ನು ಪುತ್ತೂರಿಗೆ ಪ್ರಭಾರ ಡಿವೈಎಸ್‌ಪಿಯಾಗಿ ವರ್ಗಾವಣೆ ಮಾಡಿ ಹಿರಿಯ ಅಧಿಕಾರಿಗಳು ಅಧಿಕೃತ ಆದೇಶ ಹೊರಡಿಸಿದ್ದಾರೆ.