ಮರ್ಕಂಜದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ನಿಲ್ಲಿಸಲು ಜಿಲ್ಲಾಧಿಕಾರಿ ಸೂಚನೆ

0

ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಅಳವುಪಾರೆ ಎಂಬಲ್ಲಿ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ತಕ್ಷಣ ನಿಲ್ಲಿಸುವಂತೆ ದ. ಕ. ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆಂದು ತಿಳಿದು ಬಂದಿದೆ.‌ ಈ ಬಗ್ಗೆ ಅಧಿಕೃತ ಆದೇಶ ಇನ್ನಷ್ಟೆ ಆಗಬೇಕಿದೆ.

ಕಳೆದ ಕೆಲ ವರ್ಷಗಳಿಂದ ಈ ಭಾಗದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಇದಕ್ಕೆ ಸ್ಥಳೀಯರ ವಿರೋಧ ಹಾಗೂ ಪ್ರತಿಭಟನೆಗಳು ನಡೆದಿತ್ತು.

ಗಣಿಗಾರಿಕೆ ನಡೆಯುತ್ತಿರುವ ಪರಿಸರದ ಸುತ್ತಮುತ್ತ ನೂರಾರು ಮನೆಗಳು, ಹತ್ತಿರದಲ್ಲಿ ಸರ್ಕಾರಿ ಶಾಲೆ, ನೀರಿನ ಟ್ಯಾಂಕ್,ಸರ್ಕಾರಿ ಕಟ್ಟಗಳು, ದೇವಸ್ಥಾನ ಇದೆಲ್ಲಾ ಇದ್ದು ಮತ್ತು ಸ್ಫೋಟಕಗಳನ್ನು ಬಳಸುವುದರಿಂದ ತೊಂದರೆ ಉಂಟಾಗುವ ಹಿನ್ನಲೆ ಸ್ಥಳೀಯರು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಗಣಿಗಾರಿಕೆ ನಿಲ್ಲಿಸುವಂತೆ ಮನವಿ ಮಾಡಿದ್ದಲ್ಲದೆ ಹಲವು ಬಾರಿ ಧರಣಿ ಕೂಡ ನಡೆಸಿದ್ದರು.


ಈ ಹಿನ್ನಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಇದನ್ನು ಸ್ಥಳ ಪರಿಶೀಲಿಸಿ ಕ್ರಷರ್ ಸುರಕ್ಷಿತ ವಲಯದಿಂದ ಅಂತರದೊಳಗೆ ಮನೆ, ಕುಡಿಯುವ ನೀರಿನ ಟ್ಯಾಂಕ್ ಹಾಗೂ, ಸರ್ಕಾರಿ ಶಾಲೆ ಹಾಗೂ ಇರುವುದರಿಂದ ಪ್ರಸ್ತುತ ಸದರಿ ಕಲ್ಲು ಗಣಿ ಗುತ್ತಿಗೆ ಪ್ರದೇಶದಲ್ಲಿ ಸ್ಫೋಟಕ ಬಳಸುವುದನ್ನು ಸ್ಥಗಿತಗೊಳಿಸಲು ಜಿಲ್ಲಾಧಿಕಾರಿಯವರಿಗೆ ವರದಿ ನೀಡಿದ್ದರು.

ಇದೀಗ ಈ ಗಣಿಗಾರಿಕೆಯನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿಯವರು ಸ್ಥಳೀಯ ಅಧಿಕಾರಿಯವರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಸುಳ್ಯ ತಹಶಿಲ್ದಾರ್ ರನ್ನು ಸಂಪರ್ಕಿಸಿ ವಿಚಾರಿಸಿದಾಗ ಜಿಲ್ಲಾಧಿಕಾರಿಗಳು ಗಣಿಗಾರಿಕೆ ನಿಲ್ಲಿಸುವಂತೆ ಹೇಳಿದ್ದಾರೆ. ಆದೇಶ ಇನ್ನಷ್ಟೆ ಬರಬೇಕಾಗಿದೆ ಎಂದು‌ ತಿಳಿಸಿದ್ದಾರೆ.