ವಿದ್ಯಾರ್ಥಿಗಳಿಗೆ ಶುಭ ಸುದ್ದಿ : ಹೊಸ ಪಾಸ್‌ ಇಲ್ಲದಿದ್ದರೂ ಜೂ.30ರವರೆಗೆ ಉಚಿತ ಪ್ರಯಾಣಕ್ಕೆ ಅವಕಾಶ

0

ರಾಜ್ಯದ ವಿದ್ಯಾರ್ಥಿಗಳು ಜೂ.30ರವರೆಗೆ ಹೊಸ ಬಸ್‌ಪಾಸ್‌ ಮಾಡಿಕೊಳ್ಳದೇ ಉಚಿತವಾಗಿ ಸಾರಿಗೆ ಬಸ್‌ನಲ್ಲಿ ಸಂಚಾರ ಮಾಡಲು ಸರ್ಕಾರದಿಂದ ಅನುಮತಿ ನೀಡಲಾಗಿದೆ.

ರಾಜ್ಯದಲ್ಲಿ 2023-24ನೇ ಶೈಕ್ಷಣಿಕ ಸಾಲಿನ ಪಠ್ಯ ಚಟುವಟಿಕೆಗಳು ಆರಂಭಗೊಂಡ ಹಿನ್ನೆಲೆಯಲ್ಲಿ ಪಾಸ್ ವಿತರಣೆ ಆಗುವವರೆಗೂ ಜೂ.15ರವರೆಗೆ ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ಸಾರಿಗೆ ಇಲಾಖೆ ಆದೇಶ ಹೊರಡಿಸಿತ್ತು. ಆದರೆ, ಈಗ ಹೊಸ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ವಿದ್ಯಾರ್ಥಿಗಳಿಗೆ ಜೂ.12ರಿಂದ ಬಸ್‌ ಪಾಸ್‌ ಪಡೆಯಲು ಸೇವಾಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಆನ್‌ಲೈನ್‌ ಮೂಲಕ ವಿದ್ಯಾರ್ಥಿ ಪಾಸ್‌ಗೆ ಅರ್ಜಿ ಸಲ್ಲಿಸುವುದಕ್ಕೆ ಮತ್ತು ಪಾಸ್‌ ಪಡೆಯಲು ಕಾಲಾವಕಾಶಬೇಕು.

ಈಗಾಗಲೇ ಶೈಕ್ಷಣಿಕ ತರಗತಿ ಶುರುವಾಗಿರುವ ಕಾರಣ, ಕೇವಲ 3 ದಿನಗಳಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಪಾಸ್‌ ಪಡೆಯಲು ಸಾಧ್ಯವಿಲ್ಲವೆಂದು ಪರಿಗಣಿಸಿ ಉಚಿತ ಪ್ರಯಾಣವನ್ನು ಜೂ.30ರವರೆಗೆ ಅವಕಾಶ ನೀಡಲಾಗಿದೆ.

ಕೆಎಸ್‌ಆರ್‌ಟಿಸಿಯ ಸಾಮಾನ್ಯ ಮತ್ತು ವೇಗದೂತ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಜೂನ್‌ 30ರ ತನಕ ನಗರ ಮತ್ತು ಹೊರವಲಯಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಇನ್ನು ಜೂ.30ರೊಳಗೆ ವಿದ್ಯಾರ್ಥಿಗಳು ಸರ್ಕಾರದಿಂದ ನೀಡುವ ಪ್ರಸಕ್ತ ಸಾಲಿನ (2023-24) ವಿದ್ಯಾರ್ಥಿ ಬಸ್‌ ಪಾಸ್‌ ಪಡೆಯಬೇಕು. ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬೇಕಾದರೆ ಪ್ರಸಕ್ತ ವರ್ಷದಲ್ಲಿ ಶಾಲಾ / ಕಾಲೇಜುಗಳಿಗೆ ದಾಖಲಾಗಿರುವುದನ್ನು ದೃಢೀಕರಿಸುವ ಶುಲ್ಕ ಪಾವತಿ ರಸೀದಿ ಅಥವಾ ಕಳೆದ ವರ್ಷದ (2022-23ನೇ ಸಾಲಿನ) ವಿದ್ಯಾರ್ಥಿ ಬಸ್‌ ಪಾಸ್ ಅನ್ನು ನಿರ್ವಾಹಕರಿಗೆ ತೋರಿಸಬೇಕಾದ್ದು ಅವಶ್ಯ ಎಂದು ನಿಗಮದ ಸುತ್ತೋಲೆ ವಿವರಿಸಿದೆ.