ದೇವಚಳ್ಳದ ಯುವಕ ಬೆಂಗಳೂರಿನಲ್ಲಿ ನೇಣು ಬಿಗಿದು ಆತ್ಮಹತ್ಯೆ

0

ದೇವಚಳ್ಳದ ಯುವಕನೋರ್ವ ಬೆಂಗಳೂರಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ರಾತ್ರಿ ವರದಿಯಾಗಿದೆ.

ದೇವಚಳ್ಳ ಗ್ರಾಮದ ತಳೂರಿನ ಬಾಲಕೃಷ್ಣ ಎಂಬವರ ಪುತ್ರ ಹೇಮನಾಥ ಎಂಬವರೇ ಮೃತ ವ್ಯಕ್ತಿ.

ಹೇಮನಾಥರವರು ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡು ಸಂಸಾರ ಸಮೇತ ನೆಲೆಸಿದ್ದರು. ಅಲ್ಲಿಯೇ ಸೆಕ್ಯುರಿಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಹೇಮನಾಥರವರು ಕಳೆದ ಐದಾರು ತಿಂಗಳಿನಿಂದ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಇವರ ಪತ್ನಿಯೂ ಬೆಂಗಳೂರಿನ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದರು.

ಮನೆಯಲ್ಲಿದ್ದ ಹೇಮನಾಥರವರು ನಿನ್ನೆ ಸಂಜೆ ಅಂಗಡಿಗೆ ಹೋಗಿ ಬಂದವರು ರೆಸ್ಟ್ ತೆಗೆದುಕೊಳ್ಳುವುದಾಗಿ ತನ್ನ ರೂಮಿಗೆ ಹೋಗಿದ್ದರೆನ್ನಲಾಗಿದೆ. ಮನೆಯಲ್ಲಿದ್ದ ಮಕ್ಕಳು ಹೊರಗೆ ಜಗುಲಿಯಲ್ಲಿ ಮಲಗಿದ್ದರೆನ್ನಲಾಗಿದೆ. ಪತ್ನಿ ಬಂದು ಮಕ್ಕಳಿಗೆ ಬೆಡ್ ಶೀಟ್ ಕೊಡಲು ಗಂಡ ಹೇಮನಾಥರನ್ನು ಕರೆದಾಗ ಅವರು ಪ್ರತಿಕ್ರಿಯಿಸಲಿಲ್ಲವೆಂದೂ, ರೂಮಿಗೆ ಒಳಗಿನಿಂದ ಚಿಲಕ ಹಾಕಿದ್ದ ಕಾರಣ, ಪಕ್ಕದ ಬಿಲ್ಡಿಂಗ್ ಮೂಲಕ ರೂಮನ್ನು ನೋಡಿದಾಗ ಹೇಮನಾಥರು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡು ಬಂದರೆನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ವಿಷಯ ತಿಳಿದ ಮನೆಯವರು ನಿನ್ನೆ ರಾತ್ರಿ ಬೆಂಗಳೂರಿಗೆ ತೆರಳಿದ್ದಾರೆಂದು ತಿಳಿದು ಬಂದಿದೆ.

ಅವರಿಗೆ ೪೫ ವರ್ಷ ವಯಸ್ಸಾಗಿತ್ತು. ಮೃತರು ತಾಯಿ, ಪತ್ನಿ, ಮೂರು ಜನ ಮಕ್ಕಳು, ಸಹೋದರ ಭಾನುಪ್ರಕಾಶ್ ತಳೂರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.