ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತ ಮಂಡಳಿಯಿಂದ ದೇವಸ್ಥಾನಕ್ಕೆ ಕೋಟ್ಯಾಂತರ ನಷ್ಟ, ಕಮಿಶನ್ ಪಡೆವ ಆರೋಪ

0

ಶಿಥಿಲಗೊಂಡು ಸೋರುತ್ತಿರುವ ದೇವಳದ ಸುತ್ತು ಪೌಳಿ ಕೆಲಸ ಮಾಡುತ್ತಿಲ್ಲ

ಆಡಳಿತ ಮಂಡಳಿಯ ವಜಾಕ್ಕೆ ಆಗ್ರಹ

ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿ ಪತ್ರಿಕಾಗೋಷ್ಠಿ

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತ ಮಂಡಳಿ ವತಿಯಿಂದ ದೇವಸ್ಥಾನಕ್ಕೆ ಕೋಟ್ಯಾಂತರ ರುಪಾಯಿ ನಷ್ಟ ಉಂಟಾಗಿದೆ, ಕಮಿಶನ್ ಪಡೆಯಲಾಗುತ್ತಿದೆ ಎಂದು ಆರೋಪಿಸಲಾಗಿದ್ದು ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿದೆ ಈ ಆಡಳಿತ ಮಂಡಳಿಯನ್ನು ವಜಾ ಮಾಡಬೇಕೆಂದು ಸುಬ್ರಹ್ಮಣ್ಯದ ಕಾಂಗ್ರೆಸ್ ಸಮಿತಿ ಪತ್ರಿಕಾಗೋಷ್ಠಿಯಲ್ಲಿ ಜು.27 ರಂದು ತಿಳಿಸಿದೆ.

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಳೆದ ಮೂರು ವರ್ಷಗಳಿಂದ
ಬೇಕಾಗುವ ದಿನಸಿ ಸಾಮಾಗ್ರಿಗಳನ್ನು ಯಾವುದೇ ಟೆಂಡರ್ ನಡೆಸದೇ ನಿಯಮ ಬಾಹಿರವಾಗಿ ಮಂಗಳೂರಿನ ಜನತಾ ಬಜಾರ್‌ನಿಂದ ಖರೀದಿಸಲಾಗಿದ್ದು, ಇದರಿಂದ ಪ್ರತೀ ವರ್ಷ ಸುಮಾರು ೫ -೬ ಕೋಟಿ ಹೆಚ್ಚುವರಿ ಪಾವತಿಯಾಗಿ ನಷ್ಟ ಉಂಟಾಗುತ್ತಿದೆ ಎಂದು ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಹರೀಶ್‌ಇಂಜಾಡಿ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಟೆಂಡರ್ ನಡೆಸದೇ ಸಾಮಾಗ್ರಿ ಖರೀದಿ ಬಗ್ಗೆ ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಪ್ರಶ್ನಿಸಿದ್ದರು. ಅಂದಿನ ಮುಜರಾಯಿ ಸಚಿವರು ಕ್ರಮದ ಭರವಸೆ ನೀಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ನಮ್ಮ ಗ್ರಾಮ ಸಮಿತಿ ವತಿಯಿಂದ ಈಗೀನ ಮುಜರಾಯಿ ಸಚಿವರಿಗೆ ಮನವಿ ಸಲ್ಲಿಸಿದ ನಿಟ್ಟಿನಲ್ಲಿ ಸಚಿವರು ಆಯುಕ್ತರಿಗೆ ಪತ್ರ ಬರೆದು ನಿಯಮಾನುಸಾರ ಇ-ಹರಾಜು ನಡೆಸುವಂತೆ ಆದೇಶ ನೀಡಿದ್ದರು. ಅದರಂತೆ ಆಯುಕ್ತರಿಂದ ಜು.೨೦ರಂದು ದೇವಳದ ಕಛೇರಿಗೆ ಪತ್ರ ಬಂದಿದ್ದರೂ ಜು.೨೪ರಂದು ನಡೆದ ಆಡಳಿತ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ಮಂಡಿಸದೇ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಅಧ್ಯಕ್ಷರು ಉದ್ದೇಶಪೂರ್ವಕವಾಗಿ ಕಾನೂನುಬಾಹಿರ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದರು.

ಕಳೆದ ಮೂರು ವರ್ಷಗಳಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಮಾಸ್ಟರ್‌ ಪ್ಲಾನಿನ ಯಾವುದೇ ಕಾಮಗಾರಿಗಳು ನಿರೀಕ್ಷಿತ ವೇಗದಲ್ಲಿ ನಡೆದಿಲ್ಲ, ಹಲವು ವರ್ಷಗಳಿಂದ ಶಿಥಿಲಗೊಂಡು ಸೋರುತ್ತಿರುವ ದೇವಳದ ಸುತ್ತುಪೌಳಿಯನ್ನು ನಿರ್ಮಿಸುವಲ್ಲಿ ಆಡಳಿತ ವಿಫಲವಾಗಿದೆ. ಎರಡು ವರ್ಷಗಳಿಂದ ಮಾಸ್ಟರ್ ಪ್ಲಾನ್ ಸಮಿತಿ ಸಭೆ ನಡೆಸಿಲ್ಲ, ದೇವಳಕ್ಕೆ ಸೇರಿದ ಹಲವಾರು ಅಂಗಡಿಗಳ ಕೋಟ್ಯಾಂತರ ರೂ. ಬಾಡಿಗೆ ವಸೂಲಾತಿಯಾಗಿಲ್ಲ, ದೇವಳದ ಖಾಯಂ ನೌಕರರಿಗೆ ಶಾಸನಬದ್ಧವಾಗಿ ದೊರೆಯಬೇಕಾದ ಶೇ.೧೭ ಮಧ್ಯಾಂತರ ಪರಿಹಾರವನ್ನು ದೊರಕಿಸುವಲ್ಲಿ ಆಡಳಿತ ಸಮಿತಿ ವಿಫಲವಾಗಿದೆ ಎಂದು ಅವರು ಆರೋಪಿಸಿದರು. ಈ ಬಗ್ಗೆ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಹಿಂದಿನ ಆಡಳಿತ ಮಂಡಳಿ ಅಂಗಡಿ ಗುಡ್ಡೆಯಲ್ಲಿ ಮಾಡಬಯಸಿದ್ದ 99 ಲಕ್ಷ ವೆಚ್ಚದ ಹಾಲ್ ರದ್ದು ಗೊಳಿಸಿದ್ದಾರೆ ಎಂದು ಆರೋಪಿಸಿದರು.

ಶಿವರಾಮ ರೈ ಮಾತನಾಡಿ ಸುಬ್ರಹ್ಮಣ್ಯ ಗ್ರಾ.ಪಂ ವತಿಯಿಂದ ಮೀಟಿಂಗ್ ಕರೆದರೆ ದೇವಸ್ಥಾನದವರು ತಾತ್ಸಾರ ಮಾಡುತ್ತಾರೆ ಯಾರು ಬರಬೇಕೋ ಅವರು ಬರುವುದಿಲ್ಲ. ಅಧಿಸೂಚನೆ ಹೊರಡಿಸಿದ ಕೆಲಸ ಮಾಡುವುದಿಲ್ಲ ಪಾರ್ಕಿಂಗ್ ವಿಚಾರವಾಗಿ ಆಡಳಿತ ಮಂಡಳಿಯ ನಿರ್ಧಾರದ ಬಗ್ಗೆ ಡಿ.ಸಿ ಕೆಲ ವಿಚಾರ ಮುಂದಿಟ್ಟರೂ ಸರಿಯಾದ ಕ್ರಮ ಆಡಳಿತ ಮಂಡಳಿ ಪಾಲಿಸಿಲ್ಲ. ಸುಬ್ರಹ್ಮಣ್ಯದ ರಸ್ತೆಗಳ ನಿರ್ವಹಣೆ ದೇವಸ್ಥಾನದ ಕೆಲಸ ಅದನ್ನು ಮಾಡುವುದು ಬಿಟ್ಟು ವಿನಾ ಕಾರಣ ನೆಪ ಹೇಳಿಕೊಂಡು ಕಾಲ ಹರಣ ಮಾಡುತಿದ್ದಾರೆ ಎಂದರು.

ಬಾಲಕೃಷ್ಣ ಮರೀಲ್ ಮಾತನಾಡಿ ದೇವಸ್ಥಾನದ ಆಡಳಿತ ಮಂಡಳಿ ಕಾನೂನು ಬಾಹಿರ ಕಾರ್ಯಕ್ರಮ ಮಾಡಿದೆ, ಅದಕ್ಕೆ ನಮ್ಮಲ್ಲಿ ಸಾಕ್ಷಿ ಇದೆ. ಗ್ರಾ.ಪಂ ನ ವಾಣಿಜ್ಯ ಸಂಕಿರ್ಣ ಇದ್ದದನ್ನು ತೆಗೆಯಲಾಗಿದ್ದು ಅದಕ್ಕೆ ಪರಿಹಾರ ನೀಡಿಲ್ಲ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿ
ತಾ.ಪಂ.ಮಾಜಿ ಸದಸ್ಯ ಅಶೋಕ್ ನೆಕ್ರಾಜೆ, ಕಾಂಗ್ರೆಸ್ ಮುಖಂಡರಾದ ಲಕ್ಷ್ಮೀಶ ಗಬ್ಬಲಡ್ಕ, ಮೋಹನದಾಸ ರೈ, ಪವನ್ ಕುಮಾರ್, ಸೌಮ್ಯ, ಭಾರತಿ, ಶೇಷಕುಮಾರ ಶೆಟ್ಟಿ, ಮಾಧವ ದೇವರಗದ್ದೆ, ಗೋಪಾಲಕೃಷ್ಣ ಭಟ್, ಮನೋಜ್ ಕೈಕಂಬ, ಸುಬ್ರಹ್ಮಣ್ಯ ರಾವ್, ರತನ್ ಉಪಸ್ಥಿತರಿದ್ದರು.