ಬರ ನಿರ್ವಹಣೆಯಲ್ಲಿ ರಾಜ್ಯ ಸರಕಾರ ವಿಫಲ : ಗ್ಯಾರಂಟಿ ಯೋಜನೆಯೂ ಅನುಷ್ಠಾನವಾಗುತಿಲ್ಲ : ಕೋಟ ಶ್ರೀನಿವಾಸ ಪೂಜಾರಿ

0

ರಾಜ್ಯದ ಎಲ್ಲ ಕಡೆಯಲ್ಲಿಯೂ ಮಳೆ, ಬೆಳೆ ಇಲ್ಲದೆ ಬರ ಬಂದಿದ್ದರೂ ಅದರ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಬರ ನಿರ್ವಹಣೆಗೆ ಸರಕಾರ 10 ಸಾವಿರ ಕೋಟಿ ಬರ ಪರಿಹಾರ ಬಿಡುಗಡೆ ಮಾಡಬೇಕೆಂದು‌ ನಾವು ಆಗ್ರಹಿಸುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ‌ಹೇಳಿದ್ದಾರೆ.

ನ.7 ರಂದು ಸುಳ್ಯ ಪ್ರವಾಸದಲ್ಲಿದ್ದ ಅವರು‌ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ರಾಜ್ಯದಲ್ಲಿ ಬರ ಇದೆ. ಈ ಸಂದರ್ಭದಲ್ಲಿ ಸರಕಾರಗಳು ನಿರ್ವಹಣೆಯಲ್ಲಿ ತೊಡಗಬೇಕು. ರೈತರಿಗೆ‌ ಬೀಜ ಬಿತ್ತನೆಗೆ ಸಹಕಾರ ನೀಡಬೇಕು. ಕೆರೆಯಲ್ಲಿ ಹೂಳು ತುಂಬಿದ್ದರೆ ಹೂಳೆತ್ತುವ ಕಾರ್ಯ ನಡೆಸಬೇಕು. ಗೋ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ 33 ಸಾವಿರ ಕೋಟಿ ಬೆಳೆ ನಷ್ಟ ಮತ್ತು ಹಾನಿ‌ ಸಂಭವಿಸಿದ್ದರೂ ರಾಜ್ಯ ಸರಕಾರ ಕೇವಲ 324 ಕೋಟಿ ಬಿಡುಗಡೆ ಮಾಡಿದೆ. ಅದು ಎಲ್ಲಿಗೂ ಸಾಕಾಗುವುದಿಲ್ಲ ಕನಿಷ್ಟವೆಂದರೆ 10 ಸಾವಿರ ಕೋಟಿಯಾದರೂ ಬಿಡುಗಡೆ ಮಾಡಬೇಕು ಎಂದ ಅವರು‌ ಮೊದಲು ರಾಜ್ಯ ಸರಕಾರ ಅನುದಾನ ಬಿಡುಗಡೆ‌ ಮಾಡಲಿ. ಬಳಿಕ ಕೇಂದ್ರ ಸರಕಾರದಿಂದ ಅನುದಾನ ತರೋಣ ಎಂದು ಅವರು ಹೇಳಿದರು.


ರಾಜ್ಯದ ಬರ‌ ಅಧ್ಯಯನಕ್ಕಾಗಿ ಮಾಜಿ‌ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ‌ಹಾಗೂ‌ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ರ ಮಾರ್ಗದರ್ಶನದಲ್ಲಿ 17 ತಂಡಗಳನ್ನು ರಚನೆ ಮಾಡಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಗೂ ಈ ತಂಡಗಳು ತೆರಳಿ ಅಧ್ಯಯನ ನಡೆಸಿ ಆ ವರದಿಯನ್ನೂ ಸರಕಾರಕ್ಕೆ ಸಲ್ಲಿಸಲಾಗುವುದು. ದ.ಕ. ಜಿಲ್ಲೆಯಲ್ಲಿ ಬರ ಇದ್ದರೂ ಕೆಲವು ತಾಲೂಕುಗಳು ಇನ್ನೂ ಬರ ಪಟ್ಟಿಗೆ ಸೇರಿಲ್ಲ. ಈ ಸಮೀಕ್ಷೆಯೊಂದಿಗೆ ದ.ಕ. ಜಿಲ್ಲೆಯನ್ನೂ ಕೂಡಾ ಬರದ ಪಟ್ಟಿಗೆ ಸೇರಿಸಲು ನಾವು ಒತ್ತಾಯ ಮಾಡುತ್ತೇವೆ ಎಂದು ಅವರು ಹೇಳಿದರು.

ಗ್ಯಾರಂಟಿಗಳ ಅನುಷ್ಠಾನ ವಿಲ್ಲ : ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಮೊದಲೇ ಘೋಷಣೆ ಮಾಡಿದ್ದ ಗ್ಯಾರಂಟಿಗಳನ್ನು ಸರಿಯಾಗಿ ಅನುಷ್ಠಾನ ಮಾಡಿಲ್ಲ. ಗೃಹಲಕ್ಷ್ಮಿ ಯೋಜನೆಯಲ್ಲಿ ಇನ್ನೂ 9 ವರೆ ಲಕ್ಷ ಜನರಿಗೆ ಯೋಜನೆ ಸಿಕ್ಕಿಲ್ಲ. ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ. ಯುವ ನಿಧಿ ಘೋಷಣೆ ಗಷ್ಟೆ ಸೀಮಿತವಾಗಿದೆ. ವಿದ್ಯುತ್ ದರ ಹೆಚ್ಚು ಮಾಡಿ ಒಂದು ಕಡೆ ಫ್ರೀ ಎಂ ಹೇಳುತಿದ್ದಾರೆ ಎಂದು ಅವರು ದೂರಿದರು.

ಸರಕಾರ ಬಂದು 6 ತಿಂಗಳು ಸಮೀಪಿಸುತಿದೆ. ಇಷ್ಟು ಸಮಯ ಆದರೂ 1 ರೂ ಕೂಡಾ ಶಾಸಕರಿಗೆ ಅನುದಾನ‌ ಬಿಡುಗಡೆಗೊಳಿಸಿಲ್ಲ. ಇದರಿಂದ ಶಾಸಕರು ಅಸಾಯಕರಾಗುವ ಸ್ಥಿತಿ ಇದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿ, ಮಾಜಿ ಅಧ್ಯಕ್ಷ ಎಸ್.ಎನ್. ಮನ್ಮಥ, ಹಿರಿಯರಾದ ಎನ್.ಎ.ರಾಮಚಂದ್ರ, ಪ್ರಧಾನ ಕಾರ್ಯದರ್ಶಿಗಳಾದ ರಾಕೇಶ್ ರೈ ಕೆಡೆಂಜಿ, ಸುಭೋದ್ ಶೆಟ್ಟಿ ಮೇನಾಲ, ನಗರ ಪಂಚಾಯತ್ ಸದಸ್ಯರು ಇತರ ಪದಾಧಿಕಾರಿಗಳು ಇದ್ದರು.