ಮಿಸೆಸ್ ಮಲೇಷ್ಯಾ ಸ್ಪರ್ಧೆಯಲ್ಲಿ ಮೂರು ಪ್ರಶಸ್ತಿ ಗೆದ್ದ ಸಂಪಾಜೆಯ ಚೈತ್ರಾ ದೇವಜನ

0


ಸ್ಪರ್ಧಾ ಕಣದಲ್ಲಿದ್ದ ಏಕೈಕ ಭಾರತೀಯ ಮಹಿಳೆ


ಮಲೇಷ್ಯಾದಲ್ಲಿ ನೆಲೆಸಿರುವ ಸಂಪಾಜೆ ಮೂಲದ ಚೈತ್ರಾ ದೇವಜನ ಅವರು ಈ ಬಾರಿಯ ಮಿಸೆಸ್ ಮಲೇಷ್ಯಾ ಫೈನಲಿಸ್ಟ್ ಆಗಿ ಮೂರು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.


ಕುಶಲ ದಿವಾ, ಟ್ಯಾಲೆಂಟ್ ಟೊರ್ನೆಡೊ, ಬಾರ್ಬಿ ಐಕಾನ್ ಶೀರ್ಷಿಕೆಗಳಲ್ಲಿ ವಿವಿಧ ನಿರ್ವಹಣೆ ಪ್ರದರ್ಶಿಸಿ ಈ ವಿಭಾಗಗಳಲ್ಲಿ ಚೈತ್ರಾರವರು ಪ್ರಶಸ್ತಿ ಪಡೆದಿದ್ದಾರೆ.


ಸಂಪಾಜೆಯ ದೇವಜನ ದಿ.ಜಯಸೂರ್ಯ ಮತ್ತು ದಿ. ನಾಗವೇಣಿ ದಂಪತಿಯ ಪುತ್ರಿಯಾಗಿರುವ ಚೈತ್ರಾರವರು ಹೈದರಾಬಾದ್ ಮೂಲದ ರಾಜೇಂದ್ರ ಪ್ರಸಾದ್ ಅವರೊಂದಿಗೆ ವಿವಾಹವಾಗಿ ಕಳೆದ ಏಳು ವರ್ಷಗಳಿಂದ ಮಲೇಷ್ಯಾದ ಕೌಲಾಲಂಪುರದಲ್ಲಿ ನೆಲೆಸಿದ್ದು, ಅಲ್ಲಿ ಸ್ವಂತ ಉದ್ಯಮ ನಡೆಸುತ್ತಿದ್ದಾರೆ.
ಬಹುಮುಖ ಪ್ರತಿಭೆಯಾಗಿರುವ ಚೈತ್ರಾರವರು ಮಿಸೆಸ್ ಮಲೇಷ್ಯಾ ಸ್ಪರ್ಧೆಗೆ ಆಯ್ಕೆಯಾಗಿ ಹಲವು ಹಂತಗಳಲ್ಲಿ ಸ್ಪರ್ಧಿಸಿ ಫೈನಲಿಸ್ಟ್ ಆಗಿದ್ದು, ನ. 1 ರಿಂದ 5 ರವರೆಗೆ ಫೈನಲ್ ಸ್ಪರ್ಧೆ ನಡೆಯಿತು.


ಸಂಪಾಜೆ ಹಿರಿಯ ಪ್ರಾಥಮಿಕ ಶಾಲೆ, ಅರಂತೋಡು ಎನ್‌ಎಂಪಿಯುಸಿ ಹಳೆ ವಿದ್ಯಾರ್ಥಿನಿಯಾಗಿರುವ ಚೈತ್ರಾ ಅವರು ನಿಟ್ಟೆಯಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್, ಪಿಳನಿ ಶ್ರೀಧರ್ ಯುನಿವರ್ಸಿಟಿಯಲ್ಲಿ ಬಿ. ಟೆಕ್ ಹಾಗೂ ಮುಂಬೈಯ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಎಂಬಿಎ ಪೂರೈಸಿದ್ದು, ಗುಜರಾತ್‌ನ ಸೂರತ್ ನಲ್ಲಿ ೮ ವರ್ಷ ಹಾಗೂ ಬೆಂಗಳೂರಿನಲ್ಲಿ
1 ವರ್ಷ ವಿವಿಧ ಕಂಪೆನಿಗಳ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ವೃತ್ತಿ ನಿರ್ವಹಿಸಿದ್ದರು.


ವಿವಾಹ ನಂತರ ಮಲೇಷ್ಯಾದಲ್ಲಿ ನೆಲೆಸಿದ್ದು ಹೃಶಾಸ್ ಸ್ಪೈಸ್ ಬಾಸ್ಕೆಟ್ ಎಂಬ ಸ್ವಂತ ಉದ್ದಿಮೆ ನಡೆಸುತ್ತಿದ್ದು, ಇದರ ಉತ್ಪನ್ನಗಳು ಅಮೇರಿಕಾ, ಕೆನಡಾ, ಯುರೋಪ್ ಮೊದಲಾದ ದೇಶಗಳಿಗೆ ರಫ್ತಾಗುತ್ತಿದೆ.


ಚೈತ್ರಾ ಅವರ ಪತಿ ರಾಜೇಂದ್ರ ಪ್ರಸಾದ್ ಸ್ವಿಟ್ಜರ್ ಲೆಂಡ್ ಮೂಲದ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ವೃತ್ತಿ ನಿರ್ವಹಿಸುತ್ತಿದ್ದು, ಪುತ್ರಿಯರಾದ 6 ವರ್ಷದ ಋತಿಕಾ ಮತ್ತು 4 ವರ್ಷದ ನಿಶಿತಾರೊಂದಿಗೆ ನೆಲೆಸಿದ್ದಾರೆ.