ಜಾಲ್ಸೂರು: ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತಿಯಲ್ಲಿ ಗ್ರಾ.ಪಂ. ಪ್ರಗತಿ ಪರಿಶೀಲನಾ ಸಭೆ

0

ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಗೆ ಅನುದಾನಕ್ಕಾಗಿ ಮನವಿ ಸಲ್ಲಿಕೆ

ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರ ಉಪಸ್ಥಿತಿಯಲ್ಲಿ ಜಾಲ್ಸೂರು ಗ್ರಾಮ ಪಂಚಾಯತಿ ಪ್ರಗತಿ ಪರಿಶೀಲನಾ ಸಭೆಯು ನ.7ರಂದು ಜರುಗಿತು.

ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಮರಸಂಕ ಅವರು ಅಧ್ಯಕ್ಷತೆ ವಹಿಸಿದ್ದರು.ಮಾಜಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಜಾಲ್ಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆ , ಮಂಜೂರಾದ ವಸತಿ ಯೋಜನೆ ಮತ್ತು ಅದರ ಪ್ರಗತಿವಾರು ವಿಮರ್ಶೆಯ ಕುರಿತು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯವರಲ್ಲಿ ವಿವರ ಕೇಳಿದರು.


ಜಲಜೀವನ್ ಯೋಜನೆಯಡಿ ನೀರಿನ ಸಂಪರ್ಕ ಹಾಗೂ ಕುಕ್ಕಂದೂರು ಸಿ. ಆರ್.ಸಿ. ತಮಿಳು ಕಾಲನಿಯ ನಿವಾಸಿಗಳಿಗೆ ಸರ್ವೆ ನಡೆಸಿ ನಿವೇಶನ ಹಂಚಿಕೆ, ಪಡಿತರ ಚೀಟಿ ಸಿಗದವರಿಗೆ ಹೊಸದಾಗಿ ಪಡಿತರ ಚೀಟಿ ನೀಡುವ ಕುರಿತು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೊಗ ಖಾತ್ರಿ ಯೋಜನೆಯ ಕಾಮಗಾರಿಯ ಕುರಿತು ಚರ್ಚಿಸಲಾಯಿತು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಹೆಚ್ಚುವರಿ ಪೈಪ್ ಲೈನ್ ಕಾಮಗಾರಿಗಳಾದ ಜಾಲ್ಸೂರು – ಮರಸಂಕ ರಸ್ತೆ ಬದಿ ತಡೆಗೋಡೆ ನಿರ್ಮಾಣ ಮತ್ತು ರಸ್ತೆಯ ಅಗಲೀಕರಣ , ಸೋಣಂಗೇರಿ ಆಂಗನವಾಡಿ ಕೇಂದ್ರ ಅತ್ಯಂತ ತಳಮಟ್ಟದಲ್ಲಿದ್ದು, ಇದರ ಸ್ಥಳಾಂತರ ಹಾಗೂ ಮನೆ ತೆರಿಗೆ ವಸೂಲಾತಿ ಪ್ರಗತಿಯ ಕುರಿತು ಮಾಹಿತಿ ಪಡೆದುಕೊಂಡು , ಶೀಘ್ರವಾಗಿ ನಡೆಸುವಂತೆ ಸ್ಥಳದಿಂದಲೇ ಆಯಾ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚಿಸಿದರು.

ಈ ಸಂದರ್ಭದಲ್ಲಿ ಜಾಲ್ಸೂರು – ಸಾರಕರೆ ಪೈಪ್ ಲೈನ್ ಗೆ ಸಂಪರ್ಕ, ಮಹಾಬಲಡ್ಕ ನೀರಿನ ಟ್ಯಾಂಕಿಯಿಂದ ಚಂದಪಾಟಾಳಿ ಮನೆಯವರೆಗೆ ನೀರಿನ ಸಂಪರ್ಕ ನೀಡುವ ಕುರಿತು , ಸುಂಕಡ್ಕ ಹೊಸ ಮೋಟಾರ್ ನಿಂದ ಟ್ಯಾಂಕಿಗೆ ಸಂಪರ್ಕ, ಕದಿಕಡ್ಕ ಪಂಪ್ ನಿಂದ ನೀರಿನ ಟ್ಯಾಂಕಿಗೆ ಮೈನ್ ಲೈನ್ ಅಳವಡಿಕೆ, ಅಡ್ಕಾರು ಜನತಾ ಕಾಲನಿ , ಅಡ್ಕಾರು ಹೊಸ ಟ್ಯಾಂಕಿಯಿಂದ ಗುಂಡ್ಯಡ್ಕ ಸಂಪತ್ತಿಲ, ಅಯ್ಯಪ್ಪ ಮಂದಿರದ ಬಳಿಯವರೆಗೆ ವಿಸ್ತರಣೆ, ಮಾವಿನಕಟ್ಟೆ ಹೊಸ ಟ್ಯಾಂಕಿಯಿಂದ ಸಂಪರ್ಕ, ಸಂಪತ್ತಿಲ ಮೋಟಾರಿನಿಂದ ಟ್ಯಾಂಕಿಯ ಹಳೆಲೈನ್ ಗೆ ಸಂಪರ್ಕ, ಕೋನಡ್ಕಪದವು ಹಳೆ ಟ್ಯಾಂಕಿಯಿಂದ ಸಿ.ಎಚ್. ದಾಮೋದರ ಅವರ ಮನೆಯ ಹತ್ತಿರವರೆಗೆ ಸಂಪರ್ಕ, ಕುಂಬರ್ಚೋಡು ಹೊಸ ಬೋರ್ ವೆಲ್ ನಿಂದ ಹೊಸ ಟ್ಯಾಂಕಿಗೆ ಸಂಪರ್ಕ, ಕುಂಬರ್ಚೋಡು ಟ್ಯಾಂಕಿಯಿಂದ ಮಹಾಲಿಂಗ ನಾಯ್ಕ ಅವರ ಮನೆಯ ಕಡೆಗೆ ಪೈಪ್ ಲೈನ್ ಗೆ ಸಂಪರ್ಕ, ಅರ್ಭಡ್ಕ ಬೋರ್ ವೆಲ್ ನಿಂದ ಭುವನೇಂದ್ರ ಅವರ ಕಟ್ಟಡದವರೆಗೆ ‌ ಸಂಪರ್ಕ, ಪಿಲಿಕೋಡಿ ಹೊಸ ಬೋರ್ ವೆಲ್ ನಿಂದ ಪಿಲಿಕೋಡಿ ಹಳೆ ಟ್ಯಾಂಕಿಗೆ ನೀರಿನ ಸಂಪರ್ಕ, ಸೋಣಂಗೇರಿ ಅಂಗನವಾಡಿ ಮೋಟಾರಿನಿಂದ ಕುಂಠಿಕಾನ ಟ್ಯಾಂಕಿಗೆ ಮೈನ್ ಲೈನ್, ಸೋಣಂಗೇರಿ ಕುಂಠಿಕಾನ ಟ್ಯಾಂಕಿಯಿಂದ ಡೆಲಿವರಿ ಲೈನ್, ಪಯಲಡ್ಕ ಗೋಪಾಲ ಗೌಡರ ಮನೆ ಹತ್ತಿರದಿಂದ ಬೋರ್ ವೆಲ್ ಗೆ ಸಂಪರ್ಕ, ಕುಕ್ಕಂದೂರು ಸಿ.ಆರ್.ಸಿ. ಕಾಲನಿ ಹತ್ತಿರದಿಂದ ಬಂಡಿಕೊಟ್ಟಿಗೆಗೆ ನೀರಿನ ಸಂಪರ್ಕ ಸೇರಿದಂತೆ ಮುಂತಾದ ಕಡೆಗಳಲ್ಲಿ ನೀರಿನ ಪೈಪ್ ಲೈನ್ ಕಾಮಗಾರಿ ನಿರ್ವಹಿಸಲು ಅನುದಾನ ಒದಗಿಸುವಂತೆ ಮನವಿ ಸಲ್ಲಿಸಲಾಯಿತು. ‌

ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಕೆ.ಪಿ. ಸುಬ್ಬಯ್ಯ, ಕಾರ್ಯದರ್ಶಿ ಸುಂದರ ಮುಪ್ಪೇರ್ಯ, ಉಪಾಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಅರ್ಭಡ್ಕ, ಗ್ರಾ.ಪಂ. ಸದಸ್ಯರುಗಳಾದ ಎನ್.ಎಂ. ಸತೀಶ್ ಕೆಮನಬಳ್ಳಿ, ಪಿ.ಆರ್. ಸಂದೀಪ್ ಕದಿಕಡ್ಕ, ಕೆ.ಎಂ‌. ಬಾಬು ಕದಿಕಡ್ಕ, ಅಬ್ದುಲ್ ಮಜೀದ್ ನಡುವಡ್ಕ, ಶ್ರೀಮತಿ ಲೀಲಾವತಿ ವಿನೋಬನಗರ, ಶ್ರೀಮತಿ ಗೀತಾ ಗೋಪಿನಾಥ್ ಬೊಳುಬೈಲು, ಶ್ರೀಮತಿ ಗೀತಾ ಚಂದ್ರಹಾಸ ಅರ್ಭಡ್ಕ, ಶ್ರೀಮತಿ ದೀಪಾ ಅಜಕಳಮೂಲೆ, ಶ್ರೀಮತಿ ಅಂಬಿಕಾ ಕುಕ್ಕಂದೂರು, ಗ್ರಾಮ ಲೆಕ್ಕಾಧಿಕಾರಿ ಶಾಹಿನಾ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಜಯರಾಜ್ ಕುಕ್ಕೇಟಿ, ಹೇಮಂತ್ ಮಠ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.