ಸುಳ್ಯ ರಾಮ ಭಜನಾ ಮಂದಿರದಲ್ಲಿ 81 ನೇ ವರ್ಷದ ಏಕಾಹ ಭಜನೆ ಹಾಗೂ ಭಕ್ತಿ ಗಾನಾಮೃತ

0

ಸುಳ್ಯ ಶ್ರೀ ರಾಮ ಪೇಟೆಯ ಶ್ರೀರಾಮ ಭಜನಾ ಮಂದಿರದಲ್ಲಿ 81 ನೇ ವರ್ಷದ ಏಕಾಹ ಭಜನೆಯು ನ.23 ರಂದು ಜರುಗಿತು.

ನ. 23 ರಂದು ಪ್ರಾತ:ಕಾಲ ಸೂರ್ಯೋದಯದಿಂದ ಮರುದಿನ ಸೂರ್ಯೋದಯದ ಪರ್ಯಂತ ತಾಲೂಕಿನ ವಿವಿಧ ಭಜನಾ ಮಂಡಳಿಯ ಭಜಕರಿಂದ
ನಿರಂತರ 24 ಗಂಟೆಗಳ ಕಾಲ ಭಜನಾ ಸಂಕೀರ್ತನೆಯು ನಡೆಯಿತು.

ಪ್ರಾತಃಕಾಲ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಮೊಕ್ತೇಸರ ಜಿತೇಂದ್ರ ಎನ್.ಎ ರವರು ದೀಪ ಸ್ಥಾಪನೆ ನೆರವೇರಿಸಿ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅರ್ಚಕರ ನೇತೃತ್ವದಲ್ಲಿ ಮಧ್ಯಾಹ್ನ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಯಿತು. ಸಾಯಂಕಾಲ ದೇವರಿಗೆ ವಿಶೇಷ ಹೂವಿನ ಅಲಂಕಾರ ಪೂಜೆಯು ನಡೆದು ರಾತ್ರಿ ವಿಶೇಷವಾಗಿ ಕಾಸರಗೋಡು ಸಾಯಿಸಂಗೀತ್ ಮೆಲೋಡೀಸ್ ತಂಡದವರಿಂದ ಭಕ್ತಿ ಗಾನಾಮೃತ ವಿಶೇಷ ಕಾರ್ಯಕ್ರಮ ನಡೆಯಿತು.
ಏಕಾಹ ಭಜನೆಯ ಪ್ರಯುಕ್ತ ರಾತ್ರಿ ಸಮಯದಲ್ಲಿ ಜಟ್ಟಿಪಳ್ಳ ರಾಮ ಸೇವಾ ಸಮಿತಿ, ಚೆನ್ನಕೇಶವ ದೇವಸ್ಥಾನದ ಬಳಿ, ಬಂಗ್ಲೆಗುಡ್ಡೆ ಬಳಿ, ಜಯನಗರ ಗಜಾನನ ಭಜನಾ ಮಂದಿರ, ಬೆಟ್ಟಂಪಾಡಿ ಮಂಜುನಾಥೇಶ್ವರ ಭಜನಾ ಮಂದಿರ, ದಿ| ಗಣಪಯ್ಯ ಆಚಾರ್ ಸ್ಮರಣಾರ್ಥ ಮಕ್ಕಳ ಸೇವೆಯಾಗಿ ಹಳೆಗೇಟು ಬಳಿ, ಧರ್ಮದರ್ಶಿಗಳ ವತಿಯಿಂದ ಪೆಟ್ರೋಲ್ ಬಂಕ್ ಖಾಸಗಿ ಬಸ್ ನಿಲ್ದಾಣ ಬಳಿಯಿಂದ
ಸೇವಾರೂಪದ ಉಲುಪೆಯ ಮೆರವಣಿಗೆಯು ಆಕರ್ಷಕ ಕುಣಿತ ಭಜನೆಯೊಂದಿಗೆ ಮಂದಿರದ ತನಕ ಸಾಗಿ ಬಂತು. ಮರುದಿನ ಪ್ರಾತ:ಕಾಲ ಭಜನಾ ಕಾರ್ಯಕ್ರಮದ ಮಹಾ ಮಂಗಳಾರತಿಯಾಗಿ ದೀಪ ವಿಸರ್ಜನೆಯಾಯಿತು.
ಬಳಿಕ ಆಗಮಿಸಿದ ಸಾರ್ವಜನಿಕ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಯಿತು.

ಮಂದಿರದ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಕೆ.ಉಪೇಂದ್ರ ಪ್ರಭು ಹಾಗೂ ಪದಾಧಿಕಾರಿಗಳು,
ಶ್ರೀ ರಾಮ ಸಾಂಸ್ಕೃತಿಕ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.