ಜ.20ರಂದು ಸುಳ್ಯದಲ್ಲಿ ಕಾನೂನು ವಿಶ್ವವಿದ್ಯಾನಿಲಯ ಮಟ್ಟದ ಗುಡ್ಡಗಾಡು ಓಟ

0

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಹಾಗೂ ಸುಳ್ಯದ ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದ ವತಿಯಿಂದ ಅಂತ‌ರ್ ಕಾಲೇಜು ಮಹಿಳಾ ಮತ್ತು ಪುರುಷರ ಗುಡ್ಡಗಾಡು ಓಟ ಜನವರಿ 20 ರಂದು ಸುಳ್ಯದಲ್ಲಿ ನಡೆಯಲಿದೆ ಎಂದು ಕೆ.ವಿ.ಜಿ.ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಉದಯಕೃಷ್ಣ.ಬಿ. ತಿಳಿಸಿದ್ದಾರೆ.


ಕೆವಿಜಿ ಕಾನೂನು ಕಾಲೇಜಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಯದಲ್ಲಿ ಪ್ರಥಮ ಬಾರಿಗೆ ನಡೆಯುವ ಕಾನೂನು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಗುಡ್ಡಗಾಡು ಓಟ ಸ್ಪರ್ಧೆಯ ಬಳಿಕ ಅಂತರ್ ವಿವಿ ಸ್ಪರ್ಧೆಯಲ್ಲಿ ಭಾಗವಹಿಸುವ ಕಾನೂನು ವಿಶ್ವವಿದ್ಯಾನಿಲಯ ಮಟ್ಟದ ಕ್ರಾಸ್ ಕಂಟ್ರಿ ತಂಡದ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದರು.

ವಿ.ವಿ. ವ್ಯಾಪ್ತಿಯ 130 ಕಾನೂನು ಮಹಾವಿದ್ಯಾಲಯಗಳಿಗೆ ಆಹ್ವಾನ ನೀಡಲಾಗಿದ್ದು 30ಕ್ಕೂ ಹೆಚ್ಚು ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಜ.19 ರಂದು ಎಲ್ಲಾ ತಂಡಗಳು ನೋಂದಾವಣೆ ಮಾಡಿದ ನಂತರ ಅವರಿಗೆ ಗುಡ್ಡಗಾಡು ಓಟಕ್ಕೆ ಆಯ್ಕೆ ಮಾಡಿದ ಮಾರ್ಗವನ್ನು ಪರಿಚಯಿಸಲಾಗುತ್ತದೆ. ಜ.20ರಂದು ಶನಿವಾರ ಬೆಳಗ್ಗೆ 7 ಗಂಟೆಗೆ ಓಟ ಪ್ರಾರಂಭವಾಗಿ 8.30 ರೊಳಗೆ ಕೊನೆಗೊಳ್ಳಲಿದೆ.
ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ. ಸ್ಪರ್ಧೆ 10 ಕಿಲೋಮೀಟರ್ ದೂರವನ್ನು ಹೊಂದಿರುತ್ತದೆ ಎಂದು ಅವರು ತಿಳಿಸಿದರು. ಪುರುಷರ ತಂಡದಲ್ಲಿ ಗರಿಷ್ಠ 9 ಮಂದಿ ಹಾಗೂ ಕನಿಷ್ಠ 6 ಮಂದಿ ಭಾಗವಹಿಸಬೇಕು. ಮಹಿಳಾ ತಂಡದಲ್ಲಿ ಕನಿಷ್ಠ 4 ಮಂದಿ ಹಾಗೂ ಗರಿಷ್ಠ 6 ಮಂದಿ ಇರಬೇಕು. ಒಟ್ಟು 300 ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ವಿಜೇತರಿಗೆ ವೈಯಕ್ತಿಕ ಬಹುಮಾನ, ಕಾಲೇಜಿಗೆ ಸಮಗ್ರ ಪ್ರಶಸ್ತಿ ನೀಡಲಾಗುತ್ತದೆ. ಭಾಗವಹಿಸಿದವರಿಗೆ ಪ್ರಮಾಣಪತ್ರ ನೀಡಲಾಗುವುದು. ಕೆವಿಜಿ ಕಾನೂನು ಕಾಲೇಜಿನ ಪುರುಷ, ಮಹಿಳಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದೆ. 2018ರಲ್ಲಿ ಕೆವಿಜಿ ಕಾನೂನು ಕಾಲೇಜು ವಿವಿ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿತ್ತು ಎಂದು ಅವರು ಹೇಳಿದರು.

ಸಮಾರೋಪ ಹಾಗೂ ಬಹುಮಾನ ವಿತರಣೆ ಜ.20ರಂದು ಬೆಳಗ್ಗೆ 11 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ. ಎಒಎಲ್‌ಇ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಅಧ್ಯಕ್ಷತೆ ವಹಿಸುವರು. ನಾಟಕ ಕಲಾವಿದ ಹಾಗೂ ಚಿತ್ರನಟ ಪ್ರಕಾಶ್ ತುಮಿನಾಡು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಶಾಸಕಿ ಭಾಗೀರಥಿ ಮುರುಳ್ಯ ರಾಷ್ಟ್ರೀಯ ಕ್ರೀಡಾಪಟು ನಮಿತಾ ಜಿ.ಕೆ., ಎಒಎಲ್‌ಇ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ., ಹುಬ್ಬಳ್ಳಿ ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯದ ಕ್ರೀಡಾ ನಿರ್ದೇಶಕ ಡಾ.ಖಾಲಿದ್ ಖಾನ್ ಉಪಸ್ಥಿತರಿರುವರು ಎಂದು ಪ್ರೊ.ಉದಯಕೃಷ್ಣ ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಸ್ಟೂಡೆಂಟ್ ವೆಲ್‌ಫೇರ್ ಆಫೀಸ‌ರ್ ಶ್ರೀಮತಿ ಟೀನಾ ಎಚ್.ಎಸ್, ಎನ್.ಎಂ.ಸಿ. ದೈಹಿಕ ಶಿಕ್ಷಣ ನಿರ್ದೇಶಕರಾದ ಲೆಫ್ಟಿನೆಂಟ್ ಸೀತಾರಾಮ ಎಂ.ಡಿ., ದೈಹಿಕ ಶಿಕ್ಷಣ ನಿರ್ದೇಶಕರಾದ ನಾಗರಾಜ್ ನಾಯ್ಕ್, ಮೆಡಿಕಲ್ ಕಾಲೇಜ್ ಪಿ.ಇ.ಡಿ. ಮಿಥನ್ ಎಸ್, ಕೆವಿಜಿ ಕಾನೂನು ಕಾಲೇಜಿನ ಅಧೀಕ್ಷಕರಾದ ಗೋಪಿನಾಥ್ ಕೆ. , ಕ್ರೀಡಾ ಸಂಯೋಜಕರಾದ ಲಕ್ಷ್ಮೀಕಾಂತ್ ಕೆ.ಎಲ್. ಉಪಸ್ಥಿತರಿದ್ದರು.