ಫೆ.13 – 14: ಕನಕಮಜಲಿನ ಪೆರುಂಬಾರು ಮದಿಮಾಳುಮುಖ ಶ್ರೀ ದುರ್ಗಾದೇವಿ ಅಮ್ಮನವರ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಹೋತ್ಸವ

0

ಕನಕಮಜಲು ಗ್ರಾಮದ ಪೆರುಂಬಾರು ಮದಿಮಾಳುಮುಖ ಶ್ರೀ ದುರ್ಗಾದೇವಿ ಅಮ್ಮನವರ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮಹೋತ್ಸವವು ಬ್ರಹ್ಮಶ್ರೀ ವೇ.ಮೂ. ಕೆಮ್ಮಿಂಜೆ ಸುಬ್ರಹ್ಮಣ್ಯ ಬಳ್ಳುಕ್ಕುರಾಯರ ನೇತೃತ್ವದಲ್ಲಿ ಫೆ.13 ಮತ್ತು 14ರಂದು ಜರುಗಲಿದೆ.

ಫೆ.13ರಂದು ಬೆಳಿಗ್ಗೆ ಹಸಿರುವಾಣಿಯನ್ನು ಆರತಿಯೊಂದಿಗೆ ಶ್ರೀ ದುರ್ಗಾದೇವಿ ಅಮ್ಮನವರಿಗೆ ಸಮರ್ಪಿಸುವುದು. ಸಂಜೆ ಪ್ರಾಸಾದ ಪರಿಗ್ರಹ ಪ್ರಾರ್ಥನೆ, ಸ್ಥಳಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಬಿಂಬಧಿವಾಸ ರಕ್ಷೆ ಜರುಗಲಿದೆ.
ಫೆ.14ರಂದು ಪೂರ್ವಾಹ್ನ ಗಣಪತಿ ಹೋಮ, ಕಲಶಪೂಜೆ, ಪ್ರತಿಷ್ಠೆ, ಕಲಶಾಭಿಷೇಕ ಜರುಗಲಿದೆ.

ಬಳಿಕ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಂಗಳೂರಿನ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಶಾಸಕಿ ಭಾಗೀರಥಿ ಮುರುಳ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕನಕಮಜಲು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಶಾರದಾ ಉಗ್ಗಮೂಲೆ ಉಪಸ್ಥಿತರಿರಲಿದ್ದಾರೆ. ಗೌರವ ಉಪಸ್ಥಿತರಾಗಿ ಕನಕಮಜಲು ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಗೌಡ ಬೊಮ್ಮೆಟ್ಟಿ, ಜಾಲ್ಸೂರಿನ ನಂಗಾರು ಶ್ರೀ ಮಹಾವಿಷ್ಣುಮೂರ್ತಿ ಮತ್ತು ಧರ್ಮದೈವಗಳ ದೈವಸ್ಥಾನದ ಆಡಳಿತ ಮೊಕ್ತೇಸರ ಮೋಹನ ಗೌಡ ನಂಗಾರು, ಕನಕಮಜಲಿನ ಬಾಳೆಹಿತ್ತಿಲು ಶ್ರೀ ವಯನಾಟ್ ಕುಲವನ್ ಮಹಾವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸೀತಾರಾಮ ಮಾಸ್ತರ್ ಬುಡ್ಲೆಗುತ್ತು, ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದ ಅಧ್ಯಕ್ಷ ವಸಂತ ಮಳಿ ಉಪಸ್ಥಿತರಿರಲಿದ್ದಾರೆ.
ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದ್ದು, ಸಂಜೆ 4.30ರಿಂದ ರಾತ್ರಿ 7.30ರ ತನಕ ಕನಕಮಜಲಿನ ಶ್ರೀ ಕನಕದಾಸ ಮಕ್ಕಳ ಭಜನಾ ತಂಡ ಹಾಗೂ ಕನಕಮಜಲಿನ ಶ್ರೀ ಸ್ವರ್ಣಾಂಜಲಿ ಭಜನಾ ತಂಡದಿಂದ ಭಜನಾ ಸೇವೆ ಜರುಗಲಿದೆ. ರಾತ್ರಿ 7.30ಕ್ಕೆ ಶ್ರೀ ದೇವರಿಗೆ ಮಹಾಪೂಜೆ ನಡೆಯಲಿದೆ.