ದನ ಮೇಲೆ ಬಿದ್ದು ಗಾಯಗೊಂಡಿದ್ದ ದನದ ಮಾಲಕ ಮೃತ್ಯು

0

ದನ ಮೈಮೇಲೆ ಬಿದ್ದು ತೀವ್ರ ಜಖಂಗೊಂಡು ಆಸ್ಪತ್ರೆ ಸೇರಿದ್ದ ದನದ ಮಾಲಕರೊಬ್ಬರು ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದ ಘಟನೆ ಚೊಕ್ಕಾಡಿಯಿಂದ ವರದಿಯಾಗಿದೆ.

ಅಮರಪಡ್ನೂರು ಗ್ರಾಮದ ಚೊಕ್ಕಾಡಿಯ ನಿವಾಸಿ ನಡುಗಲ್ಲು ರಾಧಾಕೃಷ್ಣರವರು ಫೆ. ೨೭ರಂದು ತಮ್ಮ ದನವನ್ನು ಮೇಯಿಸಲು ಕಟ್ಟಿ ಹಾಕಲೆಂದು ತೋಟದ ಬದಿಯಲ್ಲಿ ಕರೆದೊಯ್ಯುತ್ತಿರುವಾಗ ಬರೆಯಲ್ಲಿ ಜಾರಿ ಬಿದ್ದರು. ದನದ ಕುತ್ತಿಗೆಗೆ ಕಟ್ಟಿದ್ದ ಹಗ್ಗ ಅವರ ಕೈಯಲ್ಲಿದ್ದುದರಿಂದ ಎಳೆಯಲ್ಪಟ್ಟು ದನವು ಇವರ ಮೈಮೇಲೆ ಬಿದ್ದಿತು.

ಅಲ್ಲಿದ್ದ ಕೊಕ್ಕೋ ಮರ ಮತ್ತು ಬರೆಯ ಮಧ್ಯದಲ್ಲಿ ರಾಧಾಕೃಷ್ಣರು ಸಿಲುಕಲ್ಪಟ್ಟು ತೀವ್ರ ಜಖಂಗೊಂಡರು. ವಿಷಯ ತಿಳಿದು ಅವರ ಪತ್ನಿ ಮತ್ತು ಪಕ್ಕದ ಅಂಗಡಿಯ ಚಂದ್ರಶೇಖರ ಪಡ್ಪುರವರು ಧಾವಿಸಿ ಅವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ್ದರು. ಮಂಗಳೂರಿನ ಕೆಂಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮುಂಜಾನೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.