ಡಿ.ವಿ.ಸದಾನಂದ ಗೌಡರು ಹುಟ್ಟೂರಿಗೆ ಬಂದಿದ್ದರೆ?

0

ರಾಜ್ಯ ರಾಜಕಾರಣದಲ್ಲಿ ಚರ್ಚೆಯ ಕೇಂದ್ರವಾಗಿರುವ ಮಾಜಿ ಮುಖ್ಯಮಂತ್ರಿ , ಸಂಸದ ಡಿ.ವಿ.ಸದಾನದ ಗೌಡರು ನಿನ್ನೆ ಹುಟ್ಟೂರಾದ ದೇವರಗುಂಡಕ್ಕೆ ಬಂದಿದ್ದರೇ?

  • ನಿನ್ನೆಯಿಂದ ರಾಜ್ಯದ ಬಹುತೇಕ ಮಾಧ್ಯಮಗಳಲ್ಲಿ ಇದೇ ಸುದ್ದಿ. ಸದಾನಂದ ಗೌಡರಿಗೆ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ನಿರಾಕರಿಸಲ್ಪಟ್ಟಿರುವುದು, ಇದರಿಂದ ಅವರು ಅಸಮಾಧಾನಗೊಂಡಿರುವುದು, ಕಾಂಗ್ರೆಸ್ ನಾಯಕರು ಅವರನ್ನು ಸಂಪರ್ಕಿಸಿರುವುದು, ಅದನ್ನು ಡಿ.ವಿ. ಖಚಿತ ಪಡಿಸಿರುವುದು, ಮುಂದಿನ ನಿರ್ಧಾರವನ್ನು ಸುದ್ದಿ ಗೋಷ್ಟಿಯಲ್ಲಿ ತಿಳಿಸುವುದಾಗಿ ಹೇಳಿರುವುದು, ರಾಜ್ಯ ಒಕ್ಕಲಿಗ ಸಂಘದವರೊಂದಿಗೆ ಚರ್ಚೆ ನಡೆಸಿರುವುದು, ಅವರು ಡಿ.ವಿ.ನಿರ್ಧಾರದ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿರುವುದು, ಬಳಿಕ ಬಿಜೆಪಿ ವರಿಷ್ಠರು ಮನವೊಲಿಸಿ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಆಫರ್ ಮಾಡಿರುವುದು ಈ ಎಲ್ಲ ಕಾರಣಗಳಿಗಾಗಿ ಸದಾನಂದ ಗೌಡರು ಚರ್ಚೆಯ ಕೇಂದ್ರ ಬಿಂದುವಾಗಿದ್ದರು.

ಈ ಮಧ್ಯೆ ನಿನ್ನೆಯಿಂದ ರಾಜ್ಯದ ಮಾಧ್ಯಮಗಳಲ್ಲಿ ಸದಾನಂದ ಗೌಡರು ಸುಳ್ಯಕ್ಕೆ ತೆರಳಿದ್ದಾರೆ, ಅಲ್ಲಿ ಕುಟುಂಬದ ದೈವದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ , ದೈವದ ಮೊರೆ ಹೋಗಿದ್ದಾರೆ ಎಂದೆಲ್ಲ ಪ್ರಚಾರವಾಗತೊಡಗಿತ್ತು.

ಆದರೆ ವಾಸ್ತವವಾಗಿ ಸದಾನಂದ ಗೌಡರು ದೇವರಗುಂಡಕ್ಕೆ ಆಗಮಿಸಿಲ್ಲ. ಮಂಗಳೂರಿನ ಮನೆಗೆ ಬಂದಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಅವರು ಮಂಗಳೂರಿಗೂ ಬಂದಿಲ್ಲವೆಂದೂ, ಬೆಂಗಳೂರಲ್ಲೆ ಇರುವುದಾಗಿಯೂ ಅವರ ಆಪ್ತ ಮೂಲಗಳು ಹೇಳಿವೆ.

ಅವರು ದೇವರಗುಂಡಕ್ಕೆ ಬರುವ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಕುಟುಂಬ ಮೂಲಗಳೂ ತಿಳಿಸಿವೆ.

ಎಪ್ರಿಲ್ ಎರಡನೇ ವಾರದಲ್ಲಿ ದೇವರಗುಂಡ ಕುಟುಂಬದ ದೈವ ನೇಮ ನಡೆಯಲಿದ್ದು, ಅದಕ್ಕವರು ಆಗಮಿಸಲಿದ್ದು, ಅದಕ್ಕಿಂತ ಮುಂಚೆ ಆಗಮಿಸುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.