ಜೀವನರಾಂ ಸಾರಥ್ಯದ 33 ನೇ ವರ್ಷದ ಚಿಣ್ಣರಮೇಳ ಎ.13 ರಿಂದ ರಂಗಮನೆಯಲ್ಲಿ ಆರಂಭ

0

ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ನಡೆಯಲಿರುವ ರಾಜ್ಯಮಟ್ಟದ ಮಕ್ಕಳ ಅಭಿನಯ ಶಿಬಿರ ‘ಚಿಣ್ಣರಮೇಳ 2024 ‘ ಎ.13 ರಂದು ಪೂ.9.30 ಕ್ಕೆ ಆರಂಭಗೊಳ್ಳಲಿದೆ.


ರಂಗಮಾಂತ್ರಿಕ ಡಾ| ಜೀವನ್ ರಾಂ ಸುಳ್ಯರ ಸಾರಥ್ಯದಲ್ಲಿ 33 ನೇ ವರ್ಷದ ಶಿಬಿರ ಇದಾಗಿದ್ದು ನೀನಾಸಂ, ರಂಗಾಯಣ ಮುಂತಾದ ಕಡೆಗಳಲ್ಲಿ ರಂಗಪದವಿಯನ್ನು ಪಡೆದ ಅನುಭವೀ ರಂಗಕರ್ಮಿಗಳಿಂದ ರಂಗ ಪಾಠಗಳು ನಡೆಯಲಿದೆ.

ಹಿರಿಯ ರಂಗಕರ್ಮಿ , ನೀನಾಸಂ ಪದವೀಧರ ಸತ್ಯನಾರಾಯಣ ಕೊಡೇರಿ ಕುಂದಾಪುರ ಇವರು ಚಿಣ್ಣರಮೇಳವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷರಾದ ರೊ| ಆನಂದ ಖಂಡಿಗೆ, ಕಾವೇರಿ ನರ್ಸರಿ ಮಾಲಕರಾದ ಕೆ.ಮಧುಸೂದನ್ , ರಂಗನಿರ್ದೇಶಕಿ ಗೀತಾ ಭಗೀರಥ ಹಾಗೂ ಡ್ರಾಮಾ ಜ್ಯೂನಿಯರ್ ಸೀಸನ್ 5 ರ ಫೈನಲಿಸ್ಟ್ ಬಾಲಪ್ರತಿಭೆ ರಿಷಿತ್ ರಾಜ್ ವಿಟ್ಲ ಉಪಸ್ಥಿತರಿರುವರು.


ಅಭಿನಯ ಪ್ರಧಾನವಾದ ಈ ಶಿಬಿರದಲ್ಲಿ ರಂಗಾಭಿನಯ, ಮಾತುಗಾರಿಕೆ, ರಂಗದಾಟಗಳು, ಮೂಕಾಭಿನಯ, ಓದುವ ಕ್ರಮ, ರಂಗಗೀತೆ, ಕಥಾಭಿನಯ, ಅಭಿನಯಗೀತೆ, ಸ್ಪಷ್ಟ ಕನ್ನಡ ಉಚ್ಛಾರಣೆ, ಸ್ವರಾನುಕರಣೆ, ಆತ್ಮವಿಶ್ವಾಸ ಮೂಡಿಸುವ ಗುಂಪು ಚಟುವಟಿಕೆಗಳು , ಜನಪದ ಸಂಗತಿಗಳು ಹಾಗೂ ಎಂಟು ನಿರ್ದೇಶಕರಿಂದ ಎಂಟು ಕಿರು ನಾಟಕಗಳ ತಯಾರಿ ಇರುತ್ತದೆ. ಮಧ್ಯೆ ಮಧ್ಯೆ ಕ್ರಾಫ್ಟ್-ಚಿತ್ರಕಲೆ, ಮುಖವರ್ಣಿಕೆಗಳೂ ಸೇರಿದಂತೆ ಮಕ್ಕಳ ಮಾನಸಿಕ, ಬೌದ್ಧಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ಹತ್ತು ಹಲವು ವಿಚಾರಗಳು ಶಿಬಿರದಲ್ಲಿ ಇರಲಿವೆ.

ಸಂಪನ್ಮೂಲ ವ್ಯಕ್ತಿಗಳಾಗಿ ರಾಜ್ಯ ತರಬೇತುದಾರರಾದ ಸತ್ಯನಾರಾಯಣ ಕೊಡೇರಿ, ಕಾಂತಾರ ಖ್ಯಾತಿಯ ಮೈಮ್ ರಾಮದಾಸ್, ನೀನಾಸಂ ಪದವೀಧರರಾದ ನವೀನ್ ಕಾಂಚನ, ಮಮತಾ ಕಲ್ಮಕಾರು, ಗೀತಾಕುಮಾರಿ ಮುಳ್ಯ, ಸಂಗೀತ ನಿರ್ದೇಶಕ ಭಗೀರಥ ಕುಮಟಾ, ರಂಗನಟಿ ಚೈತ್ರ ಖುಷಿ ಚನ್ನ ಪಟ್ಟಣ, ನಟನಾ ನಟ ವಿ.ಕ್ರಿ.ವಿಕಾಸ್ ಮೈಸೂರು, ಗಾಯಕಿ ವಿದುಷಿ ಸುಮನಾ ಪ್ರಸಾದ್ ಮೂಡುಬಿದ್ರೆ, ಕಲಾ ಶಿಕ್ಷಕರಾದ ಶಿವಗಿರಿ ಕಲ್ಲಡ್ಕ, ಶ್ರೀ ಹರಿ ಪೈಂದೋಡಿ, ಪ್ರಸನ್ನ ಐವರ್ನಾಡು, ಮಂಜು ಬೀರಮಂಗಲ, ಮಮತಾ ಕೆ.ಸಿ.ಆರ್.ಪಿ.,ರಂಗ ನಟಿಯರಾದ ವಸಂತಲಕ್ಷ್ಮೀ ಪುತ್ತೂರು, ಸುಶ್ಮಿತಾ ಮೋಹನ್, ಬಹುಮುಖ ಪ್ರತಿಭೆಯ ಮಾ| ಮನುಜ ನೇಹಿಗ ಮುಂತಾದವರು ಭಾಗವಹಿಸಲಿದ್ದಾರೆ.

ಈಗಾಗಲೇ 170 ಮಕ್ಕಳು ಹೆಸರು ನೋಂದಾಯಿಸಿಕೊಂಡಿದ್ದು ನೋಂದಾವಣಿ ಪ್ರಕ್ರಿಯೆ ಮುಗಿದಿರುತ್ತದೆ.

ಎಪ್ರಿಲ್ 20 ರಂದು ಅಪರಾಹ್ನ 2.30 ಕ್ಕೆ ನಡೆಯುವ ಸಮಾರೋಪದಲ್ಲಿ ಮಕ್ಕಳ ನಾಟಕಗಳು ಹಾಗೂ ಬಹುಮುಖ ಪ್ರತಿಭಾ ಪ್ರದರ್ಶನವಿರುತ್ತದೆ ಎಂದು ರಂಗಮನೆಯ ಪದಾಧಿಕಾರಿಗಳಾದ ಕೆ. ಕೃಷ್ಣಮೂರ್ತಿ ಮತ್ತು ಡಾ. ವಿದ್ಯಾ ಶಾರದ ತಿಳಿಸಿರುತ್ತಾರೆ.