ಬಸ್ ಡೋರ್ ತೆಗೆಯಲು ಸತಾಯಿಸಿದ ಡ್ರೈವರ್ : ಪ್ರಯಾಣಿಕರಿಂದ ದೂರು

0

ಸುಳ್ಯ – ಕೊಯನಾಡು ಬಸ್ ಡ್ರೈವರ್ ರೂಟ್ ಬದಲಾವಣೆ ಮಾಡಿ ಆದೇಶ

ಸುಳ್ಯ‌ ಕೊಯನಾಡು ಕೆಎಸ್ ಆರ್ ಟಿಸಿ ಬಸ್ ಡ್ರೈವರ್ ಪ್ರಯಾಣಿಕರು ಬಸ್‌ನಿಂದ ಇಳಿಯಲು ಕೇಳಿಕೊಂಡರೆ ಬಸ್ ಡೋರ್ ತೆಗೆಯದೇ ಸತಾಯಿಸುತ್ತಿರುವ ಕುರಿತು ಸಾರ್ವಜನಿಕರಿಂದ ಡಿಪ್ಪೋ ಮ್ಯಾನೇಜರ್ ರಿಗೆ ದೂರು ಹೋದ ಪರಿಣಾಮ, ವಿಚಾರಣೆ ‌ನಡೆಸಿದ ಅಧಿಕಾರಿಗಳು ಆ ಡ್ರೈವರ್ ರೂಟ್ ಬದಲಾವಣೆ ಮಾಡಿರುವುದಾಗಿ ತಿಳಿದು ಬಂದಿದೆ.

ಸುಳ್ಯ – ಕೊಯನಾಡು‌ ಬಸ್ ನಲ್ಲಿ ಗಫೂರ್ ಎಂಬ ಚಾಲಕರಿದ್ದಾರೆ. ಅವರು ಪ್ರಯಾಣಿಕರು ನಿಂತಿದ್ದಲ್ಲಿ ಬಸ್ ‌ನಿಲ್ಲಿಸುವುದಿಲ್ಲ. ಬಸ್ ನಿಂದ ಇಳಿಯಲು ಪ್ರಯಾಣಿಕರು ಸಿದ್ಧರಾದಾಗ ಬಸ್ ನ ಡೋರ್ ತೆಗೆಯುವುದಿಲ್ಲ ಎಂಬಿತ್ಯಾದಿ ದೂರುಗಳು ಡಿಪ್ಪೋ‌ ಮ್ಯಾನೇಜರ್ ಗೆ ಬಂದಿದ್ದವು.ಅ.26ರಂದು ಬೆಳಗ್ಗೆ ಕೊಯನಾಡಿನಿಂದ ಸುಳ್ಯಕ್ಕೆ ಬಸ್ ಬರುತ್ತಿರುವಾಗ ಡೋರ್ ತೆಗೆಯದ ವಿಚಾರಕ್ಕೆ ಪ್ರಯಾಣಿಕರೊಂದಿಗೆ ಬಸ್ ನಲ್ಲೇ ವಾಗ್ವಾದ ನಡೆಯಿತೆನ್ನಲಾಗಿದೆ. ಬಸ್ ನಲ್ಲಿದ್ದ ಪ್ರಯಾಣಿಕರು ಪುತ್ತೂರು ಅಧಿಕಾರಿಗಳಿಗೆ, ಸುಳ್ಯ ಡಿಪ್ಪೋ ಮ್ಯಾನೇಜರ್ ರಿಗೆ ದೂರಿಕೊಂಡರೆನ್ನಲಾಗಿದೆ.

ಈ ಹಿಂದೆ ಡ್ರೈವರ್ ಕಲ್ಲುಗುಂಡಿಯ ಗಫೂರ್ ಮೇಲೆ ಬಂದ ದೂರು‌ ಹಾಗೂ ಅ.26ರಂದು ಪ್ರಯಾಣಿಕರು ದೂರಿಕೊಂಡಿರುವ ಮೇರೆಗೆ ಸುಳ್ಯ -ಕೊಯನಾಡು ರೂಟ್ ನಿಂದ ಡ್ರೈವರ್ ಗಫೂರ್ ರನ್ನು ಬದಲಾಯಿಸಿದ್ದಾರೆಂದು ತಿಳಿದು ಬಂದಿದೆ.
ಘಟನೆಯ ಕುರಿತು ಸುಳ್ಯ‌ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳನ್ನು ಸಂಪರ್ಕಿಸಿ ವಿಚಾರಿಸಿದಾಗ, ಡ್ರೈವರ್ ವಿರುದ್ಧ ದೂರು ಬಂದಿರುವುದು ಹೌದು. ಅದಕ್ಕಾಗಿ ಅವರ ರೂಟ್ ಬದಲಾವಣೆ ಮಾಡಲಾಗಿದೆ ಎಂದು‌ ತಿಳಿಸಿದ್ದಾರೆ.