ಸೋಲು, ಸವಾಲುಗಳಿಗೆ ವಿಚಲಿತರಾಗದಿರಿ – ಡಾ ವಿನಯ ಶಂಕರ್ ಭಾರದ್ವಾಜ್

ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ವಿದ್ಯಾರ್ಥಿಗಳಿಗೆ ಗುರಿ, ಕಠಿಣ ಪರಿಶ್ರಮ, ನಿರಂತರ ಅಧ್ಯಯನದ ಜೊತೆಗೆ ಆಸಕ್ತಿಯನ್ನು ಹಿಂಬಾಲಿಸುವ ಗುಣ ಇರಬೇಕು. ಸಹ ಪಠ್ಯ ಚಟುವಟಿಕೆಗಳು ಜೀವನ ಕೌಶಲ್ಯ ಬೆಳವಣಿಗೆಗೆ ದಾರಿ ಮಾಡಿಕೊಡುತ್ತವೆ. ಸೋಲು, ಸವಾಲುಗಳಿಗೆ ವಿಚಲಿತರಾಗದಿರಿ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಒತ್ತು ನೀಡುತ್ತಿರುವ ಈ ಕಾಲೇಜು ನನ್ನ ಬದುಕಿನ ಉನ್ನತಿಗೆ ಕಾರಣವಾಗಿದೆ ಎಂದು ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಕೆವಿಜಿ ಆಯುರ್ವೇದ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಧ್ಯಾಪಕ, ಶರೀರ ರಚನಾ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ ವಿನಯ ಶಂಕರ್ ಭಾರದ್ವಾಜ್ ಹೇಳಿದರು ಅವರು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಅಂಗವಾಗಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.








ಸಭಾಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾoಶುಪಾಲೆ ಮಿಥಾಲಿ ಪಿ ರೈ ಮಾತನಾಡಿ ಜ್ಞಾನ ಸಂಪಾದನೆ ಮಾಡುವಲ್ಲಿ ವಿದ್ಯಾರ್ಥಿಗಳು ಗಮನ ನೀಡಬೇಕು. ಸಾಧನೆಯ ಮೂಲಕ ಯಶಸ್ವಿ ವ್ಯಕ್ತಿಗಳಾಗಲು ಸಾಧ್ಯ ಎಂದರು. ಗೌರವ ಉಪಸ್ಥಿತರಿದ್ದ ಪದವಿ ವಿಭಾಗದ ಪ್ರಾಚಾರ್ಯರಾದ ಡಾ ರುದ್ರ ಕುಮಾರ್ ಎಂ ಎಂ ಶುಭ ಹಾರೈಸಿದರು. ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ ಬೇಬಿ ವಿದ್ಯಾ ಪಿ.ಬಿ ಉಪಸ್ಥಿರಿದ್ದರು. ವಿದ್ಯಾರ್ಥಿನಿ ಶಾಲ್ಮಲಿ ಮತ್ತು ತಂಡದವರು ಆಶಯ ಗೀತೆ ಹಾಡಿದರು. ತರಗತಿ ಪ್ರತಿನಿಧಿಗಳಾದ ಇಂಚರ ಸ್ವಾಗತಿಸಿ, ಅಂಜು ಎಂಜಲ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿಯರಾದ ಸಾವಿತ್ರಿ ಕೆ, ಸುಚೇತಾ ಎಂ, ನೇಹಾ ವಿಜೇತರ ಪಟ್ಟಿ ವಾಚಿಸಿದರು. ಉಪನ್ಯಾಸಕಿಯರಾದ ರೇಷ್ಮಾ ಎಂ, ರಾಜೇಶ್ವರಿ ಎ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಪ್ರತಿನಿಧಿ ಅಬ್ದುಲ್ ಬಾಶಿತ್ ವಂದಿಸಿದರು.











