ಪ್ರಾಕೃತಿಕ ವಿಕೋಪ ಸಮಾಲೋಚನಾ ಸಭೆಗೆ ಮೆಸ್ಕಾಂ ಅಧಿಕಾರಿಗಳ ಗೈರು

0

ಶೋಕಾಸ್ ನೋಟೀಸ್ ನೀಡಲು ತಹಶಿಲ್ದಾರ್ ಸೂಚನೆ

ಪ್ರಾಕೃತಿಕ ವಿಕೋಪದ ಕುರಿತು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಇಂದು ಕರೆಯಲಾದ ನ. ಪಂ. ಸದಸ್ಯರ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಗೆ ಮೆಸ್ಕಾಂ ಇಲಾಖೆಯವರು ಗೈರು ಹಾಜರಾದ ಹಿನ್ನೆಲೆಯಲ್ಲಿ ಅವರಿಗೆ ಶೋಕಾಸ್ ನೀಡಲು ತಹಶೀಲ್ದಾರ್ ಸೂಚಿಸಿದ್ದಾರೆ.

ಇಂದು ನಗರ ಪಂಚಾಯತ್ ಸಭಾಂಗಣದಲ್ಲಿ ಕರೆಯಲಾಗಿತ್ತು. ಸಭೆಗೆ ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಅಗ್ನಿಶಾಮಕ ಇಲಾಖೆ ಹಾಗೂ ನಗರ ಪಂಚಾಯತ್ ಸದಸ್ಯರುಗಳು ಭಾಗವಹಿಸಿದ್ದರು. ಆದರೆ ಮಳೆಗಾಲದ ಪೂರ್ವ ತಯಾರಿಯಲ್ಲಿ ಮುಖ್ಯ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕಾದ ಮೆಸ್ಕಾಂ ಇಲಾಖೆಯ ಯಾವುದೇ ಅಧಿಕಾರಿಗಳು ಸಭೆಗೆ ಬಂದಿರಲಿಲ್ಲ.

ಸಭೆಯಲ್ಲಿ ಮೆಸ್ಕಾಂ ಇಲಾಖೆಯ ವಿಷಯಗಳು, ಮತ್ತು ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆದವು. ಆದರೆ ಸಮಸ್ಯೆಗಳನ್ನು ಆಲಿಸಲು ಮೆಸ್ಕಾಂ ಅಧಿಕಾರಿಗಳು ಬಾರದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಕೂಡಲೇ ಶೋಕಾಸ್ ನೋಟೀಸ್ ಜಾರಿ ಮಾಡುವಂತೆ ನಗರ ಪಂಚಾಯತ್ ಆಡಳಿತ ಅಧಿಕಾರಿಯೂ ಆಗಿರುವ ತಹಶೀಲ್ದಾರ್ ಜಿ. ಮಂಜುನಾಥ್ ಅವರು ನ.ಪಂ. ಮುಖ್ಯಾಧಿಕಾರಿ ಸುಧಾಕರ್ ಅವರಿಗೆ ಸೂಚನೆ ನೀಡಿದರು.