ಹರಿಹರ ಪಲ್ಲತಡ್ಕ: ತಲವಾರು ಹಿಡಿದು ಹೋದರೆಂಬ ವದಂತಿ

0


ಪೊಲೀಸರ ಆಗಮನದ ಬಳಿಕ ಪ್ರಕರಣ ಸುಖಾಂತ್ಯ

ಕೇರಳ ನೋಂದಾವಣಿ ಬೈಕ್‌ನಲ್ಲಿ ಮೂವರು ತಲವಾರು ಹಿಡಿದು ಹೋದರೆಂಬ ಗಾಳಿ ಸುದ್ದಿಯೊಂದು ಹರಿಹರ ಪಲ್ಲತಡ್ಕ ಗ್ರಾಮದಿಂದ ಹರಡಿ ಪೋಲೀಸರ ಆಗಮನದ ಬಳಿಕ ಪ್ರಕರಣ ಸುಖಾಂತ್ಯ ಕಂಡ ಘಟನೆ ಹರಿಹರ ಪಲ್ಲತಡ್ಕದಿಂದ ವರದಿಯಾಗಿದೆ.

ಹರಿಹರದ ಕಲ್ಲೇಮಠ ಎಂಬಲ್ಲಿ ನ.೯ ರಂದು ಕೇರಳ ನೋಂದಾವಣಿ ದ್ವಿಚಕ್ರ ವಾಹನದಲ್ಲಿ ಮೂವರು ತಲವಾರು ಹಿಡಿದುಕೊಂಡು ಹೋಗಿದ್ದರು ಎಂಬ ಮಾಹಿತಿಯನ್ನು ಸ್ಥಳೀಯರೊಬ್ಬರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ತಿಳಿಸಿದರು. ವಿಚಾರ ತಿಳಿದ ತಕ್ಷಣ ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್ ಘಟನಾ ಸ್ಥಳಕ್ಕೆ ಬಂದರು. ಸಾರ್ವಜನಿಕರ ಸಹಾಯದಿಂದ ವ್ಯಕ್ತಿಯನ್ನು ಹಿಡಿದು ವಿಚಾರಣೆ ನಡೆಸಲಾಯಿತು. ಈ ವೇಳೆ ತಿಳಿದು ಬಂದ ವಿಚಾರವೇನೆಂದರೆ ಕೇರಳ ಮೂಲದ ವ್ಯಕ್ತಿಗಳು ಸ್ಥಳೀಯರೊಬ್ಬರ ರಬ್ಬರ್ ತೋಟವೊಂದರಲ್ಲಿ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದು, ಮೀನು ಹಿಡಿಯುವುದಕ್ಕೆಂದು ತೆರಳುವ ವೇಳೆ ಉದ್ದದ ಕತ್ತಿಯನ್ನು ಕೊಂಡುಹೋದ ಕಾರಣ ಜನ ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಸಾರ್ವಜನಿಕರು ದೂರು ನೀಡಿದ ಕೆಲವೇ ಸಮಯದಲ್ಲಿ ಘಟನಾ ಸ್ಥಳಕ್ಕೆ ಪೋಲಿಸರು ಬಂದು ಸಮಸ್ಯೆ ಬಗೆ ಹರಿಸಿ ಜನರು ನಿಟ್ಟುಸಿರು ಬಿಡುವಂತಾಯಿತು.