ವಾಹನ ಚಲಾಯಿಸುತ್ತಿದ್ದ ಸಂದರ್ಭ ಹೃದಯಾಘಾತಕ್ಕೆ ಒಳಗಾದ ಚಾಲಕ

0

ಪಿಕಪ್ ವಾಹನ ಚಾಲನೆ ಮಾಡಿಕೊಂಡು ಬರುತ್ತಿದ್ದ ಸಂದರ್ಭ ಸುಳ್ಯ ಪೈಚಾರು ಸಮೀಪ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡ್ದಿದ್ದು,ಸಹ ಚಾಲಕ ಅವರನ್ನು ಸುಳ್ಯ ಆಸ್ಪತ್ರೆಗೆ ತರುತ್ತಿದ್ದ ಸಂದರ್ಭ ದಾರಿ ನಡುವೆ ಮೃತಪಟ್ಟ ಘಟನೆ ಡಿ.14 ರಂದು ರಾತ್ರಿ ಸಂಭವಿಸಿದೆ.

ಮೃತ ವ್ಯಕ್ತಿ ಗದಗ ತಾಲೂಕು ಹೊಸೂರು ಗ್ರಾಮದ ಹುಸೇನಸಾಬ ಹೆಬಸುರ ಎಂದು ತಿಳಿದುಬಂದಿದೆ. ಇವರು ಬೆಳ್ತಂಗಡಿಯಲ್ಲಿ ಶಾಮಿಯಾನ ಅಂಗಡಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು ಮಡಿಕೇರಿಯಲ್ಲಿ ಕಾರ್ಯಕ್ರಮ ಒಂದಕ್ಕೆ ಅಳವಡಿಸಲಾಗಿದ್ದ ಶಾಮಿಯಾನವನ್ನು ತರಲೆಂದು ಮಡಿಕೇರಿಗೆ ನಿನ್ನೆ ತಡರಾತ್ರಿ ಹೋಗುತ್ತಿದ್ದರು ಎನ್ನಲಾಗಿದೆ.
ಇವರು ಪೈಚಾರು ಸಮೀಪ ಬರುತ್ತಿದ್ದಂತೆ ಇವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಅಲ್ಲೇ ಬದಿಯಲ್ಲಿ ವಾಹನವನ್ನು ನಿಲ್ಲಿಸಿ ಬಳಿಯಲ್ಲಿ ಕುಳಿತಿದ್ದ ಸಹ ಸವಾರನಿಗೆ ವಿಷಯ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ರಸ್ತೆ ಬದಿಯಲ್ಲಿದ್ದ ಅಂಗಡಿಯಿಂದ ಕುಡಿಯಲು ಜ್ಯೂಸ್ ತೆಗೆದು ಕೊಟ್ಟು ಬಳಿಕ ಸುಳ್ಯ ಆಸ್ಪತ್ರೆಗೆ ಕರೆತಂದಿದ್ದು ಆಸ್ಪತ್ರೆಯ ಬಳಿ ಬರುತ್ತಿದ್ದಂತೆ ಎದೆ ನೋವು ಹೆಚ್ಚಾಗಿ ಅವರು ವಾಹನದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮಾಹಿತಿ ತಿಳಿದು ಸುಳ್ಯ ಪೊಲೀಸರು ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಮೃತ ವ್ಯಕ್ತಿ ಪತ್ನಿ ಹಾಗೂ ಇಬ್ಬರು ಪುತ್ರಿಯರು,ಬಂಧು ಮಿತ್ರರನ್ನು ಅಗಲಿದ್ದಾರೆ.