ಮೂರು‌ ದಿನಗಳಿಂದ ನಗರದಲ್ಲಿ ನೀರಿನ ಸಮಸ್ಯೆ : ತೊಂದರೆ ಅನುಭವಿಸಿದ ಜನರು

0

ನ.ಪಂ. ಸದಸ್ಯ ವೆಂಕಪ್ಪ ಗೌಡ ನೇತೃತ್ವದಲ್ಲಿ ಭೇಟಿ : ಅಧಿಕಾರಿಗಳಿಗೆ ತರಾಟೆ

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ದಿನಗಳಿಂದ ಅಸಮರ್ಪಕವಾಗಿ ನೀರು ಸರಬರಾಜಾಗುತ್ತಿರುವ ಮತ್ತು ಕಳೆದೆರಡು ದಿನಗಳಿಂದ ನಳ್ಳಿ ನೀರಿನ ಪೂರೈಕೆಯೇ ಇಲ್ಲದಿರುವ ಬಗ್ಗೆ ನಗರ ಪಂಚಾಯತ್ ವಿಪಕ್ಷ ನಾಯಕ ಎಂ ವೆಂಕಪ್ಪ ಗೌಡ ನೇತೃತ್ವದಲ್ಲಿ ಜನರು ನಗರ ಪಂಚಾಯತ್ ಗೆ ಭೇಟಿ ನೀಡಿ ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತು ಅಭಿಯಂತರರನ್ನು ತರಾಟೆಗೆ ತೆಗೆದುಕೊಂಡು ಇಂದು ಸಂಜೆಯ ಒಳಗಾಗಿ ನೀರು ಪೂರೈಕೆಗೆ ಬದಲಿ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿರುವ ಘಟನೆ ವರದಿಯಾಗಿದೆ.

ಹಲವಾರು ವರ್ಷಗಳ ಹಿಂದೆಯೇ ವಿದ್ಯುತ್ ವ್ಯತ್ಯಯ ಆದಾಗ ಸಮಸ್ಯೆ ಆಗದಿರಲಿ ಎಂದು ನಗರ ಪಂಚಾಯತ್ ನ ಕುಡಿಯುವ ನೀರಿನ ಪೂರೈಕೆಗಾಗಿ ವಿದ್ಯುತ್ ಜನರೇಟರ್ ಅಳವಡಿಸಲಾಗಿದೆ. ಆದರೆ ಕಳೆದ ವರ್ಷಗಳಿಂದ ಜನರೇಟರ್ ದುರಸ್ತಿ ಪಡಿಸುವ ಗೋಜಿಗೂ ಹೋಗದ ನಗರ ಪಂಚಾಯತ್ ಆಡಳಿತಾಧಿಕಾರಿಯವರ ಬಗ್ಗೆ ಎಂ. ವೆಂಕಪ್ಪ ಗೌಡ ಸಿಡಿಮಿಡಿಗೊಂಡರು. ಸಂಜೆಯೊಳಗೆ ವ್ಯವಸ್ಥೆ ಸರಿಪಡಿಸುವಂತೆ ಅವರು ಹೇಳಿದರು.

ಈ ಸಂದರ್ಭದಲ್ಲಿ ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷ ಗೋಕುಲ್ ದಾಸ್, ಶಿಲ್ಪ ಇಬ್ರಾಹಿಂ, ಬೆಟ್ ಜಯರಾಂ ಭಟ್ ಮತ್ತು ಚೇತನ್ ಕಜೆಗದ್ದೆ ಉಪಸ್ಥಿತರಿದ್ದರು.