ಶ್ರೀ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರ -2024 ಸಮಾಪನಾ; ವಿವಿಧ ಕ್ಷೇತ್ರದ ಸಾಧಕರಿಗೆ ಶ್ರೀ ಕೇಶವ ಸ್ಮೃತಿ ಪ್ರಶಸ್ತಿ ಪ್ರದಾನ

0

ಪಾಶ್ಚಿಮಾತ್ಯ ಜೀವನ ಶೈಲಿಯಿಂದ ಬದುಕಿಲ್ಲ, ಬದಲಾಗಿ ಭಾರತೀಯ ಸಂಸ್ಕೃತಿಯಲ್ಲಿ ಜೀವನವಿದೆ-ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ

ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ, (ರಿ) ಸುಳ್ಯ ಹಳೆಗೇಟು ಇದರ ವತಿಯಿಂದ ಹಮ್ಮಿಕೊಳ್ಳಲಾದ ಶ್ರಿ ಕೇಶವಕೃಪಾ ವೇದ -ಯೋಗ-ಕಲಾ ಶಿಬಿರ 2024 ಇದರ ಸಮಾಪನಾ ಸಮಾರಂಭ ಹಾಗೂ ಶ್ರೀ ಕೇಶವ ಸ್ಮೃತಿ ಪ್ರಶಸ್ತಿ ಪ್ರದಾನ ಸಮಾರಂಭ
ಕಾರ್ಯಕ್ರಮವು ಮೇ.19ರಂದು ಶ್ರೀ ಕೇಶವಕಿರಣ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಘವೇಂದ್ರ ಮಠ ಸುಳ್ಯ ಇದರ ಅಧ್ಯಕ್ಷರಾಗಿರುವ ಶ್ರೀಕೃಷ್ಣ ಸೋಮಯಾಗಿ ಎಂ.ಎಸ್.ವಹಿಸಿದ್ದರು.

ಶ್ರೀ ಸುಬ್ರಹ್ಮಣ್ಯ ಮಠದ ಶ್ರೀಗಳಾದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀವರ್ಚನ ನೀಡಿ ಮಾತನಾಡಿ, ಪಾಶ್ಚಿಮಾತ್ಯ ಜೀವನ ಶೈಲಿಯಿಂದ ನಮಗೆ ಬದುಕಿಲ್ಲ , ಬದಲಾಗಿ ಭಾರತೀಯ ಸಂಸ್ಕೃತಿಯಲ್ಲಿ ಜೀವನವಿದೆ. ವಿದೇಶ ವಿಶ್ವವಿದ್ಯಾಲಯದಲ್ಲಿ ನಮ್ಮ ವೇದಗಳ ಅಧ್ಯಯನ ನಡೆಯುತ್ತಿದೆ. ಆದರೆ ತವರೂರಾದ ಭಾರತ ಇದನ್ನು ವಿಂಗಡಿಸುತ್ತಿರುವುದು ವಿಷಾದನೀಯ ಸಂಗತಿ.


ನಾವು ಬದುಕಲು ನಮ್ಮ ಸಂಸ್ಕೃತಿಯೇ ಬೇಕೆ ಹೊರತು ಈಗಿನ ಹೈಫೈ ಸಂಸ್ಕೃತಿಯಲ್ಲಿ ನಮಗೆ ಬದುಕನ್ನು ನೀಡುವುದಿಲ್ಲ.
ಹಾಗಾಗಿ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಬದ್ಧತೆ ತುಂಬಾ ಇದೆ.
ಹೀಗಿರುವಾಗ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪತಿಷ್ಠಾನ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.

ಖ್ಯಾತ ಯಕ್ಷಗಾನ ಅರ್ಥಧಾರಿಗಳಾದ ಉಜಿರೆ ಅಶೋಕ ಭಟ್‌ರವರು ಅಭಿನಂದನ ಹಾಗೂ ಸಮಾಪನಾ ಭಾಷಣದಲ್ಲಿ ಮಾತನಾಡಿ ಎಲ್ಲರೂ ಎಳವೆಯಿಂದಲೇ ಸಂಸ್ಕಾರವನ್ನು ರೂಢಿಸಿಕೊಂಡು ಬಲವರ್ಧಿತವಾಗಬೇಕು. ವೇದ ಅಧ್ಯಯನ ಮಾಡಿದರೆ ದೇಶದ ಎಲ್ಲೆಡೆ ಗೌರವ ಇದೆ. ಹುಟ್ಟಿನಿಂದ ಸಾವು, ಸಾವಿನ ಆಚೆಗೂ ವೈದಿಕರು ಕರ್ಮಾಚರಣೆ ಮಾಡಲು ಬೇಕು ಎಂದರು. 23 ವರ್ಷಗಳಿಂದ ನಾಗರಾಜ ಭಟ್ ದಂಪತಿಗಳು ಈ ಒಂದು ಕಾರ್ಯಕ್ಕೆ ತಪಸ್ಸು ಮಾಡುತ್ತಿದ್ದಾರೆ. ಒಂದು ತಿಂಗಳ ಕಾಲ ಉಚಿತ ವೇದ ಅಧ್ಯಯನ ಶಿಬಿರ ಏರ್ಪಡಿಸಿ, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದರು.

ಬಳಿಕ ಈ ವರ್ಷದ ಶ್ರೀ ಕೇಶವ ಸ್ಮೃತಿ 2023 ಪ್ರಶಸ್ತಿಯನ್ನು ವೇದ ವಿದ್ವಾಂಸರಾದ ಬ್ರಹ್ಮಶ್ರೀ ವೇ.ಮೂ.ಸುಬ್ರಹ್ಮಣ್ಯ ಕಾರಂತ, ಯೋಗ ಶಿಕ್ಷಕ ಸಂತೋಷ್ ಮುಂಡುಕಜೆ, ಸಂಗೀತ ಶಿಕ್ಷಕಿ ರೇಖಾರೇವತಿ ಹೊನ್ನಡಿಯವರಿಗೆ ದಂತವೈದ್ಯರು, ಸಮಾದೇಷ್ಟರು, ದ.ಕ.ಜಿಲ್ಲಾ ಗೃಹರಕ್ಷಕ ದಳ ಡಾ.ಮುರಳೀಮೂಹನ ಚೂಂತಾರು ಸನ್ಮಾನಿಸಿ, ಗೌರವಿಸಿದರು.

ಸನ್ಮಾನಿತರ ಪಟ್ಟಿಯನ್ನು ಯಶಸ್ವಿನಿ ಪಿ.ಭಟ್, ಶ್ರೀದೇವಿ ನಾಗರಾಜ ಭಟ್, ಅಕ್ಷತಾ ವಾಚಿಸಿದರು.

ಇದೇ ವೇಳೆ
ಪೂರ್ಣ ಹಾಜರಾತಿ ಮತ್ತು ಪ್ರತಿಭಾನ್ವಿತ ಶಿಬಿರಾರ್ಥಿಗಳಾದ ಕ್ಷಿತೀಶರಾಮ, ವಿನ್ಯಾಸ ಯಂ.ಆರ್, ಆಪ್ತಕೃಷ್ಣ ಶಾಸ್ತ್ರಿಯವರಿಗೆ ಸರ್ವ ಪ್ರಥಮ ಪುರಸ್ಕಾರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಹಾಗೂ ಪ್ರತಿಭಾ ಪುರಸ್ಕಾರವನ್ನು ಸವಿತ್ರ ಶರ್ಮ, ಅಪ್ರಮೇಯ ಆರ್.ಯು, ಕೃಷ್ಣ ಕಿಶೋರ ಭಾರಧ್ವಜ್, ಓಂಕಾರ ಗೋರೆ ಪಡೆದುಕೊಂಡರು.

ವೇದಿಕೆಯಲ್ಲಿ ಶ್ರೀ ಕೇಶವಕೃಪಾ ವೇದ ಮತ್ತು ಕಲಾಪ್ರತಿಷ್ಠಾನ ಇದರ ಗೌರವಾಧ್ಯಕ್ಷರಾದ ಎಂ.ಗೋಪಾಲಕೃಷ್ಣ ಭಟ್ ವಗೆನಾಡು, ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಪುರೋಹಿತ ನಾಗರಾಜ ಭಟ್ ಉಪಸ್ಥಿತರಿದ್ದರು.

ಸುದರ್ಶನ ಭಟ್ ಸ್ವಾಗತಿಸಿ, ವೈದಿಕ ಮಂತ್ರವನ್ನು ಅಭಿರಾಮ್ ಭಟ್ ಸರಳಿಕುಂಜ ತಂಡ ನೆರವೇರಿಸಿದರು. ವೆ.ಮೂ.ಪುರುಷೋತ್ತಮ ಭಟ್ ಧನ್ಯವಾದ ಗೈದರು, ಕು.ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.