ಅರಂತೋಡು: ಅರಮನೆಗಯ ತೂಗುಸೇತುವೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು

0

ನೀರಾವರಿ ನಿಗಮದ ಇಂಜಿನಿಯರ್ ಜೊತೆ ಸ್ಥಳ ವೀಕ್ಷಿಸಿ ಚರ್ಚಿಸಿದ ಶಾಸಕಿ ಭಾಗೀರಥಿ ಮುರುಳ್ಯ

ಅರಂತೋಡು ಗ್ರಾಮದ ಅರಮನೆಗಯದಲ್ಲಿರುವ ತೂಗು ಸೇತುವೆಯು ಸಂಚಾರಕ್ಕೆ ಅಪಾಯಕಾರಿ ಆಗಿರುವುದರಿಂದ ಸಾರ್ವಜನಿಕರ ಸಂಚಾರವನ್ನು ಜಿಲ್ಲಾಧಿಕಾರಿಗಳ ಸೂಚನೆಯಂತೆ ಗ್ರಾ.ಪಂ. ವತಿಯಿಂದ ಬಂದ್ ಮಾಡಲಾಗಿದ್ದು, ಹೊಸ ಸೇತುವೆಗೆ ಶಾಸಕರು ಹಾಗೂ ಸಂಸದರಿಗೆ ಮನವಿ ಮಾಡಲಾಗಿದ್ದು, ಜು.21ರಂದು ಶಾಸಕಿ ಭಾಗೀರಥಿ ಮುರುಳ್ಯ ಅವರು ನೀರಾವರಿ ನಿಗಮದ ಇಂಜಿನಿಯರ್ ಅವರ ಜೊತೆ ಸ್ಥಳಕ್ಕೆ ಭೇಟಿ ನೀಡಿ ಚರ್ಚಿಸಿದರು.

ಶಾಶ್ವತ ಸೇತುವೆ ನಿರ್ಮಾಣಕ್ಕೆ ಆರಂತೋಡು ಪಂಚಾಯತ್ ಅಧ್ಯಕ್ಷ ಕೇಶವ ಆಡ್ತಲೆ, ಅರಂತೋಡು – ತೊಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ ಕುತ್ತಮೊಟ್ಟೆ, ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಭವಾನಿ. ಸಿ. ಎ. ಸದಸ್ಯ ವೆಂಕಟರಮಣ ಪೆತ್ತಾಜೆಯವರ ನಿಯೋಗವು ಮನವಿ ಸಲ್ಲಿಸಿದ್ದರು.

ಮನವಿಗೆ ಸ್ಪಂದಿಸಿರುವ ಶಾಸಕಿ ಭಾಗಿರಥಿ ಮುರುಳ್ಯ ಅವರು ಜು.21ರಂದು ವಾರಾಹಿ ನೀರಾವರಿ ನಿಗಮದ ಇಂಜಿನಿಯರ್ ಗಳಾದ ಪ್ರಸನ್ನ ಶೇಟ್ ಮತ್ತು ಕಿರಣ್ ಪಡ್ತಿ ಅವರ ಜೊತೆಗೆ ಅರಮನೆಗಯಕ್ಕೆ ಭೇಟಿ ನೀಡಿ ಕಿಂಡಿ ಆಣೆಕಟ್ಟು, ಸೇತುವೆ ನಿರ್ಮಾಣದ ಬಗ್ಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಮಾಜಿ ಜಿ‌‌.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಆರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಮತ್ತು ಅರಮನೆಗಯದ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.