ಅಡುಗೆ ಸಿಬ್ಬಂದಿಗಳ ವೇತನ ಸಹಿತ ವಿವಿಧ ಬೇಡಿಕೆ ಈಡೇರಿಸಲು ಉಸ್ತುವಾರಿ ಸಚಿವರಿಗೆ ಮನವಿ

0

ಅಡುಗೆ ಸಿಬ್ಬಂದಿಗಳ ವೇತನ ಸಹಿತ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ರಂಜಿತ್ ರೈ ಮೇನಾಲ ಹಾಗೂ ಮೇನಾಲ ಕಿ.ಪ್ರ.ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಶೌಕತ್ ಅಲಿಯವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

ಸರಕಾರಿ ಶಾಲೆಗಳ ಆವರಣದಲ್ಲಿ ಸ್ವಚ್ಛತೆ ಇಲ್ಲದ ಕಾರಣ ಮಕ್ಕಳಿಗೆ ಆರೋಗ್ಯದ ಸಮಸ್ಯೆಗಳು ಉಂಟಾಗುತ್ತದೆ. ಸರಕಾರಿ ಶಾಲೆಯ ಆವರಣ ಸ್ವಚ್ಛಗೊಳಿಸಲು ಯಾವುದೇ ಅನುದಾನಗಳು ಬರುವುದಿಲ್ಲ. ಶಾಲೆಗಳ ಆವರಣ ಸ್ವಚ್ಛತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಗ್ರಾಮ ಪಂಚಾಯತ್‌ಗಳಿಗೆ ವಹಿಸಬೇಕು.

ಸರಕಾರಿ ಶಾಲೆಗಳಿಗೆ ಸರಕಾರದ ಅನುದಾನ ಬಿಡುಗಡೆಗಳಲ್ಲಿ ಬದಲಾವಣೆಯನ್ನು ಬಯಸುತ್ತೇವೆ. ಹೊಸ ಕೊಠಡಿಗಳು, ಅಕ್ಷರ ದಾಸೋಹ ಕೊಠಡಿ, ಶೌಚಾಲಯಗಳು, ಶಾಲಾ ಕಾಂಪೌಂಡ್ ಇವುಗಳ ನಿರ್ಮಾಣಕ್ಕೆ ಹೊಸದಾಗಿ ಬಿಡುಗಡೆ ಮಾಡುವ ಎಲ್ಲಾ ಅನುದಾನಗಳನ್ನು ಶಿಕ್ಷಣ ಇಲಾಖೆ, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್‌ಗಳಿಗೆ ನೇರವಾಗಿ ನೀಡಿ ನಂತರ ಟೆಂಡರ್‌ಳಿಗೆ ನೀಡುವಂತಾಗಬೇಕು.


ಈಗ ಬರುವ ನರೇಗಾ ಉದ್ಯೋಗ ಖಾತರಿಯ ಅನುದಾನದಲ್ಲಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಶಾಲಾಭಿವೃದ್ಧಿ ಸಮಿತಿಗಳು ಕಷ್ಟಪಡುವಂತಾಗಿದೆ. ಉದ್ಯೋಗ ಖಾತರಿಯ ದಿನ ಕೂಲಿ ಸಂಬಳದ ಅನುಸಾರವಾಗಿ ಊರಿನ ಪೋಷಕರ ಖಾತೆಗೆ ಹಣ ಜಮಾ ಮಾಡುವುದರಿಂದ ಸದ್ರಿ ಜಮಾ ಮಾಡಿದ ಹಣವನ್ನು ಪಡೆಯಲು ಶಾಲಾಭಿವೃದ್ಧಿ ಸಮಿತಿಯವರು ಕಷ್ಟಪಡುವಂತಾಗಿದೆ. ಶಾಲಾ ಅಭಿವೃದ್ಧಿಗೆ ಸಮಿತಿಯವರು ಕೈಜೋಡಿಸದಂತಾಗಿದೆ. ಸರಕಾರಿ ಶಾಲೆಯ ಅನುದಾನವನ್ನು ಆಯಾ ಇಲಾಖೆಗಳಿಗೆ ನೇರವಾಗಿ ನೀಡಿ ಟೆಂಡರುಗಳಿಗೆ ನೀಡುವಂತಾಗಬೇಕು ಆದರೆ ಮಾತ್ರ ಸರಕಾರಿ ಶಾಲೆಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ವಿಷಯಗಳನ್ನಿಟ್ಟು ಅವರು ಮನವಿ ಸಲ್ಲಿಸಿದ್ದಾರೆ.