ಡಾ. ಮುರಲೀಮೋಹನ್ ಚೂಂತಾರುರವರಿಗೆ ರಾಷ್ಟ್ರಪತಿ ಪದಕ

0

ಕಳೆದ ಒಂಬತ್ತೂವರೆ ವರುಷಗಳಿಂದ ದ.ಕ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟನಾಗಿ ಸೇವೆ ಸಲ್ಲಿಸುತ್ತಿರುವ ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕ ಡಾ. ಮುರಲೀಮೋಹನ್ ಚೂಂತಾರುರವರು ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.
ಇವರು ಸಲ್ಲಿಸಿದ ಪ್ರಾಮಾಣಿಕ, ಪಾರದರ್ಶಕ, ನಿಷ್ಪಕ್ಷಪಾತ ಮತ್ತು ನಿಷ್ಕಾಮ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರ ಗೃಹ ಮಂತ್ರಾಲಯದ ಶಿಫಾರಸಿನಂತೆ ಪ್ರತಿಷ್ಟಿತ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕಕ್ಕೆ ಆಯ್ಕೆಯಾಗಿದ್ದಾರೆ. ಇವರ ತಾಯಿ ಸರೋಜಿನಿ ಭಟ್ಟ್ ಸ್ಮರಣಾರ್ಥ ಚೂಂತಾರು ಸರೋಜಿನಿ ಟ್ರಸ್ಟ್ ಸ್ಥಾಪಿಸಿ ಆ ಮೂಲಕ ಸಮಾಜ ಸೇವೆ‌ ಮಾಡುತ್ತಾ ಬಂದಿರುವ ಇವರು ಮೂಲತಃ: ಅಮರಪಡ್ನೂರು ಗ್ರಾಮದ ಚೂಂತಾರಿನವರಾಗಿದ್ದು, ವೇ.ಮೂ. ಲಕ್ಷ್ಮೀನಾರಾಯಣ ಭಟ್ ಮತ್ತು ಶ್ರೀಮತಿ ಸರೋಜಿನಿ ಭಟ್ ದಂಪತಿಯ ಪುತ್ರ. ಕಳೆದ 27 ವರ್ಷಗಳಿಂದ ಮಂಜೇಶ್ವರದಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇವರ ಪತ್ನಿ ಡಾ. ರಾಜಶ್ರೀ ಮೋಹನ್ ಇವರೊಂದಿಗೆ ವೈದ್ಯರಾಗಿ ಸೇವೆ ಸಲ್ಲಿಸಿದರೆ ಪುತ್ರ ಸಮರ್ಥ್ ಭಟ್ ಚೂಂತಾರು ಜುರಿಕ್ ಯೂನಿವರ್ಸಿಟಿಯಲ್ಲಿ ಗಣಿತಶಾಸ್ತ್ರ ವಿಷಯದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದರೆ, ಪುತ್ರಿ ಸಿರಿ ಪುಣೆಯಲ್ಲಿ ಬಿಎ-ಎಂಎಸ್ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಇವರ ಸಹೋದರರ ಮಹೇಶ್ ಭಟ್ ಚೂಂತಾರು ಚೊಕ್ಕಾಡಿ ಶ್ರೀರಾಮ ದೇವಾಲಯದ ಶ್ರೀರಾಮ ಸೇವಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರೆ ಇನ್ನೋರ್ವ ಸಹೋದರೆ ಅಮೇರಿಕಾದಲ್ಲಿದ್ದಾರೆ. ಸಹೋದರಿ ಶ್ರೀಮತಿ ಗೀತಾ ಗಣೇಶ್ ಮಂಗಳೂರಿನಲ್ಲಿ ನೆಲೆಸಿದ್ದಾರೆ. ರಾಷ್ಟ್ರಪತಿ ಪದಕ ಆ. 15ರಂದು ಬೆಂಗಳೂರಿನಲ್ಲಿ ನಡೆಯುವ 76ನೇ ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ಸ್ವೀಕರಿಸಲಿದ್ದಾರೆ.