ಕನಕಮಜಲು: ಇಲಿಜ್ವರಕ್ಕೆ ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಬಲಿ

0

ಅಸೌಖ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಯುವಕನೋರ್ವ ಇಲಿ ಜ್ವರದಿಂದ ಮೃತಪಟ್ಟ ಘಟನೆ ಕನಕಮಜಲು ಗ್ರಾಮದ ಆನೆಗುಂಡಿಯಲ್ಲಿ ಸೆ.1ರಂದು ರಾತ್ರಿ ಸಂಭವಿಸಿದೆ.

ಕನಕಮಜಲು ಗ್ರಾಮದ ಆನೆಗುಂಡಿ ಸಿ.ಆರ್.ಸಿ. ತಮಿಳು ಕಾಲನಿಯ ಸಿದ್ಧಯ್ಯ ಅವರ ಪುತ್ರ ಯುವರಾಜ್ (ದಿನೇಶ್) ಅವರು ಜ್ವರದ ಹಿನ್ನೆಲೆಯಲ್ಲಿ ಕಳೆದ ವಾರ ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಜ್ವರ ಮತ್ತಷ್ಟು ಹೆಚ್ಚಾದ ಹಿನ್ನೆಲೆಯಲ್ಲಿ ಸುಳ್ಯದಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಲ್ಲಿ ರಕ್ತಪರೀಕ್ಷೆಯ ವರದಿಯಲ್ಲಿ ಇಲಿಜ್ವರ ಎಂದು ದೃಢಪಟ್ಟಿದ್ದು, ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸೆ.1ರಂದು ರಾತ್ರಿ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.

ಯುವರಾಜ್ ಅವರು ರಬ್ಬರ್ ಟ್ಯಾಪಿಂಗ್ ಕಾರ್ಮಿಕರಾಗಿ ಕಳೆದ ಹಲವಾರು ವರ್ಷಗಳಿಂದ ದುಡಿಯುತ್ತಿದ್ದರು. ಅವರಿಗೆ 36 ವರ್ಷ ವಯಸ್ಸಾಗಿತ್ತು.

ಮೃತರು ತಾಯಿ ಶ್ರೀಮತಿ ಚಂದ್ರಾವತಿ, ಸಹೋದರಿಯರಾದ ಧನಲಕ್ಷ್ಮಿ, ಶಶಿಕಲಾ, ಅಮುದಾ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.