ರಾಜ್ಯ ಸರಕಾರದಿಂದ ಅಕ್ರಮ ಪಡಿತರ ಚೀಟಿ ರದ್ದತಿಗೆ ಕ್ರಮ – ಸುಳ್ಯ ತಾಲೂಕಿನಲ್ಲಿ ಎರಡು ಸಾವಿರಕ್ಕೂ ಅಧಿಕ ಪಡಿತರ ಚೀಟಿದಾರರ ಮಾಹಿತಿ ಕೇಳಿದ ಸರಕಾರ

0

ರಾಜ್ಯದಲ್ಲಿ ಪಂಚ ಗ್ಯಾರಂಟಿ ಜಾರಿ ಬೆನ್ನಲ್ಲೇ ನಕಲಿ ಪಡಿತರ ಚೀಟಿದಾರರ ಪತ್ತೆಗೆ ಸರಕಾರವು ಕ್ರಮ ಕೈಗೊಂಡಿದ್ದು ರಾಜ್ಯದಲ್ಲಿ ಲಕ್ಷಾಂತರ ನಕಲಿ ಪಡಿತರ ಚೀಟಿದಾರರನ್ನು ಪತ್ತೆ ಹಚ್ಚಲಾಗಿದೆ. ಸುಳ್ಯ ತಾಲೂಕಿನಲ್ಲಿ 16 ಸಾವಿರಕ್ಕಿಂತ ಹೆಚ್ಚಿನ ಬಿಪಿಎಲ್ ಪಡಿತರ ಚೀಟಿ ಇದ್ದು ಇದರಲ್ಲಿ ನಕಲಿ ಹಾಗೂ ಆದಾಯ ತೆರಿಗೆ ಪಾವತಿದಾರರು ಬಿಪಿಎಲ್ ಪಡೆದಿರುವ ಬಗ್ಗೆ ಸರಕಾರವು ಪತ್ತೆಮಾಡಿದೆ. ಸುಳ್ಯ ತಾಲೂಕಿನಲ್ಲಿ ಒಟ್ಟಾರೆಯಾಗಿ ಇಂತಹ ಸುಮಾರು 2998 ಪಡಿತರ ಚೀಟಿ ದಾರರನ್ನು ಗುರುತಿಸಿದ್ದು ಅಂತಹ ಕಾರ್ಡ್ ದಾರರಿಗೆ ನೋಟಿಸ್ ನೀಡಿ ಕಛೇರಿಗೆ ಬರುವಂತೆ ತಿಳಿಸಲಾಗಿದೆ. ಇದೀಗ 42 ಕುಟುಂಬಗಳ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಪಡಿಸಲಾಗಿದೆ. ಈ ಪೈಕಿ 257 ಕುಟುಂಬವು ಆದಾಯ ತೆರಿಗೆ ಪಾವತಿಸಿದ್ದು, ಇವುಗಳಲ್ಲಿ 9 ಬಿಪಿಎಲ್ ಪಡಿತರ ಚೀಟಿಗಳನ್ನು ಎಪಿಎಲ್ ಮಾಡಲಾಗಿದೆ ಅಲ್ಲದೇ 136 ಬಿಪಿಎಲ್ ಪಡಿತರ ಚೀಟಿ ದಾರರು ಅರ್ಹತೆಗಿಂತ ಹೆಚ್ಚಿನ ಆದಾಯ ಹೊಂದಿರುವ ಆದಾಯ ಪ್ರಮಾಣ ಪತ್ರದ ಮೂಲಕ ಗುರುತಿಸಲಾಗಿದ್ದು ಇವುಗಳನ್ನು ಕೂಡ ಪರಿಶೀಲನೆ ನಡೆಸಲಾಗುತ್ತಿದೆ.

ಈಗಾಗಲೇ ಸರಕಾರದಿಂದ ಆದೇಶದ ಮೇರೆಗೆ ಗ್ರಾಮ ಆಡಳಿತಾಧಿಕಾರಿಗಳಿಗೆ ಮಾಹಿತಿಯನ್ನು ಒದಗಿಸುವಂತೆ ಆಹಾರ ಇಲಾಖೆಯು ಕೇಳಿಕೊಂಡಿದ್ದು ಅವರು ಸಮಯಾವಕಾಶವನ್ನು ಕೋರಿಕೊಂಡಿದ್ದು ಮುಂದಿನ ದಿನಗಳಲ್ಲಿ ಇದರ ನಂತರದ ಪ್ರಕ್ರಿಯೆಗಳು ನಡೆಯಲಿದೆ. ಅಲ್ಲದೇ ಕೆಲ ಪಡಿತರ ಚೀಟಿದಾರರು ಮಾಹಿತಿಯನ್ನು ಒದಗಿಸಿದ್ದು ಅವುಗಳ ಕಡತವನ್ನು ರಚಿಸಿಕೊಂಡು ಇಡಲಾಗಿದೆ.

ಸರಕಾರದಿಂದ ತನಿಖೆಗೆ ವಿಶೇಷ ತಂಡ ಆಗಮಿಸಿ ಪರಿಶೀಲನೆ

ಮುಂದಿನ ದಿನಗಳಲ್ಲಿ ಸರಕಾರದಿಂದ ವಿಶೇಷ ತಂಡವು ಆಗಮಿಸಿ ಪರಿಶೀಲನೆ ನಡೆಸಲಿದ್ದು ಇದೀಗ ಸರಕಾರ ನೀಡಿರುವ 2998 ಕುಟುಂಬಗಳ ಮಾಹಿತಿಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಲಿದೆ. ಅಲ್ಲದೇ ಸುಮಾರು 6 ತಿಂಗಳುಗಳಿಂದ ಪಡಿತರ ಅಕ್ಕಿ ಪಡೆಯದೇ ಇರುವ ಸುಮಾರು 126 ಚೀಟಿಗಳು ರದ್ದಾಗಿದೆ. ಅಲ್ಲದೇ ಸುಳ್ಯ ತಾಲೂಕಿನಲ್ಲಿ ಸುಮಾರು 1382 ಅಂತ್ಯೋದೋಯ ಪಡಿತರ ಚೀಟಿ ಇದ್ದು ಅವುಗಳಲ್ಲಿ ಕೆಲವರು ಬಿಪಿಎಲ್ ಗೆ ಪರಿವರ್ತನೆ ಮಾಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಅಲ್ಲದೇ ಕೆಲವು ಕಾರ್ಡ್ ಗಳು ಕೆ ವೈ ಸಿ ಮತ್ತು ಆಧಾರ್ ಲಿಂಕ್ ಬ್ಯಾಂಕ್ ಗಳಿಗೆ ಮಾಡದೇ ಇದ್ದಲ್ಲಿ ಪಡಿತರ ಅಕ್ಕಿಯ ಹಣ ಬಾರದೇ ಇರಬಹುದಾಗಿದೆ. ಅಲ್ಲದೇ ಗ್ರಾಮ ವಾರು ರದ್ದಾದ ಕಾರ್ಡ್ ಗಳ ಸಂಖ್ಯೆ ಈ ಕೆಳಗಿನಂತಿವೆ.

ಐವರ್ನಾಡು 6 , ಮರ್ಕಂಜ 3 , ಸುಳ್ಯ ನಗರ 9 , ಅಮರ ಮುಡ್ನೂರು 5 ,, ಉಬರಡ್ಕ 1 , ಜಾಲ್ಸೂರು 5 , ಮಂಡೆಕೋಲು 4 , ದೇವಚಳ್ಳ 2 , ನೆಲ್ಲೂರು ಕೆಮ್ರಾಜೆ , ಕಲ್ಮಡ್ಕ ,ಬೆಳ್ಳಾರೆ , ಪೆರುವಾಜೆ , ಕಳಂಜ , ಗುತ್ತಿಗಾರು , ಹರಿಹರ ಗ್ರಾಮಗಳಲ್ಲಿ ಒಂದು ಕಾರ್ಡ್ ಗಳಂತೆ ಒಟ್ಟಾರೆಯಾಗಿ 42 ಪಡಿತರ ಚೀಟಿ ರದ್ದಾಗಿದೆ ಎಂದು ಆಹಾರ ನಿರೀಕ್ಷಕಿ ಅನಿತಾ ಟಿ ಎ ತಿಳಿಸಿದ್ದಾರೆ .