ಬೆಂಗಳೂರಿನಿಂದ ಮಂಗಳೂರಿಗೆ ರೈಲಿನಲ್ಲಿ ಬರುತ್ತಿದ್ದ ಸುಳ್ಯದ ಯುವಕನ ಮೇಲೆ ಗುಂಪು ಹಲ್ಲೆ

0

ಹಲ್ಲೆ ನಡೆಸಿದ ಯುವಕರನ್ನು ಬಂಧಿಸಿದ ಪುತ್ತೂರು ಪೊಲೀಸರು

ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ರೈಲಿನಲ್ಲಿ ಸುಳ್ಯದ ಯುವಕನಿಗೆ ಅದೇ ರೈಲಿನಲ್ಲಿದ್ದ ನಾಲ್ವರು ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ಹಲ್ಲೆ ನಡೆಸಿ ಪರಾರಿಯಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಘಟನೆ ತಿಳಿದ ಪುತ್ತೂರು ಪೊಲೀಸರು ಹಲ್ಲೆ ನಡೆಸಿ ಪರಾರಿಯಾದ ನಾಲ್ವರನ್ನು ಸಾಲ್ಮರ ಬಳಿಯಿಂದ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನಿಂದ ಪುತ್ತೂರು ಮಾರ್ಗವಾಗಿ ಮಂಗಳೂರು ಕಡೆ ಹೋಗುವ ರೈಲಿನಲ್ಲಿ ಕೆಲ ಮಂದಿ ಗಲಾಟೆ ಮಾಡುತ್ತಿರುವುದನ್ನು ಯುವಕನೊಬ್ಬ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.


ಈ ವೇಳೆ ಗಲಾಟೆ ಮಾಡಿ ಇತರ ಪ್ರಯಾಣಿಕರಿಗೆ ತೊಂದರೆ ಕೊಡುತ್ತಿದ್ದ ನಾಲ್ವರಿಗೆ ರೈಲ್ವೆ ಪೊಲೀಸರು ಎಚ್ಚರಿಕೆ ನೀಡಿದ್ದರು. ಆದರೆ ರೈಲ್ವೇ ಪೊಲೀಸರಿಗೆ ದೂರು ನೀಡಿದ ವ್ಯಕ್ತಿಯನ್ನು ಕಬಕ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಬಂದ ತಕ್ಷಣ ಆ ನಾಲ್ವರು ಹಿಗ್ಗಾಮುಗ್ಗ ಹಲ್ಲೆ ನಡೆಸಿ ಪರಾರಿಯಾಗಿದ್ದರು ಎನ್ನಲಾಗಿದ್ದು ಈ ಕುರಿತು ಪುತ್ತೂರು ನಗರ ಠಾಣಾ ಪೊಲೀಸರಿಗೆ ಬಂದ ಮಾಹಿತಿಯಂತೆ ಪರಾರಿಯಾದ ನಾಲ್ವರನ್ನು ಸಾಲ್ಮರ ದಿಂದ ಬಳಿಯಿಂದ ವಶಕ್ಕೆ ಪಡೆದು‌ಕೊಂಡಿದ್ದಾರೆ. ಹಲ್ಲೆ ನಡೆಸಿದ ನಾಲ್ವರು ಪುತ್ತೂರಿನವರೆಂದು ತಿಳಿದು ಬಂದಿದೆ.ಹಲ್ಲೆಗೊಳಗಾದ ಯುವಕ ಸುಳ್ಯ ಮೂಲದವರು ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಇನ್ನೂ ತಿಳಿಯಬೇಕಾಗಿದೆ.