ಎನ್ನೆಂಸಿಯ ಯುವ ರೆಡ್ ಕ್ರಾಸ್ ಘಟಕದ ವಾರ್ಷಿಕ ಚಟುವಟಿಕೆಗಳಿಗೆ ಚಾಲನೆ

0

ಸೇವೆಯ ಮೂಲಕ ಸಾರ್ಥಕ ಜೀವನ : ಮಂಜುನಾಥ ಎಂ.

ಮನುಷ್ಯ ತನ್ನ ಜೀವನದಲ್ಲಿ ಸಮಾಜಕ್ಕೆ ಕಿಂಚಿತ್ ಸೇವೆಯನ್ನು ಮಾಡುವ ಮೂಲಕ ಸಾರ್ಥಕ ಜೀವನವನ್ನು
ಕಟ್ಟಿಕೊಳ್ಳಬೇಕು. ರೆಡ್ ಕ್ರಾಸ್ ಸಂಸ್ಥೆ ಬಹಳಷ್ಟು ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡಿದ್ದು ಅದರ ದ್ಯೇಯೋದ್ದೇಶವನ್ನು ಅರಿತು
ಸೇವಾ ಮನೋಭಾವದೊಂದಿಗೆ ಪ್ರಾಮಾಣಿಕವಾಗಿ ತಮ್ಮನ್ನು ತೊಡಗಿಸಿಕೊಳ್ಳಿ.‌ ಆ ಮೂಲಕ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಎಂದು ಸುಳ್ಯದ
ಪ್ರಭಾರ ತಹಶೀಲ್ದಾರರಾದ ಮಂಜುನಾಥ್ ಎಂ ಅಭಿಪ್ರಾಯಪಟ್ಟರು. ಅವರು ಸುಳ್ಯದ ನೆಹರೂ ಮೆಮೊರೀಯಲ್ ಕಾಲೇಜಿನಲ್ಲಿ ಹಮ್ಮಿಕೊಂಡ ಯುವ ರೆಡ್ ಕ್ರಾಸ್ ಘಟಕದ 2024-25 ನೇ
ಸಾಲಿನ ವಾರ್ಷಿಕ ಚಟುವಟಿಕೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.


ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಕಾರ್ಯದರ್ಶಿ ಹೇಮನಾಥ್ ಕೆ ವಿ ಮಾತನಾಡುತ್ತಾ ಮಾನವನ ದುರಾಸೆಯಿಂದಲೇ ಇಂದು ಬಹಳಷ್ಟು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಯುವ ಜನತೆ ಅಂತ ಕೆಟ್ಟ ಚಟುವಟಿಕೆಗಳಿಂದ ಮುಕ್ತಿಹೊಂದಿ ಸುಖ ಜೀವನ ಕಟ್ಟಿಕೊಳ್ಳಬೇಕು ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ರುದ್ರ ಕುಮಾರ್ ಎಂ ಎಂ, ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲ್,
ಪೊಲೀಸ್ ಕಾನ್ ಸ್ಟೇಬಲ್ ಗಳಾದ
ಶ್ರೀಮತಿ ಜ್ಯೋತಿ ಕೆ ವಿ ಹಾಗೂ ದಿನೇಶ್
ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮಾಧಿಕಾರಿ ಡಾ. ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿ,
ರೆಡ್ ಕ್ರಾಸ್ ಘಟಕವನ್ನು ಮತ್ತೆ ಕಟ್ಟುವಲ್ಲಿ ಎಲ್ಲರ ಸಹಕಾರವನ್ನು ಕೋರುವುದರೊಂದಿಗೆ ಘಟಕದಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ದೊರೆಯುವ ಮಾಹಿತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು
ಸಭ್ಯ ನಾಗರಿಕರಾಗಿ ಬಾಳಿ ಎಂದರು.


ಉಪನ್ಯಾಸಕ ಸಂಜೀವ ಕುದ್ಪಾಜೆ, ಯುವ ರೆಡ್ ಕ್ರಾಸ್ ಘಟಕದ ನಾಯಕ ಷಣ್ಮುಖ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರೆಡ್ ಕ್ರಾಸ್ ಸದಸ್ಯರಾದ
ಸುಶ್ಮಿತಾ, ಸ್ಪಂದನಾ, ದೀಪಾ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಘಟಕ ನಾಯಕಿ ದೀಕ್ಷಾ ಎನ್ ಆರ್ ಸ್ವಾಗತಿಸಿ, ಸದಸ್ಯರಾದ ಪವನ್ ವಂದಿಸಿ, ರಿಷಿತಾ ಎ ಕಾರ್ಯಕ್ರಮ ನಿರೂಪಿಸಿದರು.


ರೆಡ್ ಕ್ರಾಸ್ ಸದಸ್ಯರು ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.