ಜೀವನ ಪದ್ದತಿ ಸುಧಾರಣೆ, ಸ್ವಾವಲಂಬಿ ಬದುಕಿಗೆ ಸಹಕಾರಿ ತತ್ವ; ಸಂಜೀವ ಮಠಂದೂರು

ಜನರ ಜೀವನ ಪದ್ಧತಿ ಸುಧಾರಣೆ ಮತ್ತು ಸ್ವಾವಲಂಬಿ ಬದುಕು ಸಹಕಾರ ಕ್ಷೇತ್ರದಿಂದ ಮಾತ್ರ ಸಾಧ್ಯ. ಸಹಕಾರ ರಂಗ ಜನರ ಪ್ರೀತಿ ವಿಶ್ವಾಸ ಗಳಿಸಿದೆ.ಸಹಕಾರ ರಂಗ ಬಲಗೊಂಡಾಗ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ ಎಂದು ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಇಂದು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆದ ಕೊಡಗು ದಕ್ಷಿಣ ಕನ್ನಡ ಗೌಡ ಸೌಹಾರ್ದ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಸುಳ್ಯ ಶಾಖೆಯ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸಹಕಾರಿ ಸಂಘದ ವಾರ್ಷಿಕ ದಿನದ ಅಂಗವಾಗಿ ಹಮ್ಮಿಕೊಂಡ ವಿನೂತನ ಕಾರ್ಯಕ್ರಮವಾಗಿದೆ ಎಂದು ಶ್ಲಾಘಿಸಿದ ಅವರು ರಾಷ್ಟ್ರೀಕೃತ ಬ್ಯಾಂಕುಗಳು ಜನರ ಆಶೋತ್ತರಗಳನ್ನು ಈಡೇರಿಸವ ಕೆಲಸಗಳನ್ನು ಮಾಡುತ್ತಿಲ್ಲ, ಆ ಕೆಲಸಗಳನ್ನು ಸಹಕಾರಿ ಸಂಘಗಳು ಮಾಡುತ್ತಿವೆ.ಕೇಂದ್ರ ಸರಕಾರ ಮಲ್ಟಿ ಸ್ಟೇಟ್ ಸಹಕಾರಿ ಆ್ಯಕ್ಟ್ ಮಾಡಿ ಜನರಿಗೆ ಅನುಕೂಲ ಮಾಡಿದೆ.ಸಹಕಾರಿ ಸಂಘದ ಅಳಿವು ಉಳಿವು ಸದಸ್ಯರ ಕೈಯಲ್ಲಿದೆ ಎಂದು ಅವರು ಹೇಳಿದರು.
ಸುಳ್ಯ ವೆಂಕಟರಮಣ ಕ್ರಿಕೆಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಸಿ.ಸದಾನಂದ ಮಾತನಾಡಿ ಸಹಕಾರಿ ಸಂಸ್ಥೆಗಳು ನಂಬಿಕೆಯ ಮೇಲೆ ನಡೆಯುತ್ತದೆ.ಸಂಸ್ಥೆಯನ್ನು ಆರಂಭಿಸುವುದು ಸುಲಭ ಬೆಳೆಸುವುದು ಕಷ್ಟ, ವಿಶ್ವಾಸ ಸಂಪಾದಿಸಿ ಮುನ್ನಡೆಸಬೇಕು ಎಂದು ಹೇಳಿದರು.
ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಮಾತನಾಡಿ ಅತ್ಯಂತ ಹೆಚ್ಚು ಸಹಕಾರಿ ಸಂಸ್ಥೆಗಳು ಇರುವುದು ಸುಳ್ಯದಲ್ಲಿ. ಎಲ್ಲಾ ಸಹಕಾರಿ ಸಂಸ್ಥೆಗಳನ್ನು ನಾವು ಸ್ವಾಗತಿಸುತ್ತೇವೆ.ಸಹಕಾರಿ ಸಂಸ್ಥೆಗಳಿಂದ ಉದ್ಯೋಗಾವಕಾಶ ಸೃಷ್ಟಿಯಾಗುತ್ತಿದೆ.ವರ್ತಕರ ಸಂಘದ ವತಿಯಿಂದ ಸಹಕಾರ ನೀಡುತ್ತೇವೆ ಎಂದರು.
ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ಮಾಲಕ ಕೃಷ್ಣ ಕಾಮತ್ ಮಾತನಾಡಿ ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ.ಎನ್.ಎ.ಜ್ಞಾನೇಶ್ ಮಾತನಾಡಿ ಹೊಸ ಸಂಸ್ಥೆಯಾಗಿರುವುದರಿಂದ ಬೆಳವಣಿಗೆಗೆ ಹಾರ್ಡ್ ವರ್ಕ್ ಮಾಡಬೇಕಾಗುತ್ತದೆ. ಅರೆಭಾಷೆ ಅಕಾಡೆಮಿ ವತಿಯಿಂದ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸುವ ಯೋಚನೆಯಿದ್ದು, ನಿಮ್ಮಸಹಕಾರ ಬೇಕು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ನಂಗಾರು ನಿಂಗರಾಜು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕು.ವಿಜೇತ ಕಲ್ಲುಮುಟ್ಲು ಪ್ರಾರ್ಥಿಸಿದರು. ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕರಾದ ರವೀಂದ್ರನಾಥ ಕೇವಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.ನಿರ್ದೇಶಕರಾದ ರಾಧಾಕೃಷ್ಣ ಗುತ್ತಿಗಾರುಮೂಲೆ ವಂದಿಸಿದರು.
ವಸಂತ ವೀರಮಂಗಲ ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿರ್ದೇಶಕರು ಸಹಕರಿಸಿದರು.



100ಕೋಟಿ ರೂ.ವ್ಯವಹಾರ
ಕೊಡಗು ದ.ಕ.ಗೌಡ ಸಮಾಜ ಬೆಂಗಳೂರು ಇದರ ಆಶ್ರಯದಲ್ಲಿ 2013ರಲ್ಲಿ ಸಹಕಾರಿ ಸೌಹಾರ್ದ ಸಂಘ ಆರಂಭಗೊಂಡಿತು. ಕೇಂದ್ರ ಕಚೇರಿ ಬೆಂಗಳೂರಿನಲ್ಲಿದ್ದು, ಕುಶಾಲನಗರ, ಮಡಿಕೇರಿ ಮತ್ತು ಸುಳ್ಯದಲ್ಲಿ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ.ವಾರ್ಷಿಕ ಸುಮಾರು 100ಕೋಟಿಗೂ ಮಿಕ್ಕಿ ವ್ಯವಹಾರ ನಡೆಯುತ್ತಿದೆ. ಶೇ 11 ರಷ್ಟು ಡಿವಿಡೆಂಟ್ ವಿತರಿಸುತ್ತಿದ್ದೇವೆ. ನಾವು ಸಮಾಜ ಬಾಂಧವರಿಗೆ 200 ಸೈಟ್ ಗಳನ್ನು ಹಂಚಿದ್ದೇವೆ. ಸುಳ್ಯ ಶಾಖೆಯು ಲಾಭದಾಯಕವಾಗಿ ನಡೆಯಲು ನಿಮ್ಮೆಲ್ಲರ ಸಹಕಾರ ಬೇಕು ಎಂದು ಅಧ್ಯಕ್ಷತೆ ವಹಿಸಿದ ಉಪಾಧ್ಯಕ್ಷ ನಂಗಾರು ನಿಂಗರಾಜು ಹೇಳಿದರು.