ಕಾಂಗ್ರೆಸ್ ನಾಯಕರ ಅಮಾನತು, ಉಚ್ಛಾಟನೆ: ಶಿಸ್ತು ಸಮಿತಿ ನಡೆಗೆ ಗೋಕುಲ್ ದಾಸ್ ಖಂಡನೆ

0

ಬ್ಲಾಕ್ ಕಾಂಗ್ರೆಸ್ ಹೊಸ ಸಮಿತಿ ರಚಿಸಲು ಒತ್ತಾಯ

ಕಾಂಗ್ರೆಸ್ ನಾಯಕರ ಅಮಾನತು, ಉಚ್ಛಾಟನೆ ನಡೆಸಿದ ಶಿಸ್ತು ಸಮಿತಿ ನಡೆಗೆ ಕಾಂಗ್ರೆಸ್ ನಾಯಕ ಗೋಕುಲ್ ದಾಸ್ ಖಂಡನೆ ವ್ಯಕ್ತಪಡಿಸಿದ್ದಾರೆ.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜನಬೆಂಬಲವಿದ್ದ ಅಭ್ಯರ್ಥಿ ನಂದಕುಮಾರ್ ರವರನ್ನು ಕೈಬಿಟ್ಟು ಜನಸಂಪರ್ಕವಿಲ್ಲದ ಕೃಷ್ಣಪ್ಪ ರವರ ಪರವಾಗಿ ಬ್ಲಾಕ್ ಕಾಂಗ್ರೆಸ್ ನ ಪ್ರಮುಖ ವ್ಯಕ್ತಿಗಳು ಈ ಬಾರಿ ಪಕ್ಷದ ಗೆಲುವು ನಿಶ್ಚಿತ ಎಂಬ ಅಹಂಭಾವದಿಂದ ನಮ್ಮಂತಹ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ.

ಎ ಐ ಸಿ ಸಿ ಸದಸ್ಯ ಸುನಿಲ್ ಕೇದಾರ್ ಅವರು ನಂದಕುಮಾರ್ ಹಾಗೂ ಕಡಬ ಮತ್ತು ಸುಳ್ಯ ತಾಲೂಕಿನ ಪ್ರಮುಖರನ್ನು ಒಟ್ಟು ಸೇರಿಸಿ ಚುನಾವಣೆಯಲ್ಲಿ ಒಮ್ಮತದಿಂದ ಕೆಲಸ ಮಾಡಬೇಕೆಂದು ಬ್ಲಾಕ್ ಅಧ್ಯಕ್ಷರನ್ನು ಮತ್ತು ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷರನ್ನು ಸೇರಿಸಿ ನನ್ನ ಸಮ್ಮುಖದಲ್ಲಿ ಪ್ರತೀ ಗ್ರಾಮದ ಒಂದೊಂದು ಬೂತ್ ನ ಹತ್ತು ಜನರ ತಂಡವನ್ನು ರಚಿಸುವಂತೆ ಸಲಹೆ ನೀಡಿದ್ದರೂ, ಸುನಿಲ್ ಕೇದಾರ್ ರವರ ಮಾತನ್ನು ಕಡೆಗಣಿಸಿ ಚುನಾವಣೆಯಲ್ಲಿ ಬೆರಳೆಣಿಕೆಯ ನಾಯಕರು ಮಾತ್ರವೇ ಯಾವುದೇ ಬೂತ್ ನ ಅಧ್ಯಕ್ಷರ ಸಂಪರ್ಕವನ್ನಾಗಲಿ ಮತದಾರರನ್ನು ಸಂಪರ್ಕಿಸುವುದಾಗಲಿ, ಗ್ರಾಮ ಮಟ್ಟದಲ್ಲಿ ಯಾವುದೇ ಚುನಾವಣೆ ಸಭೆ ನಡೆಸದೆ ಈ ಬಾರಿಯ ಚುನಾವಣೆಯಲ್ಲಿ ಅತೀ ಹೆಚ್ಚಿನ ಮತಗಳ ಅಂತರದಲ್ಲಿ ಸೋಲಿಗೆ ಕಾರಣಕರ್ತರಾಗಿದ್ದಾರೆ.

ಈ ಬಾರಿಯ ಚುನಾವಣೆಯ ಜವಾಬ್ದಾರಿ ವಹಿಸಿಕೊಂಡ ಬ್ಲಾಕ್ ನಾಯಕರು ನೈತಿಕ ನೆಲೆಯಲ್ಲಿ ತಮ್ಮ ಪದವಿಗೆ ರಾಜೀನಾಮೆ ಕೊಟ್ಟು ತಮ್ಮ ಗೌರವವನ್ನು ಉಳಿಸಿ ಕೊಳ್ಳಬೇಕೇ ಹೊರತು ನೈಜ ಕಾರ್ಯಕರ್ತರನ್ನು ಅಮಾನತು ಮಾಡುವುದು ಸರಿಯಲ್ಲ. ಸುಳ್ಯ ಕ್ಷೇತ್ರದ ಗಂಧ ಗಾಳಿಯನ್ನರಿಯದ ಕೆಪಿಸಿಸಿ ಶಿಸ್ತು ಸಮಿತಿಯ ಅಧ್ಯಕ್ಷ ರೆಹಮಾನ್ ಖಾನ್ ಮುಖಾಂತರ ಅಮಾನತು ಪತ್ರವನ್ನು ತಂದ ಕೃಷ್ಣಪ್ಪ ರವರ ಭಯದಿಂದ ಸುಳ್ಯದಲ್ಲಿ ಪಕ್ಷವನ್ನು ಒಡೆಯಲು ಮುಂದಾಗಿರುವ ನಾಯಕರುಗಳು ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಯಾವ ನೈತಿಕತೆ ಇಟ್ಟುಕೊಂಡು ಮತ ಯಾಚನೆ ಮಾಡುತ್ತಾರೆ. ಆದ್ದರಿಂದ ಈ ಅಮಾನತು ಕ್ರಮದ ಬಗ್ಗೆ ಕೆಪಿಸಿಸಿ ಗಮನ ಹರಿಸಿ ಸುಳ್ಯಕ್ಕೆ ನೂತನ ಬ್ಲಾಕ್ ಕಾಂಗ್ರೆಸ್ ಸಮಿತಿಯನ್ನು ರಚಿಸಿ ಎಲ್ಲರನ್ನೂ ಒಗ್ಗೂಡಿಸಿ ಪಕ್ಷದ ಗೆಲುವಿಗಾಗಿ ಶ್ರಮಿಸುವ ಯುವ ಕಾರ್ಯಕರ್ತರಿಗೆ ಅವಕಾಶ ನೀಡಬೇಕು.

ನಮ್ಮ ರಾಜ್ಯಧ್ಯಕ್ಷ ಡಿ. ಕೆ ಶಿವಕುಮಾರ್ ರವರ ಮಾತಿನಂತೆ ಪಕ್ಷಕ್ಕೆ ವ್ಯಕ್ತಿ ಮುಖ್ಯವಲ್ಲ, ಸಂಘಟನೆ ಮಾಡಬಲ್ಲ ಕಾರ್ಯಕರ್ತರು ಮುಖ್ಯ. ಈ ಮಾತನ್ನು ಸುಳ್ಯದ ಕಾರ್ಯಕರ್ತರು ಉಳಿಸಿಕೊಂಡು ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಪಲಾಪೇಕ್ಷೆ ಇಲ್ಲದೇ ದುಡಿಯುತ್ತಿದ್ದಾರೆ. ಆದ್ದರಿಂದ ಜಿಲ್ಲಾ ಮತ್ತು ರಾಜ್ಯ ನಾಯಕರು ಸುಳ್ಯದ ಕಾಂಗ್ರೆಸ್ ಉಳಿಸಿ ಬೆಳೆಸುವರೇ ಈ ಬಗ್ಗೆ ಗಮನ ಹರಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರೂ ಆಗಿರುವ ಗೋಕುಲ್ ದಾಸ್ ತಿಳಿಸಿದ್ದಾರೆ.