ವಿದ್ಯಾರ್ಥಿ ವಿರುದ್ಧ ಉಪನ್ಯಾಸಕಿಯಿಂದ ಸುಳ್ಳು ದೂರು ನೀಡಿದ ಆರೋಪ

0

ಪೆರುವಾಜೆ ಕಾಲೇಜು ವಿದ್ಯಾರ್ಥಿಗಳಿಂದ ತರಗತಿ ಬಹಿಷ್ಕರಿಸಿ ಧರಣಿ

ಉಪನ್ಯಾಸಕಿಯೋರ್ವರು ಕಾಲೇಜು ವಿದ್ಯಾರ್ಥಿ ವಿರುದ್ಧ ಸುಳ್ಳು ದೂರು ನೀಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಧರಣಿ ನಡೆಸಿದ ಘಟನೆ ಜು.03 ರಂದು ಪೆರುವಾಜೆ ಸರಕಾರಿ ಕಾಲೇಜಿನಲ್ಲಿ ನಡೆದಿದೆ.


ವಾಣಿಜ್ಯ ವಿಭಾಗದ ಉಪನ್ಯಾಸಕಿ ಸುನಿತಾ ಎಂಬವರು ಎಂ.ಕಾಂ. ವಿದ್ಯಾರ್ಥಿ ದೀಕ್ಷೀತ್ ಎಂಬಾತನ ವಿರುದ್ಧ ಪೊಲೀಸ್ ಠಾಣೆಗೆ ಸುಳ್ಳು ದೂರು ನೀಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ಪ್ರವೇಶ ದ್ವಾರದ ಬಳಿ ಧರಣಿ ನಡೆಸಿ ಉಪನ್ಯಾಸಕಿ ವಿರುದ್ಧ ಘೋಷಣೆ ಕೂಗಿ, ಮೇಲಾಧಿಕಾರಿಗಳು ಬರುವಂತೆ ಪಟ್ಟು ಹಿಡಿದಿದ್ದು, ಮೇಲಾಧಿಕಾರಿಗಳು ಬಂದು ಕ್ರಮ ಕೈಗೊಳ್ಳುವ ವರೆಗೆ ಅನಿರ್ದಿಷ್ಟಾವಧಿ ಧರಣಿ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ವಿದ್ಯಾರ್ಥಿಗಳು ಕಾಲೇಜು ಪ್ರಾಂಶುಪಾಲರಿಗೂ ಮನವಿ ಸಲ್ಲಿಸಿದ್ದಾರೆ ಎಂದು ವಿದ್ಯಾರ್ಥಿ ಪ್ರಮುಖರು ತಿಳಿಸಿದ್ದಾರೆ. ಕೆಲ ವಿದ್ಯಾರ್ಥಿಗಳು ತರಗತಿ ಪರೀಕ್ಷೆಯನ್ನೂ ಬಹಿಷ್ಕರಿಸಿ ಧರಣಿಯಲ್ಲಿ ಭಾಗವಹಿಸಿದ್ದರು.

ನನ್ನ ವಿರುದ್ಧ ಸುಳ್ಳು ದೂರು


“ನನ್ನ ಬಗ್ಗೆ ವಿದ್ಯಾರ್ಥಿ ದೀಕ್ಷಿತ್ ಎಂಬಾತ ಸುಳ್ಳು ದೂರು ನೀಡಿದ್ದಾನೆ. ಅಲ್ಲದೆ ನನ್ನ ಚಲನ ವಲನಗಳನ್ನು ಗಮಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ನಾನು ಪೊಲೀಸ್ ದೂರು ನೀಡಿದ್ದೇನೆ” ಎಂದು ಉಪನ್ಯಾಸಕಿ ಸುನೀತಾ ತಿಳಿಸಿದ್ದಾರೆ.